ETV Bharat / state

ಬಡತನ ರೇಖೆ ಆಧರಿಸಿ ಜನಗಣತಿ ಮಾಡಿದರೆ ಒಳ್ಳೆಯದು: ರಂಭಾಪುರಿ ಶ್ರೀ

author img

By ETV Bharat Karnataka Team

Published : Oct 15, 2023, 8:12 PM IST

ಜಾತಿ ಆಧಾರಿತ ಜನಗಣತಿ ಸಮಾಜದಲ್ಲಿ ಸಂಘರ್ಷಕ್ಕೆ ಅನುವು ಮಾಡಿಕೊಡುತ್ತದೆ ಎಂದು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

Shivacharya Shri of Rambhapur Math spoke to the reporters.
ರಂಭಾಪುರ ಮಠದ ಶಿವಾಚಾರ್ಯ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಯಚೂರು: ಜಾತಿ, ಜಾತಿಗಳ ಮಧ್ಯೆ ಸಾಮರಸ್ಯ ಮೂಡಿಸುವ ಕೆಲಸವಾಗಬೇಕೇ ಹೊರತು ಸಮಾಜ ವಿಘಟನೆ ಮಾಡುವ ಕೆಲಸಕ್ಕೆ ಕೈ ಹಾಕಬಾರದು ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆೆ ನೀಡಿದರು. ಲಿಂಗಸುಗೂರು ಪಟ್ಟಣದಲ್ಲಿ ಇಂದು ನಡೆದ ದಸರಾ ಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ರಾಜಕೀಯ ಯಾವ ರೀತಿ ನಡೆಯುತ್ತಿದೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ರಾಜಕಾರಣಿಗಳು ಅಧಿಕಾರ, ಅಂತಸ್ತು ಗಳಿಸುವುದಕ್ಕಾಗಿ ಸಮಾಜದಲ್ಲಿ ಸಂಘರ್ಷ, ಹೋರಾಟಗಳನ್ನು ಹುಟ್ಟು ಹಾಕುವುದನ್ನು ಕಾಣುತ್ತಿದ್ದೇವೆ ಎಂದರು.

ವೀರಶೈವ ಪಂಚಪೀಠಗಳಿಂದ ಶಾಂತಿ ಸಂದೇಶ: ಸರ್ವಜನಾಂಗದ ಶಾಂತಿಯ ತೋಟವೆಂದು ಡಾ.ಕುವೆಂಪು ಹೇಳಿದ್ದಾರೆ. ಆದರೆ ಈ ನಾಡಿನಲ್ಲಿ ಎಲ್ಲ ವರ್ಗಗಳ ಜನ, ಸಮುದಾಯದವರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಪುರಾತನ ಸನಾತನವಾದ ಧರ್ಮಪೀಠಗಳು ಯಾವಾಗಲೂ ಜಾತಿ, ಮತ, ಪಂಥ ಗಡಿ ಮೀರಿ ಎಲ್ಲರಿಗೂ ಸಮನ್ವತೆಯ ಶಾಂತಿ ಸಂದೇಶಗಳನ್ನು ನೀಡುತ್ತಾ ಬಂದಿವೆ, ಮುಂದೆಯೂ ನೀಡಲಿವೆ ಎಂದು ಹೇಳಿದರು.

ಜನಗಣತಿ ಮೂಲಕ ಜನರ ಗಮನವನ್ನು ತಮ್ಮೆಡೆಗೆ ಸೆಳೆಯಬೇಕೆಂದು ಕೆಲವರಿಗೆ ಆತುರತೆ ಇರಬಹುದು. ಈಗಲೇ ಜಾತಿ, ಜಾತಿಗಳ ವರ್ಗೀಕರಣ ಅತಿಯಾಗಿದ್ದು ಪರಸ್ಪರ ಸಂಘರ್ಷಕ್ಕೆ ಅವಕಾಶ ಮಾಡಿಕೊಡುತ್ತಿದೆ. ಯಾವುದೇ ವರ್ಗದ ಜನರೇ ಇರಲಿ. ಆರ್ಥಿಕವಾಗಿ ದುರ್ಬಲವಾದವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಆದರೆ ಜಾತಿಯನ್ನು ಆಧಾರವಾಗಿಟ್ಟುಕೊಂಡು ಜಾತಿ ಗಣತಿ ಮಾಡಿದ್ದಾದರೆ, ಬಹಳಷ್ಟು ತೊಂದರೆ ಆಗುವುದರಲ್ಲಿ ಸಂಶಯವಿಲ್ಲ. ಜಾತಿ ಆಧಾರ ಕೈಬಿಟ್ಟು ಬಡತನ ರೇಖೆಯನ್ನು ಆಧರಿಸಿ ಜನಗಣತಿ ಮಾಡಿದರೆ ಎಲ್ಲ ಜನರಿಗೆ ಒಳ್ಳೆಯದಾಗಲಿದೆ. ಇದರಿಂದ ಸಂಘರ್ಷ ಕೊನೆಗೊಳ್ಳುತ್ತದೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು.

ಆದರೆ ಇಂಥ ವಿಷಯ ರಾಜಕಾರಣಿಗಳ ಮನಸ್ಸಿಗೆ ಹಿಡಿಸುವುದಿಲ್ಲ. ಅಧಿಕಾರ ಹಿಡಿಯುವುದಕ್ಕಾಗಿ ಯಾವ ಮಾರ್ಗಗಳನ್ನಾದರೂ ಹಿಡಿಯುವ ಚಾತುರ್ಯತೆ ಅವರಲ್ಲಿ ಕಂಡುಬರುತ್ತಿದೆ. ಅಧಿಕಾರವಷ್ಟೇ ಮುಖ್ಯವಾಗಿರಬಾರದು. ದೇಶದ ಸಮಗ್ರತೆ, ಧರ್ಮ, ಜಾತಿ ಜಾತಿ ಸಾಮರಸ್ಯದ ಕೊಂಡಿಯನ್ನು ಭದ್ರಪಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಪರಂಪರೆಯ ವಿಕಾಸಗೊಳಿಸುವ ಕೆಲಸ ಬೇಡ: ಮಹಿಷಾ ದಸರಾ ಆಚರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಧಿಕಾರ ಹಿಡಿದವರು ಯೋಚನೆ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬರೊಬ್ಬರದು ಒಂದೊಂದು ವಿಚಾರವಿರುತ್ತದೆ. ಗೊಂದಲ ಹುಟ್ಟುಹಾಕುವ ಕೆಲಸ ಮಾಡುವುದು ಸರಿಯಲ್ಲ. ಮೈಸೂರು ದಸರಾ ಆಚರಣೆಗೆ ತನ್ನದೇ ಆದ ಪರಂಪರೆಯಿದ್ದು ಅದನ್ನು ವಿಕಾರಗೊಳಿಸುವ ಕೆಲಸ‌ ಮಾಡಬಾರದು ಎಂದು ತಿಳಿಸಿದರು.

ಇದನ್ನೂಓದಿ: ಮಂಗಳೂರು ದಸರಾ: ಶ್ರೀಕ್ಷೇತ್ರ‌ ಕುದ್ರೋಳಿಯಲ್ಲಿ ನವದುರ್ಗೆಯರ ಪ್ರತಿಷ್ಠಾಪನೆ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.