ETV Bharat / state

ಮೈಸೂರಲ್ಲಿ ಮಹಿಷ ದಸರಾ ಆಚರಣೆಗೆ ಸಂಸದ ಪ್ರತಾಪ್ ಸಿಂಹ ಆಕ್ಷೇಪ

author img

By ETV Bharat Karnataka Team

Published : Oct 4, 2023, 3:20 PM IST

ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡದಂತೆ ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

MP Pratap Simha
ರಾಜ್ಯದಲ್ಲಿ ನಡೆಯುತ್ತಿದೆ ರಾಕ್ಷಸರ ರಾಜ್ಯಭಾರ: ಸಂಸದ ಪ್ರತಾಪ್ ಸಿಂಹ ಆರೋಪ

ಮೈಸೂರಲ್ಲಿ ಮಹಿಷ ದಸರಾ ಆಚರಣೆಗೆ ಸಂಸದ ಪ್ರತಾಪ್ ಸಿಂಹ ಆಕ್ಷೇಪ

ಮೈಸೂರು: ಅಕ್ಟೋಬರ್ 13 ರಂದು ಮಹಿಷಾ ದಸರಾ ತಡೆಯುವ ನಿಟ್ಟಿನಲ್ಲಿ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ನಡೆಸಲಾಗುತ್ತದೆ. ಇತ್ತೀಚೆಗೆ ಕೆಲವು ವ್ಯಕ್ತಿಗಳು ಮಹಿಷ ದಸರಾ ಆಚರಣೆ ಮಾಡುವ ಬಗ್ಗೆ ಮಾತನಾಡುತ್ತಿದ್ದು, ಮಹಿಷ ದಸರಾ ಮಾಡಲು ಜಿಲ್ಲಾಡಳಿತ ಹಾಗೂ ನಗರ ಪೊಲೀಸ್ ಕಮಿಷನರ್ ಅನುಮತಿ ನೀಡದಂತೆ ಮನವಿ ಮಾಡುತ್ತೇವೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್​ ಸಿಂಹ ಹೇಳಿದ್ರು.

ನಗರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಾಡ ಅಧಿದೇವತೆ ಚಾಮುಂಡಿ ತಾಯಿ ವಾಸವಿರುವ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾವನ್ನು ಆಚರಣೆ ಮಾಡಲು ಬಿಡುವುದಿಲ್ಲ. ಇದಕ್ಕಾಗಿ ಅಕ್ಟೋಬರ್ 13 ರಂದು 5 ಸಾವಿರ ನಾಗರಿಕರ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿ, ಅಲ್ಲಿ ನಾಡ ಅಧಿದೇವತೆಗೆ ಪೂಜೆ ಸಲ್ಲಿಸಿ, ದಿನಿವಿಡೀ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ಧರ್ಮಾತೀತವಾಗಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡುತ್ತೇನೆ ಎಂದರು.

ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೂ ಮಹಿಷಾ ದಸರಾವನ್ನು ಹುಟ್ಟು ಹಾಕಿದ್ದಾರೆ. ಪ್ರಸ್ತುತ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ಮಾಡುವ ವಿಚಾರ ಮಾತನಾಡುತ್ತಿದ್ದಾರೆ. ಇದನ್ನು ತಡೆಯಲು ಅ. 13ರಂದು ಬೆಳಗ್ಗೆ 8 ಗಂಟೆಗೆ ಚಾಮುಂಡಿ ಚಲೋ ಕಾರ್ಯಕ್ರಮವನ್ನು ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಸರ್ಕಾರದ ವಿರುದ್ಧ ಪ್ರತಾಪ್​ ವಾಗ್ದಾಳಿ: ''ಕರ್ನಾಟಕದಲ್ಲಿ ಒಳ್ಳೆಯವರ ಆಡಳಿತ ಹೋಗಿ ರಾಕ್ಷಸರ ರಾಜ್ಯದ ಆಡಳಿತ ಬಂದಿದೆ. ಇದಕ್ಕೆ ಪೂರಕವಾಗಿರುವ ಶಿವಮೊಗ್ಗ, ಕೋಲಾರ ಪ್ರಕರಣಗಳನ್ನು ನೋಡಿದರೆ ಗೊತ್ತಾಗುತ್ತದೆ. ರಾಜ್ಯದಲ್ಲಿ ಈಗ ರಾಕ್ಷಸರ ರಾಜ್ಯಭಾರ ನಡೆಯುತ್ತಿದೆ'' ಎಂದು ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಶಿವಮೊಗ್ಗ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ''ಒಂದೊಂದು ಸಾರಿ ಒಳ್ಳೆಯವರು ರಾಜ್ಯವನ್ನು ಆಳುತ್ತಾರೆ. ಒಂದೊಂದು ಬಾರಿ ರಾಕ್ಷಸರು ರಾಜ್ಯವನ್ನು ಆಳುತ್ತಾರೆ. ಈಗ ರಾಜ್ಯದಲ್ಲಿ ರಾಕ್ಷಸರ ರಾಜ್ಯಭಾರ ನಡೆಯುತ್ತಿದೆ. ಶಿವಮೊಗ್ಗ, ಕೋಲಾರ ಪ್ರಕರಣ ನೋಡಿದರೆ ಗೊತ್ತಾಗುತ್ತದೆ.'' ಎಂದು ಕಿಡಿಕಾರಿದರು.

ಎಲ್ಲವನ್ನೂ ನೋಡಿ ಸಿಎಂ ಕಣ್ಮುಚ್ಚಿ ಕುಳಿತಿದ್ದಾರೆ- ಸಂಸದ ಪ್ರತಾಪ್​ ಸಿಂಹ: ಪಿಎಫ್ಐ, ಕೆಎಫ್​ಡಿ ಮೇಲಿನ ಕೇಸ್​ಗಳನ್ನು ವಾಪಸ್ ಪಡೆದ ಕಾರಣ ಇವತ್ತು ವಿಕೃತಿಗಳ ವಿಜೃಂಭಣೆ ನಡೆಯುತ್ತಿದೆ. ಇದಕ್ಕೆ ಸಿದ್ದರಾಮಯ್ಯ ಕಾರಣ, ಅವರು ಬಿಗಿಯಾಗಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಕೆಲವು ಸಂಘಟನೆಯವರು ಲಂಗು ಲಗಾಮಿಲ್ಲದೆ ಕುಣಿಯುತ್ತಿದ್ದಾರೆ ಸಂಸದರು ಕಿಡಿಕಾರಿದರು.

ಇನ್ನು, ಕಾವೇರಿ ನದಿ ವಿಚಾರದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಬಗ್ಗೆ ಯಾರು ಮಾತನಾಡಿಲ್ಲ. ಈ ಸರ್ಕಾರಕ್ಕೆ ಬೆನ್ನು ಮೂಳೆ ಇಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಬಗ್ಗೆ ಮಾತನಾಡುವ ಧೈರ್ಯ ಯಾರಿಗೂ ಇಲ್ಲ. ಸಿದ್ದರಾಮಯ್ಯ ಸುಮ್ಮನೆ ಮಾತುಗಳನ್ನು ಆಡುತ್ತಾ ಕಾಲ ಕಳೆಯುತ್ತಿದ್ದಾರೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಸಂಸದ ಪ್ರತಾಪ್ ಸಿಂಹ ಗರಂ ಆದರು.

ಇದನ್ನೂ ಓದಿ: ಚಿಲುಮೆ ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ತನಿಖೆ ವಿಚಾರ: ಸಚಿವ ಡಾ ಜಿ‌ ಪರಮೇಶ್ವರ್ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.