ETV Bharat / state

ಮೈಸೂರು ವಿವಿ 103ನೇ ಘಟಿಕೋತ್ಸವ: 32,240 ಅಭ್ಯರ್ಥಿಗಳಿಗೆ ಪದವಿ ಪ್ರದಾನ

author img

By ETV Bharat Karnataka Team

Published : Oct 18, 2023, 4:14 PM IST

ಇಂದು ಮೈಸೂರು ವಿವಿಯ 103ನೇ ಘಟಿಕೋತ್ಸವ ನಡೆಯಿತು. ಇದರಲ್ಲಿ ಒಟ್ಟು 32 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಮೈಸೂರು ವಿವಿ 103ನೇ ಘಟಿಕೋತ್ಸವ
ಮೈಸೂರು ವಿವಿ 103ನೇ ಘಟಿಕೋತ್ಸವ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 103ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ನಾಡೋಜ ಡಾ.ಪಿ.ಎಸ್.ಶಂಕರ್, ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಉಳಿದಂತೆ ಪಿಎಚ್​​ಡಿ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಸೇರಿ ಒಟ್ಟು 32,240 ಅಭ್ಯರ್ಥಿಗಳಿಗೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ಪದವಿಗಳನ್ನು ಪ್ರದಾನ ಮಾಡಿದರು. ಒಟ್ಟು 32,240 ಅಭ್ಯರ್ಥಿಗಳ ಪೈಕಿ 12,051 (ಶೇ.37.37) ಪುರುಷ ಅಭ್ಯರ್ಥಿಗಳಾದರೆ, 20,189 (ಶೆ.62.62) ಮಹಿಳಾ ಅಭ್ಯರ್ಥಿಗಳಿದ್ದರು. ಈ ಬಾರಿ ಘಟಿಕೋತ್ಸವದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಪದವಿಗಳನ್ನು ಪಡೆದಿದ್ದಾರೆ. ವಿವಿಧ ವಿಷಯಗಳಲ್ಲಿ 539 ಅಭ್ಯರ್ಥಿಗಳು ಪಿಎಚ್.ಡಿ ಪದವಿ ಪಡೆದರು. ಈ ಪೈಕಿ248 (ಶೇ.46.01) ಮಹಿಳಾ ಅಭ್ಯರ್ಥಿಗಳಿದ್ದರೆ, 291 ಮಂದಿ (ಶೆ.53.98) ಪುರುಷ ಅಭ್ಯರ್ಥಿಗಳಿದ್ದರು.

ಪದವಿ ಪಡೆಯುತ್ತಿರುವ ಅಭ್ಯರ್ಥಿಗಳಲ್ಲಿ 40 ಮಂದಿ ವಿದೇಶಿ ಅಭ್ಯರ್ಥಿಗಳಿದ್ದರು. ಹಾಗೆಯೇ 420 ಚಿನ್ನದ ಪದಕ, 275 ನಗದು ಬಹುಮಾನಗಳನ್ನು 249 ಅಭ್ಯರ್ಥಿಗಳು ಪಡೆದುಕೊಂಡರು. ಇದರಲ್ಲಿ 180 ಮಹಿಳಾ ಅಭ್ಯರ್ಥಿಗಳಿದ್ದರು ಎಂಬುದು ಗಮನಾರ್ಹ. ಬಳಿಕ ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಮಾತನಾಡಿ, ದಕ್ಷಿಣ ಭಾರತದಲ್ಲೇ ಮೈಸೂರು ವಿವಿ ಹಾಗೂ ಮೈಸೂರು ಶಿಕ್ಷಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಕಲೆ, ಸಾಹಿತ್ಯಕ್ಕೂ ಪ್ರೋತ್ಸಹ ನೀಡಿ ಪೋಷಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್ ಅವರು ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ನಾಡೋಜ ಡಾ.ಪಿ.ಎಸ್.ಶಂಕರ್, ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ ಅವರಿಗೆ ಗೌರವ ಡಾಕ್ಟರೇಟ್​ ನೀಡಿರುವುದರಿಂದ ಯೂನಿವರ್ಸಿಟಿಯ ಗೌರವ ಹೆಚ್ಚಿಸಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಲ್ಪನೆಯಲ್ಲಿ ಮೂಡಿದ ಹಾಗೂ ಶತಮಾನ ಕಂಡಿರುವ ವಿಶ್ವವಿದ್ಯಾನಿಲಯ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು, ಹೆಮ್ಮೆಯ ವಿಷಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೋ.ಲೋಕನಾಥ್, ಕುಲಸಚಿವರಾದ ಶೈಲಜಾ, ರಕ್ಷಣಾ ಸಂಶೋದನೆ ಮತ್ತು ಅಭಿವೃದ್ದಿ ಸಂಸ್ಥೆಯ ವಿಶ್ರಾಂತ ಮಹಾನಿರ್ದೇಶಕರಾದ ಪದ್ಮವಿಭೂಷಣ ಪ್ರಶಸ್ತಿ ಪಡೆದಿರುವ ಡಾ.ವಾಸುದೇವ್ ಕೆ.ಆತ್ರೆ ಸೇರಿದಂತೆ ಇತರರು ಹಾಜರಿದ್ದರು.

ಇದನ್ನೂ ಓದಿ: ದೇವೇಗೌಡರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್​: ವಿದ್ಯೆ ಹಣ ಗಳಿಕೆಯ ಸಾಧನ ಆಗಬಾರದು ಎಂದ ಮಾಜಿ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.