ಮೈಸೂರು: ಆರ್ಎಸ್ಎಸ್ ಚಡ್ಡಿ ಸುಟ್ಟಿರುವುದಕ್ಕೆ ಬಿಜೆಪಿಯ ಬುಡಕ್ಕೆ ಯಾಕೆ ಬೆಂಕಿ ಬಿದ್ದಿದೆಯೋ ಗೊತ್ತಾಗುತ್ತಿಲ್ಲ. ಬಿಜೆಪಿಯವರು ಬಳಸಿದ ಚಡ್ಡಿಗಳನ್ನು ಕೆಪಿಸಿಸಿ ಕಚೇರಿಗೆ ಕಳುಹಿಸುತ್ತಿದ್ದು, ಅವುಗಳನ್ನು ನಾವು ಇಟ್ಟುಕೊಳ್ಳುವುದಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ರವಾನಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರರಾದ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಆರ್ಎಸ್ಎಸ್ ಚಡ್ಡಿ ಎಂದರೆ ಖಾಕಿ ಚಡ್ಡಿ. ಆದರೆ, ಬಿಜೆಪಿಯವರು ಮನೆ-ಮನೆಗೆ ಹೋಗಿ ಬಳಸಿದ ಬಣ್ಣ-ಬಣ್ಣದ ಚಡ್ಡಿ ಸಂಗ್ರಹಿಸಿ, ಕೆಪಿಸಿಸಿ ಕಚೇರಿಗೆ ಕಳುಹಿಸುತ್ತಿದ್ದಾರೆ. ಅವರಿಗೆ ಎಷ್ಟು ಸಾಧ್ಯವೋ, ಅಷ್ಟು ಚಡ್ಡಿಗಳನ್ನು ಸಂಗ್ರಹಿಸಿ ಕಳುಹಿಸಲಿ. ನಾವು ಅವುಗಳನ್ನು ಮೋದಿಯವರಿಗೆ ಕಳುಹಿಸುತ್ತೇವೆ ಎಂದು ಲೇವಡಿ ಮಾಡಿದರು.
ಚಡ್ಡಿ ಸಂಗ್ರಹ ಅಭಿಯಾನವನ್ನು ಬೀದರ್ನಿಂದ ಚಾಮರಾಜನಗರದವರೆಗೂ ನಡೆಸಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಆ ಪಕ್ಷದ ನಾಯಕರೆಲ್ಲರೂ ಪಾಲ್ಗೊಳ್ಳಲಿ. ಬಿಜೆಪಿಯುವರು ಅಧಿಕೃತವಾಗಿಯೇ ಆ ಕಾರ್ಯಕ್ರಮ ಮಾಡಲಿ. ಆದರೆ, ಚಡ್ಡಿ ಹೊರುವ ಕಾರ್ಯವನ್ನು ಬಿಜೆಪಿಯವರು ಪರಿಶಿಷ್ಟ ಮೋರ್ಚಾದವರಿಂದಲೇ ನಡೆಸಿದ್ದೇಕೆ?. ಪರಿಶಿಷ್ಟರ ಅನುದಾನ ಬಳಸದಿದ್ದಾಗ, ಅವರ ಅನುಕೂಲಕ್ಕೆ ಜಾರಿಗೊಳಿಸಿದ್ದ ಯೋಜನೆಗಳನ್ನು ಸ್ಥಗಿತಗೊಳಿಸಿದಾಗ ಬಿಜೆಪಿಯವರ ರಕ್ತ ಕುದಿಯಲಿಲ್ಲವೇಕೆ ಎಂದು ಪ್ರಶ್ನಿಸಿದರು.
ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: ಪಠ್ಯ ಪುಸ್ತಕದಲ್ಲಿ ಸುಳ್ಳುಗಳನ್ನು ಹೇಳಿ ತಮ್ಮ ವಿಚಾರಗಳನ್ನು ತುಂಬಿ ಶಾಲಾ ಹಂತದಿಂದಲೇ ಕೇಡರ್ ತಯಾರಿಸುವುದಕ್ಕೆ ಬಿಜೆಪಿ ಮುಂದಾಗಿದೆ. ಮುಖ್ಯಮಂತ್ರಿಯವರೇ ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ರೋಹಿತ್ ಚಕ್ರತೀರ್ಥ ಸಮಿತಿಯ ಪುಸ್ತಕಗಳನ್ನು ವಾಪಸ್ ಪಡೆದು ಹಳೆ ಪುಸ್ತಕಗಳನ್ನು ಮಕ್ಕಳಿಗೆ ಕೊಡಬೇಕು. ಪಠ್ಯಪುಸ್ತಕ ಪರಿಷ್ಕರಣೆಗೆ ನಮ್ಮ ವಿರೋಧವಿಲ್ಲ. ಕಾಲ-ಕಾಲಕ್ಕೆ ಅದು ನಡೆಯಬೇಕು. ಆದರೆ ಅದಕ್ಕೆ ಒಳ್ಳೆಯ ಸಮಿತಿ ರಚಿಸಬೇಕು. ಅದು ಬಿಟ್ಟು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದು ಪ್ರಿಯಾಂಕ್ ತಿಳಿಸಿದರು.
ಬಿಜೆಪಿಯವರಿಗೆ ಅಷ್ಟೊಂದು ಪ್ರೇಮವಿದ್ದರೆ, ಆರ್ಎಸ್ಎಸ್ ಬಗ್ಗೆ ಪ್ರತ್ಯೇಕ ಪಠ್ಯ ಪುಸ್ತಕವನ್ನೇ ಮಾಡಲಿ, ಆದರೆ ಅದರಲ್ಲಿ ವಾಸ್ತವಾಂಶ ಹಾಗೂ ಸತ್ಯವನ್ನು ತಿಳಿಸಲಿ. ದೇಶದ್ರೋಹಿಗಳು ಕಾಂಗ್ರೆಸ್ನವರೋ, ಬಿಜೆಪಿಯವರೋ ಎನ್ನುವುದು ಜನರಿಗೆ ತಿಳಿಯಲಿ. ಪಠ್ಯ ಪುಸ್ತಕಗಳ ಮೂಲಕ ಮನುಸ್ಮೃತಿ ಜಾರಿಗೆ ನಮ್ಮ ವಿರೋಧವಿದೆ. ವೈಜ್ಞಾನಿಕ ಮನೋಭಾವಗಳನ್ನು ನಾಶಗೊಳಿಸುವುದು ಸರಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಜೂ.13 ರಂದು ದೇಶಾದ್ಯಂತ ಜಾರಿ ನಿರ್ದೇಶನಾಲಯ ಕಚೇರಿ ಎದುರು ಕಾಂಗ್ರೆಸ್ನಿಂದ ಪ್ರತಿಭಟನೆ