ETV Bharat / state

ಅಧಿಕಾರಿಗಳ ನಡುವಿನ ಜಟಾಪಟಿ ತಡೆಯುವಲ್ಲಿ ಸರ್ಕಾರ ವಿಫಲ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

author img

By

Published : Feb 23, 2023, 9:24 PM IST

ಅಧಿಕಾರಿಗಳ ನಡುವಿನ ಜಗಳ ನಿಯಂತ್ರಿಸಲು ಬೊಮ್ಮಾಯಿ ನೇತೃತ್ವದ ಸರ್ಕಾರ ವಿಫಲವಾಗಿದೆ ಮತ್ತು ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದರು.

the-government-has-failed-to-prevent-infighting-among-officers
ಅಧಿಕಾರಿಗಳ ನಡುವಿನ ಜಟಾಪಟಿ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ಮೈಸೂರು: ರಾಜ್ಯದಲ್ಲಿ ಐಎಎಸ್ ಅಧಿಕಾರಿ ಮತ್ತು ಐಪಿಎಸ್ ಅಧಿಕಾರಿಗಳ ನಡುವಿನ ಜಟಾಪಟಿ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗುತ್ತಿದೆ. ಇದರಿಂದ ರಾಜ್ಯ ಕಾನೂನು ಸುವ್ಯವಸ್ಥೆ ಮೇಲೆ ಜನರಿಗೆ ನಂಬಿಕೆ ಹೋಗುತ್ತಿದೆ. ಇದನ್ನು ತಡೆಯುವಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಅವರ ಜಟಾಪಟಿಯನ್ನು ನಿಯಂತ್ರಿಸುವಲ್ಲಿ ರಾಜ್ಯದಲ್ಲಿರುವ ಆಡಳಿತಾರೂಢ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳ ನಡುವಿನ ಜಟಾಪಟಿ ಬಗ್ಗೆ ಸರ್ಕಾರ ನೀರವ ಮೌನ ವಹಿಸಿದೆ. ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು.

ರಾಜ್ಯ ಬಿಜೆಪಿ ರಾಜ್ಯಸಭಾ ಸದಸ್ಯರಾದ ಜಗ್ಗೇಶ್, ಪ್ರಧಾನಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರಿಗಳ ನಡುವಿನ ಜಟಾಪಟಿ ಬಗೆಹರಿಸಲು ಪತ್ರ ಬರೆದಿದ್ದಾರೆ. ಅದರ ಅರ್ಥ ಇಲ್ಲಿನ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪೂರ್ಣ ವಿಫಲವಾಗಿದೆ. ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಮೇಲೆ ಅವರಿಗೆ ನಂಬಿಕೆ ಇಲ್ಲದೆ, ನೇರ ಪ್ರಧಾನಿ ಮೋದಿಯವರಿಗೆ ಈ ಸಮಸ್ಯೆ ಬಗೆಹರಿಸಲು ಪತ್ರ ಬರೆದಿದ್ದಾರೆ. ಅಧಿಕಾರಿಗಳ ಜಗಳ ನಿಯಂತ್ರಿಸಲು ಸಾಧ್ಯವಿಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಬಿಜೆಪಿ ರೌಡಿ ಮೋರ್ಚಾ: ಈಗ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವು ಅನೇಕ ಪೊಲೀಸ್ ಸ್ಟೇಶನ್​ಗಳಲಿದ್ದ ಹಲವು ರೌಡಿ ಶೀಟರ್​ಗಳನ್ನು ಪಟ್ಟಿಯಿಂದ ತೆಗೆದು ಹಾಕಿದ್ದಾರೆ ಮತ್ತು ಅಂತವರಿಗೆ ಬಿಜೆಪಿ ಪಕ್ಷದಲ್ಲಿ 10 ಜನರಿಗೆ ಎಂಎಲ್​ಎ ಟಿಕೆಟ್​ ಮತ್ತು ಕೆಲವರಿಗೆ ಬಿಬಿಎಂಪಿ ಟಿಕೆಟ್ ನೀಡಿದ್ದು, ಸೈಲೆಂಟ್ ಸುನಿಲ್, ಬೆತ್ತನಗೆರೆ ಶಂಕರ, ಸೈಕಲ್ ರವಿ ಸೇರಿದಂತೆ ಇನ್ನು ಅನೇಕರು ಬಿಜೆಪಿ ರೌಡಿ ಮೋರ್ಚಾದಲ್ಲಿ ಸ್ಥಾನ ಪಡೆದಿದ್ದಾರೆ. ಸುಮಾರು 1036 ಕೊಲೆ ಪ್ರಕರಣ, 423 ಅತ್ಯಾಚಾರ ಪ್ರಕರಣ, 3017 ಗುಂಪು ಘರ್ಷಣೆ ಪ್ರಕರಣವನ್ನು ತೆಗೆದು ಹಾಕಿದ್ದಾರೆ. ಇವರೇ ಮುಂದೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಎಂದು ಟೀಕಿಸಿದರು.

ಸಿ.ಟಿ.ರವಿಯವರು ಭಟ್ಕಳ ಶಾಸಕ ಸುನಿಲ್ ನಾಯಕ್ ಅವರ ಮನೆಯಲ್ಲಿ ಮಾಂಸಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗಿದ್ದಾರೆ. ಆದರೆ ದೇವಸ್ಥಾನದ ಒಳಗಡೆ ಹೋಗಿಲ್ಲ ಎಂದು ಸುಳ್ಳು ಹೇಳುತ್ತಾರೆ. ನನ್ನ ಹತ್ತಿರ ಫೋಟೊ ಸಮೇತ ಸಾಕ್ಷಿ ಇದೆ. ನೀವು ದೇವಸ್ಥಾನದ ಒಳಗೆ ಹೋಗಿದ್ದೀರಿ. ನಿಮಗೆ ನಾಚಿಕೆಯಾಗಬೇಕು. ಸುಳ್ಳು ಹೇಳುವುದರಲ್ಲಿ ಮೋದಿ ಬಿಟ್ಟರೆ ಸಿಟಿ ರವಿಯವರಿಗೆ ಎರಡನೇ ಸ್ಥಾನ ಎಂದರು.

ಇದನ್ನೂ ಓದಿ: ರಂಗ ಪ್ರವೇಶ ಮಾಡಿದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳು: ರಾತ್ರಿ ಅಮಿತ್ ಶಾ ನೇತೃತ್ವದಲ್ಲಿ ಮಹತ್ವದ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.