ETV Bharat / state

ಮೈಸೂರು ಚರ್ಚ್‌ ಕಳ್ಳತನ ಪ್ರಕರಣದ ಆರೋಪಿ ಸೆರೆ; ಕೃತ್ಯ ಎಸಗಿದ್ದು ಈ ಕಾರಣಕ್ಕೆ!

author img

By

Published : Jan 3, 2023, 10:08 AM IST

Updated : Jan 3, 2023, 11:06 AM IST

ಮೈಸೂರಿನ ಪಿರಿಯಾಪಟ್ಟಣದ ಸೇಂಟ್ ಮೇರಿಸ್ ಚರ್ಚ್​ನಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

A news conference was held by SP Seema.
ಎಸ್ ಪಿ ಸೀಮಾ ಅವರಿಂದ ಸುದ್ದಿ ಗೋಷ್ಠಿ ನಡೆದಿರುವುದು.

ಮೈಸೂರು : ಪಿರಿಯಾಪಟ್ಟಣದ ಸೇಂಟ್ ಮೇರಿಸ್ ಚರ್ಚ್‌ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್‌ನ ಪೌರ ಕಾರ್ಮಿಕನನ್ನು ಬಂಧಿಸಲಾಗಿದೆ. ಮೈಸೂರು ಎಸ್‌ಪಿ ಸೀಮಾ ಲಾಟ್ಕರ್ ಮಾತನಾಡಿ, 'ಕಳ್ಳತನ ನಡೆದ ಸ್ಥಳದಲ್ಲಿ ಬ್ಲೂ ಕಲರ್ ಹ್ಯಾಂಡ್ ಗ್ಲೌಸ್ ಸಿಕ್ಕಿತ್ತು. ಇದರ ಆಧಾರದಲ್ಲಿ ಚರ್ಚ್‌ನಲ್ಲಿಯೇ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಿಶ್ವ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಲಾಗಿದೆ' ಎಂದು ಮಾಹಿತಿ ನೀಡಿದರು.

ಸಂಬಳ ನೀಡದ್ದಕ್ಕೆ ಕೃತ್ಯ: 'ಪಿರಿಯಾಪಟ್ಟಣದ ಮಹದೇಶ್ವರ ಬಡಾವಣೆಯ ನಿವಾಸಿ ವಿಶ್ವ ಚರ್ಚ್‌ನಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಎರಡು ತಿಂಗಳಿನಿಂದ ಸಂಬಳ ನೀಡಿರಲಿಲ್ಲ. ಈ ಬಗ್ಗೆ ಕ್ರಿಸ್ಮಸ್ ಸಂದರ್ಭದಲ್ಲಿ ಫಾದರ್ ಜೊತೆ ಚರ್ಚಿಸಲು ಬಂದಿದ್ದಾಗ ಅವರು ಭೇಟಿ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಸಿಟ್ಟಿಗೆದ್ದು ಫಾದರ್ ಇಲ್ಲದ ವೇಳೆ ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್‌ನ ಮೂರು ಹುಂಡಿ ಕಳ್ಳತನ ಮಾಡಿದ್ದಾನೆ. ಹುಂಡಿಗಳಿಂದ ಎರಡು ಸಾವಿರ ರೂ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ' ಎಂದು ಎಸ್‌ಪಿ ವಿವರಿಸಿದರು.

ಧಾರ್ಮಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿ: 'ಚರ್ಚ್‌ನಲ್ಲಿ ಕಳ್ಳತನ ಮಾಡಲು ಬಂದ ವಿಶ್ವ ಮೂರು ಹುಂಡಿಗಳನ್ನು ಕಳ್ಳತನ ಮಾಡಿದ್ದ. ನಂತರ ಟೇಬಲ್ ಮೇಲೆ ಬಾಲ ಯೇಸುವಿನ ಮೂರ್ತಿ ಇಡಲಾಗಿತ್ತು. ಈ ಮೂರ್ತಿಯ ಕೆಳಗೆ ಹಣ ಇದೆ ಎಂದು ಭಾವಿಸಿ ಟೇಬಲ್‌ನ ಬಟ್ಟೆ ಎಳೆದಿದ್ದಾನೆ. ಆ ಸಂದರ್ಭದಲ್ಲಿ ಮೂರ್ತಿ ಕೆಳಗೆ ಬಿದ್ದು ಒಡೆದು ಹೋಗಿತ್ತು. ವಿಶ್ವನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

'ಸೇಂಟ್ ಮೇರಿಸ್ ಚರ್ಚ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಹೀಗಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಲಾಗಿದೆ' ಎಂದು ಎಸ್‌ಪಿ ಹೇಳಿದರು.

ಚರ್ಚ್​ನಲ್ಲಿ ನಡೆದಿದ್ದೇನು?: ಚರ್ಚ್​ ಅನ್ನು ಕ್ರಿಸ್​ಮಸ್​ ಅಂಗವಾಗಿ ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿತ್ತು. ಮುಂಭಾಗದಲ್ಲಿ ಬಾಲ ಯೇಸುವಿನ ಪ್ರತಿಮೆ ಸ್ಥಾಪನೆ ಮಾಡಲಾಗಿತ್ತು. ಸಾರ್ವಜನಿಕರಿಗೆ ಚರ್ಚ್​ ಪ್ರವೇಶಿಸಲು ಅವಕಾಶವಿತ್ತು. ಈ ಸಂದರ್ಭದಲ್ಲಿ ಅಲ್ಲಿನ ಫಾದರ್​ ರಜೆ ಮೇಲಿದ್ದು ಮೈಸೂರಿಗೆ ಹೋಗಿದ್ದರು. ಫಾದರ್​ ಚರ್ಚ್​ಗೆ ಮರಳಿ ಬಂದು ನೋಡಿದಾಗ ಬಾಲಯೇಸು ಮೂರ್ತಿ ಒಡೆದಿದ್ದಲ್ಲದೆ, ಚರ್ಚ್​ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುವುದು ಕಂಡುಬಂದಿತ್ತು. ಕೂಡಲೇ ಅವರು ಪಿರಿಯಾಪಟ್ಟಣದ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಪಿರಿಯಾಪಟ್ಟಣ ಸೇಂಟ್​ ಮೇರಿ ಚರ್ಚ್​ ಮೇಲೆ ಕಿಡಿಗೇಡಿಗಳಿಂದ ದಾಳಿ.. ಪೀಠೋಪಕರಣ ಧ್ವಂಸ, ಹಣ ಕಳವು

Last Updated :Jan 3, 2023, 11:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.