ETV Bharat / state

ಸಂಕಷ್ಟದಲ್ಲಿ ಮೈಸೂರಿನ ಪಾರಂಪರಿಕ ಟಾಂಗಾವಾಲಾಗಳ ಬದುಕಿನ ಬಂಡಿ: ಸಮಸ್ಯೆಗಳ ಸುತ್ತಲಿನ ಪ್ರತ್ಯಕ್ಷ ವರದಿ ಇದು!

author img

By

Published : Jul 19, 2023, 7:43 PM IST

ಕುದುರೆ ಬಂಡಿ ನಂಬಿದವರ ಬದುಕು ಅತಂತ್ರವಾಗಿದೆ. ಸಮಸ್ಯೆ ಬಗೆಹರಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅವರ ಬವಣೆಗಳು ಏನು ನೀವೇ ಕೇಳಿ.

Mysore Tangewala problems
ಸಮಸ್ಯೆಗಳ ಸುಳಿಯಲ್ಲಿ ಪಾರಂಪರಿಕ ಟಾಂಗಾವಾಲಗಳು..

ಸಮಸ್ಯೆಗಳ ಸುಳಿಯಲ್ಲಿ ಪಾರಂಪರಿಕ ಟಾಂಗಾವಾಲಗಳು..

ಮೈಸೂರು: ಪಾರಂಪರಿಕ ನಗರಿ ಮೈಸೂರಿನಲ್ಲಿ ಟಾಂಗಾಗಳಿಗೆ ತನ್ನದೇ ಆದ ಮಹತ್ವವಿದೆ. ಈ ಪಾರಂಪರಿಕ ಟಾಂಗಾಗಳು ರಾಜ ಮಹಾರಾಜರ ಕೊಡುಗೆ. ಇವುಗಳನ್ನು ನಂಬಿ ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಇತ್ತೀಚೆಗೆ ಈ ಟಾಂಗಾವಾಲಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳೇನು?, ಈ ಬಗ್ಗೆ ಸರ್ಕಾರದಿಂದ ಅವರು ನಿರೀಕ್ಷೆ ಮಾಡುತ್ತಿರುವುದು ಏನು? ಎಂಬ ಬಗ್ಗೆ ಟಾಂಗಾವಾಲ ಸಂಘದ ಅಧ್ಯಕ್ಷ ಫಯಾಜ್ ಅಹ್ಮದ್ ವಿವರಿಸಿದ್ದಾರೆ.

ಸಮಸ್ಯೆ ಬಗೆಹರಿಸುವಂತೆ ಮನವಿ: ದಸರಾ ಪ್ರಾರಂಭಕ್ಕೆ ಕೇವಲ ಮೂರು ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ದಸರಾ ಗಜಪಯಣದ ಸಿದ್ದತೆ ಆರಂಭವಾಗಿವೆ. ಈ ಮಧ್ಯೆ ಮೈಸೂರು ಪಾರಂಪರಿಕ ಟಾಂಗಾವಾಲಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಮಸ್ಯೆಗಳ ಬಗ್ಗೆ ಫಯಾಜ್ ಅಹ್ಮದ್ ಹೇಳಿದಿಷ್ಟು..: ಈ ಬಗ್ಗೆ "ಈಟಿವಿ ಭಾರತ'ದೊಂದಿಗೆ ಮಾತನಾಡಿದ ಮೈಸೂರು ಟಾಂಗಾ ಅಸೋಶಿಯೇಷನ್ ಅಧ್ಯಕ್ಷ ಫಯಾಜ್ ಅಹ್ಮದ್ "ಮೈಸೂರು ನಗರದಲ್ಲಿ 25 ಸಾರೋಟು ಹಾಗೂ 125 ಟಾಂಗಾಗಳಿವೆ. 2010ರಲ್ಲಿ ಕೇಂದ್ರ ಸರ್ಕಾರದ 'ನರ್ಮ್ ಯೋಜನೆ'ಯಡಿ 3 ಕುದುರೆ ನಿಲ್ದಾಣಗಳನ್ನು ಸ್ಥಾಪಿಸಲಾಗಿದ್ದು, ಅವುಗಳು ಸರಿಯಾದ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಯಲ್ಲಿವೆ. ಅವುಗಳಲ್ಲಿ ಕುಕ್ಕರಹಳ್ಳಿ ಕೆರೆ, ಗ್ರಾಮಾಂತರ ಬಸ್ ನಿಲ್ದಾಣ, ಆರ್​ಎಂಸಿ ಬಸ್ ನಿಲ್ದಾಣದ ಬಳಿ ಹಾಗೂ ಅಗ್ರಹಾರ ಬಳಿ ಟಾಂಗಾ ನಿಲ್ಧಾಣಗಳಿವೆ. ಈ ನಿಲ್ದಾಣಗಳು ಕಳೆದ 13 ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ಹದಗೆಟ್ಟಿವೆ. ನೆಲಹಾಸು ಸರಿಯಾಗಿಲ್ಲ. ಕುದುರೆಗಳಿಗೆ ನೀರು ಕುಡಿಯಲು ಟ್ಯಾಂಕ್​ಗಳಿಲ್ಲ. ಕುದುರೆಗಳು ಅನಾರೋಗ್ಯಕ್ಕೀಡಾದರೆ ಅವುಗಳನ್ನು ನೋಡಿಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಜತೆಗೆ ಟಾಂಗಾ ಗಾಡಿಗಳು ಮತ್ತು ಟಾಂಗಾ ನಿಲ್ದಾಣಗಳಿಗೆ ಬಣ್ಣ ಸಹ ಬಳಿಯಲಾಗಿಲ್ಲ. ಈ ಎಲ್ಲ ಸಮಸ್ಯೆಗಳಿಂದ ಟಾಂಗಾವಾಲಗಳ ಬದುಕು ಕಷ್ಟವಾಗಿದೆ. ಕೂಡಲೇ ಈ ಬಾರಿ ದಸರಾ ವೇಳೆಯೊಳಗಾದರೂ ಸಮಸ್ಯೆಗಳನ್ನು ಬಗೆಹರಿಸಬೇಕೆಂದು" ಅವರು ಆಗ್ರಹಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: "ನಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಪ್ರತಿ ದಸರಾದಲ್ಲೂ ಸುಣ್ಣ ಬಣ್ಣ ಹಾಕಿಸಿ, ಟಾಂಗಾ ಸ್ಟಾಂಡ್ ಗಳನ್ನು ಸ್ವಚ್ಛ ಮಾಡುತ್ತಿದ್ದರು. ಇದರಿಂದ ರಾತ್ರಿ ಸಮಯದಲ್ಲಿ ಕುದುರೆಗಳು ಆರಾಮಾಗಿ ಮಲಗುತ್ತಿದ್ದವು. ಆದರೆ, ಕಳೆದ 9 ವರ್ಷಗಳಿಂದ ಸರ್ಕಾರ ನಮ್ಮನ್ನು ಗಮನಿಸಿಲ್ಲ. ಈ ಬಗ್ಗೆ ಪಾಲಿಕೆಯ ಗಮನಕ್ಕೆ ತಂದರು ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಮೈಸೂರಿಗೆ ಟಾಂಗಾಗಳನ್ನ ಮಹಾರಾಜರು ಕೊಡುಗೆಯಾಗಿ ನೀಡಿದ್ದರು. ಟಾಂಗಾಗಳೆಂದರೆ ಅವರಿಗೆ ಬಾರಿ ಇಷ್ಟ. ಅವರ ಟಾಂಗಾಗಳನ್ನ ನಂಬಿ ನಾವು ಈಗ ಜೀವನ ನಡೆಸುತ್ತಿದ್ದೇವೆ".

ಈ ಬಾರಿ ದಸರಾ ಸಂದರ್ಭದಲ್ಲಿಯಾದರೂ ಟಾಂಗಾಗಳ ನಿಲ್ದಾಣವನ್ನು ಸರಿಪಡಿಸಿ, ಟಾಂಗಾವಾಲಗಳಿಗೆ ದಸರಾ ಸಂದರ್ಭದಲ್ಲಾದರೂ ಉಚಿತ ಡ್ರೆಸ್​ಗಳನ್ನು ನೀಡಬೇಕು. ಪಾಲಿಕೆ ಟಾಂಗಾ ವ್ಯವಸ್ಥೆಯನ್ನು ಮಾಡಬೇಕು. ಪಾಲಿಕೆ 20 ಟಾಂಗಾಗಳನ್ನ ಕೊಡುವುದಾಗಿ ಹೇಳಿತ್ತು. ಆದರೆ, 11 ಟಾಂಗಾಗಳನ್ನ ಮಾತ್ರ ನೀಡಿದೆ. ಉಳಿದ ಟಾಂಗಾಗಳನ್ನ ಕೊಡಿಸಬೇಕು. ಇದರ ಜೊತೆಗೆ ಅರಮನೆ ಸುತ್ತಲೂ ಟಾಂಗಾ ಸ್ಟಾಂಡ್ ಗಳನ್ನು ನಿರ್ಮಿಸಿಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಫಯಾಜ್ ಅಹ್ಮದ್ ಈಟಿವಿ ಭಾರತದ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಓಡೋ ಕುದುರೆಗೂ ಓಡಿಸೋರಿಗೂ ಇಲ್ಲ ಖುಷಿ.. ಓಡುತ್ತಿಲ್ಲ ಟಾಂಗಾ ಗಾಡಿ, ಇವರ ಬದುಕು ಜಟಕಾ ಬಂಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.