ETV Bharat / state

ಯಾರ ಬಳಿ ಅಭಿವೃದ್ಧಿ ವಿಚಾರ ಇಲ್ಲವೋ ಅವರು ಸಿಡಿ ವಿಚಾರ ಮಾತನಾಡುತ್ತಾರೆ: ಪ್ರತಾಪ್ ಸಿಂಹ

author img

By

Published : Feb 4, 2023, 4:10 PM IST

ಕರ್ನಾಟಕ ರಾಜಕಾರಣದಲ್ಲಿ ಸಿ ಡಿ ವಿಚಾರ, ಆಡಿಯೋ ವಿಚಾರ ಬಿಟ್ಟು ಜನರ ಮುಂದೆ ಅಭಿವೃದ್ಧಿ ವಿಚಾರ ಮಾತನಾಡಬೇಕು - ಸಂಸದ ಪ್ರತಾಪ್ ಸಿಂಹ ಹೇಳಿಕೆ.

mp pratap simha reaction on cd issues
ಯಾರ ಬಳಿ ಅಭಿವೃದ್ಧಿ ವಿಚಾರ ಇಲ್ಲವೋ ಅವರು ಸಿಡಿ ವಿಚಾರ ಮಾತನಾಡುತ್ತಾರೆ:ಪ್ರತಾಪ್ ಸಿಂಹ

ಮೈಸೂರು: ಕರ್ನಾಟಕ ರಾಜಕಾರಣದಲ್ಲಿ ಸಿ ಡಿ ವಿಚಾರ, ಆಡಿಯೋ ವಿಚಾರ ಬಿಟ್ಟು ಜನರ ಮುಂದೆ ಅಭಿವೃದ್ಧಿ ವಿಚಾರ ಮಾತನಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಶನಿವಾರ ಮೈಸೂರು ಮಹಾನಗರ ಪಾಲಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಡಿ ಮುಂದಿಟ್ಟುಕೊಂಡು ಡಿಕೆಶಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ. ಯಾರ ಬಳಿ ಅಭಿವೃದ್ಧಿ ವಿಚಾರ ಇಲ್ಲವೋ ಅವರು ಸಿಡಿ ವಿಚಾರ ಮಾತನಾಡುತ್ತಾರೆ. ಸಾಮಾನ್ಯವಾಗಿ ಎಲ್ಲರ ಮೊಬೈಲ್ ತೆಗೆದರೆ, ಏನಾದರೂ ಒಂದು ವಿಷಯ ಸಿಗುತ್ತದೆ. ಮೊಬೈಲ್​ ಒಪನ್ ಮಾಡಿ ಎಂದರೆ, ಎಷ್ಟು ಜನರಿಗೆ ಧೈರ್ಯ ಇದೆ ಹೇಳಿ ಎಂದು ಪ್ರಶ್ನಿಸಿದರು.

ಇಂತ ವಿಚಾರವನ್ನು ಜನ ತಲೆಕೆಡಿಸಿಕೊಳ್ಳುವುದಿಲ್ಲ. ಚುನಾವಣೆಗೆ ಬಂದಾಗ ಈ ವಿಚಾರ ಗೊತ್ತಾಗುತ್ತದೆ. ಸಿ ಡಿ ವಿಚಾರದ ಬಗ್ಗೆ ಮಾತನಾಡುವವರು ಒಮ್ಮೆ ಅವಲೋಕನ ಮಾಡಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮುಂದಿನ ಚುನಾವಣೆ: ಬಿಜೆಪಿ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮುಂದಿನ ಚುನಾವಣೆ ಎದುರಿಸಲಿದೆ. ಕಾಂಗ್ರೆಸ್ 75 ವರ್ಷಗಳಲ್ಲಿ ಎಷ್ಟು ಮನೆಗೆ ಕುಡಿಯುವ ನೀರು ಕೊಟ್ಟಿದೆ. ನಾವು ಅಲ್ಪ ಸಮಯದಲ್ಲಿ ಎಷ್ಟು ಕುಡಿಯುವ ನೀರು ಹಾಗೂ ಇತರ ಸೌಲಭ್ಯಗಳನ್ನು ನೀಡಿದ್ದೇವೆ ಎಂಬ ಅಭಿವೃದ್ಧಿ ವಿಚಾರವನ್ನ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಭದ್ರಾ ಯೋಜನೆ ಬಹಳ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಇದನ್ನ ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ಈ ಯೋಜನೆಗೆ ಕೋಟಿಗಟ್ಟಲೆ ಹಣ ಘೋಷಣೆ ಮಾಡಿದೆ. ಇದರ ಜೊತೆಗೆ ರೈಲ್ವೆ, ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಸೇರಿದಂತೆ ಹಲವು ಯೋಜನೆಗಳು ಬಿಜೆಪಿ ಸರ್ಕಾರದ ಅಭಿವೃದ್ಧಿ ಯೋಜನೆಗಳಾಗಿದ್ದು, ಇದನ್ನ ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ ಎಂದರು.

ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಪುಕ್ಕಟೆ ನೀರು, ಕರೆಂಟ್, ಕುಕ್ಕರ್, ಟಿವಿ, ಭೂಮಿ ಕೊಡುತ್ತೇವೆಂದು, ತಮಿಳುನಾಡಿನ ಡಿ ಎಂ ಕೆ ಹಾಗೂ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಲೆವೆಲ್ ಗೆ ಕರ್ನಾಟಕವನ್ನ ತೆಗೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿನ ರಾಜಕಾರಣಿಗಳು ಅವರ ಆಸ್ತಿ ಮಾರಿ ಜನರಿಗೆ ಕೊಡುವುದಿಲ್ಲ, ಇಲ್ಲಿಯ ಆಡಳಿತ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡು ಆಸ್ತಿ ಮಾಡಿಕೊಳ್ಳುತ್ತಾರೆ. ಜನರ ತೆರಿಗೆ ದುಡ್ಡನ್ನು ಈ ರೀತಿ ಹಂಚಿ ರಾಜ್ಯವನ್ನ ದಿವಾಳಿ ಮಾಡುತ್ತಾರೆ. ಜನ ಇದನ್ನ ನೆನಪಿಸಿಕೊಳ್ಳಬೇಕು, ಇದೊಂದು ಗಿಮಿಕ್ಸ್ ರಾಜಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಡಿ.ಕೆ. ಶಿವಕುಮಾರ್​ಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ: ನಾವು ಅಧಿಕಾರಕ್ಕೆ ಬಂದರೆ ವಿಧಾನಸೌಧವನ್ನ ಸ್ವಚ್ಛ ಮಾಡುತ್ತೇವೆ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ರಾಜಕಾರಣದಲ್ಲಿ ಬಹಳಷ್ಟು ಜನ ಮಾತನಾಡುತ್ತಾರೆ. ಅದರ ಬಗ್ಗೆ ನಾನು ತಲೆಕೆಡಿಸಿ ಕೊಳ್ಳಲು ಹೋಗುವುದಿಲ್ಲ. ನಾವು ಮೋದಿಜಿ ನೇತೃತ್ವದಲ್ಲಿ ರಾಷ್ಟ್ರದ ರಾಜಕಾರಣವನ್ನ ಶುದ್ದಿ ಮಾಡುವ ಕೆಲಸ ಮಾಡುತ್ತಿದ್ದೇವೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿ ವಿಚಾರದಲ್ಲಿ ಚುನಾವಣೆಗೆ ಹೋಗುತ್ತದೆ. ನಮ್ಮದು ಅಭಿವೃದ್ಧಿ ಮಂತ್ರ ಎಂದ ಸಂಸದ ಪ್ರತಾಪ್ ಸಿಂಹ, ಇವತ್ತು ಉತ್ತರ ಪ್ರದೇಶ, ಬಿಹಾರದ ರಾಜಕಾರಣವೇ ಬದಲಾವಣೆ ಕಾಣುತ್ತಿದ್ದು, ಆದರೆ ಕರ್ನಾಟಕ ಮಾತ್ರ ಇನ್ನೂ ಬದಲಾವಣೆ ಹಾದಿಯಲ್ಲಿ ಸಾಗುತ್ತಿಲ್ಲ, ಇದೊಂದು ದುರದೃಷ್ಟಕರ ಎಂದು ಹೇಳಿದರು.

ಇದನ್ನೂ ಓದಿ:ಮೈಸೂರಿನಲ್ಲಿ 'ನನ್ನ ಮತ ಮಾರಾಟಕ್ಕಿಲ್ಲ' ಅಭಿಯಾನಕ್ಕೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.