ETV Bharat / state

ನಾಟಕದ ಮೂಲಕ ಅಂಬೇಡ್ಕರ್​ಗೆ ಅವಮಾನ ಆರೋಪ; ಜೈನ್​ ಕಾಲೇಜಿನ ವಿರುದ್ಧ ಹೆಚ್ ವಿಶ್ವನಾಥ್ ಆಕ್ರೋಶ

author img

By

Published : Feb 13, 2023, 12:44 PM IST

ನಾಟಕದ ಮೂಲಕ ಸಂವಿಧಾನ ಶಿಲ್ಪಿಗೆ ಅವಮಾನ- ಜೈನ್​ ಕಾಲೇಜು ವಿರುದ್ಧ ಎಚ್​.ವಿಶ್ವನಾಥ್​ ಆಕ್ರೋಶ- ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರುದ್ಧವೂ ವಾಗ್ದಾಳಿ

college
ಎಚ್​.ವಿಶ್ವನಾಥ್​

ಮೈಸೂರು: "ಅಸಾಂವಿಧಾನಿಕ ಒತ್ತಡಗಳು ಸರ್ಕಾರವನ್ನು ನಿಯಂತ್ರಣ ಮಾಡುತ್ತಿವೆ" ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಸಮಾಧಾನ ಹೊರಹಾಕಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, "ರಾಷ್ಟ್ರಭಕ್ತನಂತೆ ಉದ್ದುದ್ದ ಬರೆಯುವ ಚಕ್ರವರ್ತಿ ಸೂಲಿಬೆಲೆ, ಪಠ್ಯಪುಸ್ತಕ ಕುಲಗೆಡಿಸಿದ ಚಕ್ರತೀರ್ಥ, ಶತಾವದಾನಿ ಗಣೇಶ್, ಪ್ರಮೋದ್ ಮುತಾಲಿಕ್ ಮುಂತಾದವರು ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ" ಎಂದು ಆರೋಪಿಸಿದರು.

"ಸಂವಿಧಾನವನ್ನು ಗೇಲಿ ಮಾಡಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಜೈನ್ ಆಡಳಿತ ಮಂಡಳಿ ಕನಿಷ್ಠ ಕ್ಷಮೆ ಕೂಡ ಕೇಳಿಲ್ಲ. ಸಂಸದರು, ಶಾಸಕರು ಸೊಲ್ಲೆತ್ತಿಲ್ಲ.‌ ಈ ಬಗ್ಗೆ ವಿರೋಧ ಪಕ್ಷಗಳೂ ಖಂಡಿಸಿಲ್ಲ" ಎಂದು ವಿಶ್ವನಾಥ್​ ಆಕ್ರೋಶ ವ್ಯಕ್ತಪಡಿಸಿದರು.

"ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಕಿರುನಾಟಕ ಪ್ರದರ್ಶನ ಮಾಡಲಾಗಿದೆ. ಅದರಲ್ಲಿ ಜಾತೀಯತೆ, ಅಸ್ಪೃಶ್ಯತೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ವ್ಯವಸ್ಥೆ ಬಗ್ಗೆ ಏನೋ ಹೇಳಲು ಹೋಗಿ ತಿರುಚಿದ್ದಾರೆ. ಅದರ ಕ್ಲಿಪಿಂಗ್ ನಾನು ನೋಡಿದ್ದೇನೆ. ದಲಿತ ಹುಡುಗ ಮೇಲ್ವರ್ಗದ ಹುಡುಗಿಯನ್ನು ಮುಟ್ಟುವಾಗ ಟಚ್ ಮಿ ನಾಟ್ ಅಂತ ಹಾಡು ಹಾಕಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ. ಇದಕ್ಕೆ ಪ್ರೇಕ್ಷಕರ ಸಾಲಿನಲ್ಲಿದ್ದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಕೇಕೆ ಹಾಕಿ ನಕ್ಕಿದ್ದಾರೆ" ಎಂದು ಕಿಡಿಕಾರಿದರು.

ಇದನ್ನೂ ಓದಿ: ಅಂಬೇಡ್ಕರ್​ಗೆ ಅವಮಾನಿಸಿದ ಆರೋಪ: ಜೈನ್ ಕಾಲೇಜಿನ 7 ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

"ನಾಟಕದ ಮೂಲಕ ರಾಷ್ಟ್ರಕ್ಕೆ ಅಪಮಾನ ಮಾಡಲಾಗಿದೆ. ಖಾಸಗಿ ವಿಶ್ವವಿದ್ಯಾಲಯಗಳಿಗೆ ಲಂಗು ಲಗಾಮು ಇಲ್ಲ. ಈ ರೀತಿಯದ್ದು ಸಿ.ಟಿ. ರವಿ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಶುರುವಾಗಿದೆ. ಕೋಟ್ಯಂತರ ರೂ. ತೆಗೆದುಕೊಂಡು ವಿವಿಗಳಿಗೆ ಅನುಮೋದನೆ ಕೊಟ್ಟರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಾಟಕಕ್ಕೆ ವಿರೋಧ ವ್ಯಕ್ತವಾಗಿದೆ. ಸರ್ಕಾರ ಜೈನ್ ವಿಶ್ವವಿದ್ಯಾಲಯದ ಮಾನ್ಯತೆ ರದ್ದುಪಡಿಸಬೇಕಿತ್ತು. ಸರ್ಕಾರ ಯಾರದ್ದೋ ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡಿದೆ. ಉನ್ನತ ಶಿಕ್ಷಣ ಸಚಿವರು, ಸಮಾಜ ಕಲ್ಯಾಣ ಸಚಿವರು, ರಾಜ್ಯಪಾಲರು ದನಿ ಎತ್ತಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಮಿತ್ ಶಾ ವಿರುದ್ಧವೂ ವಾಗ್ದಾಳಿ: "ಕೇಂದ್ರ ಗೃಹ ಮಂತ್ರಿಗಳಾದ ಅಮಿತ್​ ಶಾ ಅವರು ಭಾರತ ಮಾತೆಯ ದೇವಾಲಯವನ್ನು ಉದ್ಘಾಟಿಸಿದ್ದಾರೆ. ಭಾರತ ಮಾತೆ ಭಾರತೀಯರ ಹೃದಯ ಮಂದಿರಗಳಲ್ಲಿ ರಾರಾಜಿಸುತ್ತಿದ್ದಾಳೆ. ಭಾರತ ಮಾತೆ ಪೂಜಿಸುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ. ನಿಮ್ಮನ್ನು ನೋಡಿ ದೇವರುಗಳೇ ಹೆದರಿಕೊಂಡು ಓಡಿಹೋಗುತ್ತಾರೆ. ಎಲ್ಲ ಕಡೆ ಭಾರತ ಮಾತೆ ದೇವಾಲಯ ಕಟ್ಟುತ್ತಾರಂತೆ. ಸಂವಿಧಾನಕ್ಕೆ ಅಪಮಾನ ಮಾಡಿ ಭಾರತ ಮಾತೆ ಪೂಜೆ ಮಾಡುವುದನ್ನು ಹೇಳಿಕೊಡುತ್ತೀರಾ?" ಎಂದು ಹೆಚ್​ ವಿಶ್ವನಾಥ್​ ಪ್ರಶ್ನಿಸಿದರು.

ಇದನ್ನೂ ಓದಿ: ಡಾ ಬಿ ಆರ್ ಅಂಬೇಡ್ಕರ್ ಮತ್ತು ದಲಿತರಿಗೆ ಅವಮಾನ ಆರೋಪ.. ಖಾಸಗಿ ವಿವಿ ಪರವಾನಿಗೆ ರದ್ದು ಮಾಡುವಂತೆ ಒತ್ತಾಯ

ಬೆಂಗಳೂರಿನ ಜೈನ್​ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 8 ರಂದು ಫೆಸ್ಟ್​ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಂವಿಧಾನ ಶಿಲ್ಪಿ ಅಂಬೇಡ್ಕರ್​ ಅವರಿಗೆ ಅವಮಾನಿಸಿ ಕೀಳು ಮಟ್ಟದ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಸಂಬಂಧ ಸಿದ್ಧಾಪುರ ಠಾಣೆ ಪೊಲೀಸರು ಒಟ್ಟು 7 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.