ರಾಯಚೂರು : ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವಾಹನಕ್ಕೆ ಕಪ್ಪು ಮತ್ತು ಕೇಸರಿ ಬಣ್ಣ ಬಳಿದು ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದಾರೆ. ಜಿಲ್ಲೆಯ ಲಿಂಗಸುಗೂರು ಸಾರಿಗೆ ಘಟಕದಿಂದ ಮಹಾರಾಷ್ಟ್ರದ ಪುಣೆಗೆ ತೆರಳಿದ್ದ ಬಸ್ ಮೇಲಿನ ಕನ್ನಡ ಅಕ್ಷರಗಳ ಮೇಲೆ ಕಪ್ಪು ಮಸಿ ಬಳಿದಿದ್ದಾರೆ. ಜತೆಗೆ ಶಿವಸೇನೆ ಹೆಸರು ಬರೆದು, ಕೇಸರಿ ಧ್ವಜ ಇಳಿಸಿ ಕನ್ನಡಿಗರ ಮತ್ತು ಕನ್ನಡ ನಾಡಿನ ಬಗ್ಗೆ ಅವಹೇಳನಕಾರಿ ಘೋಷಣೆ ಕೂಗಿದ್ದಾರೆ.
ಶುಕ್ರವಾರ ಲಿಂಗಸುಗೂರಿನಿಂದ ತೆರಳಿದ್ದ ಬಸ್ ಶನಿವಾರ ಪುಣೆ ತಲುಪಿತ್ತು. ವಾಹನ ನಿಲುಗಡೆ ಸ್ಥಳಕ್ಕೆ ನುಗ್ಗಿದ ನೂರಾರು ಯುವಕರು ಕರ್ನಾಟಕದ ವಾಹನಗಳನ್ನು ವಿರೂಪಗೊಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಚಾಲಕ, ನಿರ್ವಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಿಂಗಸುಗೂರು ಸಾರಿಗೆ ಘಟಕದ ವ್ಯವಸ್ಥಾಪಕ ಆದಪ್ಪ ಕುಂಬಾರ ಮಾತನಾಡಿ, ಪುಣೆಗೆ ಹೋಗಿದ್ದ ಬಸ್ನ ವಿರೂಪಗೊಳಿಸಿದ್ದು ನಿಜ. ಆದರೆ, ಯಾವುದೇ ಹಾನಿಯಾಗಿಲ್ಲ. ಚಾಲಕ ಹಾಗೂ ನಿರ್ವಾಹಕ ಸುರಕ್ಷಿತವಾಗಿ ಬಂದು ತಲುಪಿದ್ದಾರೆ. ವಾತಾವರಣ ತಿಳಿಗೊಳ್ಳುವವರೆಗೆ ಮಹಾರಾಷ್ಟ್ರಕ್ಕೆ ಯಾವುದೇ ಬಸ್ ಓಡಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ ಸಂಜೆಯೊಳಗೆ ಎಂಇಎಸ್ ಸಂಘಟನೆ ನಿಷೇಧಕ್ಕೆ ಸರ್ಕಾರಕ್ಕೆ ಗಡುವು ನೀಡಿದ ಕನ್ನಡಪರ ಸಂಘಟನೆಗಳು