ETV Bharat / state

ಮೈಸೂರು ದಸರಾ: ರಾಷ್ಟ್ರೀಯ ಭಾವೈಕ್ಯತೆ, ಕನ್ನಡ ವೈಭವಕ್ಕೆ ಸಾಕ್ಷಿಯಾದ 'ಯುವ ಸಂಭ್ರಮ'

author img

By ETV Bharat Karnataka Team

Published : Oct 13, 2023, 10:30 PM IST

ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಕೊನೆಯ ದಿನದ ಯುವ ಸಂಭ್ರಮ ರಾಷ್ಟ್ರೀಯ ಭಾವೈಕ್ಯತೆಗೆ ಸಾಕ್ಷಿಯಾಯಿತು.

ಮಾನಸಗಂಗೋತ್ರಿಯ ಬಯಲು ರಂಗಮಂದಿರ
ಮಾನಸಗಂಗೋತ್ರಿಯ ಬಯಲು ರಂಗಮಂದಿರ

ಮೈಸೂರು :‌ ಸಂವಿಧಾನದ ಮಹತ್ವ, ದೇಶ ಯೋಧರ ಕೆಚ್ಚೆದೆಯ ಹೋರಾಟ, ರಾಷ್ಟ್ರೀಯ ಭಾವೈಕ್ಯತೆ, ಕನ್ನಡ ವೈಭವ ದಸರಾ ಮಹೋತ್ಸವದ ಆಕರ್ಷಣೆಯ ಕೇಂದ್ರವಾದ ಯುವ ಸಂಭ್ರಮದಲ್ಲಿ ಮೇಳೈಸಿತು. ಅಂಬೇಡ್ಕರ್ ಅವರ ಹೋರಾಟದ ಬದುಕು, ಭಗತ್ ಸಿಂಗ್ ಹಾಗೂ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರ್ನಾಟಕದ ಏಕೀಕರಣದ ಬಗ್ಗೆ ಮೈಸೂರಿನ ಕೌಟಿಲ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಅಮೋಘ ನೃತ್ಯದ ಮೂಲಕ ಪ್ರಸ್ತುತಪಡಿಸಿದರು.

ಯುವ ಸಂಭ್ರಮ ಕಾರ್ಯಕ್ರಮದಲ್ಲಿ ನೃತ್ಯ ಸಂಭ್ರಮ
'ಯುವ ಸಂಭ್ರಮ' ಕಾರ್ಯಕ್ರಮ

ಕೊಡಗಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶಕ್ಕೆ ರಕ್ಷಾಕವಚವಾಗಿರುವ ಯೋಧರ ಸಾಹಸ ಮತ್ತು ನಿಸ್ವಾರ್ಥ ಸೇವೆಯ ಬಗ್ಗೆ ಜೇಮ್ಸ್ ಚಿತ್ರದ ಸಲಾಂ ಸೋಲ್ಜರ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಯೋಧರ ತ್ಯಾಗವನ್ನು ಯುವ ಸಮೂಹಕ್ಕೆ ತಿಳಿಸಿದರು.

ಬೆಂಗಳೂರಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಆ್ಯಂಡ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಕನ್ನಡಿಗರ ಸಾಹಸ, ಶೌರ್ಯ ಹಾಗೂ ವೈಭವವನ್ನು ಸಿಂಹಾದ್ರಿಯ ಸಿಂಹ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದರೆ, ರಾಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹಿಳಾ ಸಬಲೀಕರಣ ಸಂದೇಶ ಪ್ರದರ್ಶಿಸಿದರು.

ಬೆಂಗಳೂರಿನ ಶ್ರೀ ದಕ್ಷ ಅಕಾಡೆಮಿ ಹಾಗೂ ಬಳ್ಳಾರಿ ಎಸ್.ಜಿ.ಟಿ ಕಾಲೇಜಿನ ವಿದ್ಯಾರ್ಥಿಗಳ ಸಮೂಹವು ಚೆಲ್ಲಿದರೂ ಮಲ್ಲಿಗೆಯಾ ಹಾಗು ಜೋಗಿ ಚಿತ್ರದ ಹಾಡಿಗೆ ಕುಣಿಯುವುದರ ಮೂಲಕ ಕರ್ನಾಟಕದ ಜನಪದ ಪರಂಪರೆ ಹಾಗೂ ದೇಶೀಯ ಸಂಸ್ಕೃತಿಯನ್ನು ನೃತ್ಯದ ಮೂಲಕ ಹೇಳಿ ಯುವ ಸಮೂಹ ಕುಣಿಯುವಂತೆ ಮಾಡಿದರು.

ಹೊಳೆನರಸೀಪುರದ ಹೊಸ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾರಮ್ಮ ಮತ್ತು ಮಾದಪ್ಪ ಬಗ್ಗೆ ಕಂಸಾಳೆ ನೃತ್ಯದ ಮೂಲಕ ರಂಜಿಸಿದರು. ಮೈಸೂರಿನ ಮಾತೃಮಂಡಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಗ್ರಪೂಜಿತ ಗಣೇಶನನ್ನು ಸ್ಮರಣೆ ಮಾಡುತ್ತ ಅಗ್ನಿಪತ್ ಚಿತ್ರದ 'ದೇವಾ ಶ್ರೀ ಗಣೇಶ' ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದರು.

ಗುಂಡ್ಲುಪೇಟೆಯ ಬೇಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಕೆಚ್ಚೆದೆಯ ಕನ್ನಡಿಗರ ಮಿಂಚಿನ ದಸರಾ ಸಂಭ್ರಮೋತ್ಸವವನ್ನು ಪಲ್ಲಕ್ಕಿ ಹಾಗೂ ವೀರಕನ್ನಡಿಗ ಚಿತ್ರದ ಹಾಡುಗಳಿಗೆ ಪುನೀತ್ ರಾಜ್​ಕುಮಾರ್ ಭಾವಚಿತ್ರ ಹಿಡಿದು ತಮ್ಮ ಅಮೋಘ ನೃತ್ಯ ಮಾಡಿದರು.

ಮಾನಸಗಂಗೋತ್ರಿಯ ಬಯಲು ರಂಗಮಂದಿರ
'ಯುವ ಸಂಭ್ರಮ' ಕಾರ್ಯಕ್ರಮ

ವೀರ ಕನ್ನಡಿಗ ಚಿತ್ರದ ಜೀವ ಕನ್ನಡ ದೇಹ ಕನ್ನಡ, ಮಲ್ಲ ಚಿತ್ರದ ಕರುನಾಡೆ ಕೈ ಚಾಚಿದೆ ನೋಡೆ ಹಾಗೂ ಸಮರ ಚಿತ್ರದ ಕನ್ನಡದ ಮಾತು ಚೆನ್ನ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡ ನಾಡಿನ ಸಂಭ್ರಮವನ್ನು ತೋರಿಸಿದ ಮೈಸೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಯುವ ಸಮೂಹ ಹೆಜ್ಜೆ ಹಾಕುವಂತೆ ಮಾಡಿದರು.

ಮೈಸೂರಿನ ಬೆಟ್ಟದಪುರದ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರ ರಕ್ಷಣೆ ಮಾಡುತ್ತಿರುವ ದೇಶದ ಹೆಮ್ಮೆ ಯೋಧರ ಬಗ್ಗೆ ಕೆ.ಜಿ.ಎಫ್ ಹಾಗೂ ಜೆಮ್ಸ್ ಚಿತ್ರದ ಹಾಡುಗಳಿಗೆ ಮನೋಜ್ಞ ನೃತ್ಯದ ಮೂಲಕ ರಂಜಿಸಿದರು.

ರಾಮನಗರದ ಜ್ಞಾನವಿಕಾಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ ಸ್ಟಡೀಸ್ ಮತ್ತು ಕಾಮಸ್೯ ಕಾಲೇಜಿನ ವಿದ್ಯಾರ್ಥಿಗಳು ಸಂಗೊಳ್ಳಿ ರಾಯಣ್ಣನ ಸಾಹಸ ಮತ್ತು ಹೋರಾಟದ ಕುರಿತ ನೃತ್ಯ ಮಾಡಿದರು.

ಕವಿರತ್ನ ಕಾಳಿದಾಸ ಚಿತ್ರದ ಹಾಡಿನೊಂದಿಗೆ ಬಂದ ಬೆಂಗಳೂರಿನ ಶಾಂತಿಧಾಮ ಕಾಲೇಜಿನ ವಿದ್ಯಾರ್ಥಿಗಳು ನವದುರ್ಗೆಯರ ದರ್ಶನದ ಮೂಲಕ ಸಭಿಕರನ್ನು ಭಕ್ತಿಯ ಕಡಲಲ್ಲಿ ತೇಲುವಂತೆ ನರ್ತಿಸಿದರೆ, ಬೆಂಗಳೂರಿನ ಆಕ್ಸ್ ಬ್ರಿಡ್ಜ್ ಬಿಜಿನೆಸ್ ಶಾಲೆಯ ವಿದ್ಯಾರ್ಥಿಗಳ ತಂಡವು ನಾನಿ ಚಿತ್ರದ ಗೀತೆಗೆ ನಯನ ಮನೋಹರವಾಗಿ ಹೆಜ್ಜೆ ಹಾಕಿದರು.

ಮೈಸೂರಿನ ಜೆ.ಎಸ್.ಎಸ್ ವಾಕ್ ಶ್ರವಣ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಇತ್ತೀಚೆಗೆ ಯುವ ಸಮೂಹ ಪಾಲ್ಗೊಂಡು ಸಾಧನೆ ಮಾಡುತ್ತಿರುವ ಬಗ್ಗೆ ಹೆಜ್ಜೆ ಹಾಕಿ ಕ್ರೀಡೆಯ ಬಗ್ಗೆ ಅರಿವು ಮೂಡಿಸಿದರು. ಮೈಸೂರಿನ ಮಿಮಿಕ್ರಿ ಶ್ಯಾಂ ಅವರು ಪುನೀತ್ ರಾಜ್​ಕುಮಾರ್, ದರ್ಶನ್ ಹಾಗೂ ಶಿವರಾಜ್ ಕುಮಾರ್ ಅವರ ಮಿಮಿಕ್ರಿ ಮಾಡುವುದರ ಮೂಲಕ ಮನರಂಜನೆ ಒದಗಿಸಿದರು.

ಇದನ್ನೂ ಓದಿ: ಮೈಸೂರು ದಸರಾ ಉತ್ಸವ: ಪ್ರಮೋದಾದೇವಿ ಒಡೆಯರ್​ಗೆ ಸರ್ಕಾರದಿಂದ ಅಧಿಕೃತ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.