ETV Bharat / state

ನ.9 ರಿಂದ ಮೈಸೂರಿನಲ್ಲಿ ಮುಖ್ಯಮಂತ್ರಿ ನಿವಾಸದ‌ ಮುಂದೆ ರೈತರಿಂದ ಧರಣಿ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್​

author img

By ETV Bharat Karnataka Team

Published : Oct 29, 2023, 8:00 PM IST

ಮುಂದಿನ ಹತ್ತು ದಿನಗಳಲ್ಲಿ ರೈತರಿಗೆ ಕಬ್ಬಿನ ಹೆಚ್ಚುವರಿ ದರ ಕೊಡಿಸದಿದ್ದರೆ ಸಿಎಂ ಸಿದ್ದರಾಮಯ್ಯ ಅವರ ಮನೆಯ ಮುಂದೆ ನವೆಂಬರ್ 9 ರಿಂದ ಬೃಹತ್ ಧರಣಿ ಸತ್ಯಾಗ್ರಹ ನಡೆಸಲು ರಾಜ್ಯ ಕಬ್ಬು ಬೆಳೆಗಾರ ಸಂಘ ತೀರ್ಮಾನಿಸಿದೆ.

ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್
ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್

ಮೈಸೂರು : ಇನ್ನು ಹತ್ತು ದಿನದಲ್ಲಿ ರೈತರಿಗೆ ಕಬ್ಬಿನ ಹೆಚ್ಚುವರಿ ದರ ಕೊಡಿಸದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಅವರ ಮೈಸೂರಿನ‌ ಮನೆಯ ಎದುರು ನ.9 ರಿಂದ ಬೃಹತ್ ಧರಣಿ ಸತ್ಯಾಗ್ರಹ ನಡೆಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘ ತೀರ್ಮಾನಿಸಿದೆ.

ನಗರದ ಪಿಡಿಡಬ್ಲ್ಯೂ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್​ ಮಾತನಾಡಿ, ರಾಜ್ಯ ಸರ್ಕಾರ ಹಿಂದಿನ ಸಾಲಿನಲ್ಲಿ ನಿಗದಿ ಮಾಡಿದ್ದ ಕಬ್ಬಿನ ಹೆಚ್ಚುವರಿ ದರ ಟನ್‌ಗೆ 150 ರೂ. ಕೊಡಿಸಲು, ಪ್ರಸಕ್ತ ಸಾಲಿನ ದರ ಏರಿಕೆ ಮಾಡಲು ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಉತ್ಪಾದನಾ ವೆಚ್ಚ 3580 ರೂ. ಆದರೆ ಸರ್ಕಾರ 3150 ನಿಗದಿ ರೂ. ಮಾಡಿದೆ. ಕೂಡಲೇ ಪರಿಷ್ಕರಣೆ ಮಾಡಿ ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಹತ್ತು ದಿನದ ಗಡುವಿನೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು. ಸರ್ಕಾರದ ಆದೇಶ ಧಿಕ್ಕರಿಸಿರುವ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ರೈತರ ಹಣ ಕೊಡಿಸಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಹದಗೆಡುವ ಮುನ್ನವೇ ರೈತರಿಗೆ ನ್ಯಾಯ ಕೊಡಿಸಬೇಕು ಎಚ್ಚರಿಕೆ ನೀಡಿದರು.

ಕಬ್ಬಿನ ಇಳುವರಿ ಹಾಗೂ ಪ್ರದೇಶ ಕಡಿಮೆಯಾಗಿದ್ದು, ಶೇ. 50ರಷ್ಟು ಉತ್ಪಾದನೆ ಬರಗಾಲದ ಕಾರಣ ಕಡಿಮೆಯಾಗಿದೆ. ರೈತರು ಕಬ್ಬು ಕಟಾವಿನ ಬಗ್ಗೆ ಆತಂಕಗೊಳ್ಳದೆ ಹೆಚ್ಚು ದರ ನಿಗದಿ ಮಾಡುವ ತನಕ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕೃಷಿ ಪಂಪ್‌ಸೆಟ್​ಗಳಿಗೆ ವಿದ್ಯುತ್​ ಕಣ್ಣುಮುಚ್ಚಾಲೆ ಆಡುತ್ತಿರುವುದು ಬರಗಾಲದಿಂದ ನರಳುತ್ತಿರುವ ರೈತರಿಗೆ ಮತ್ತೊಂದು ಮರ್ಮಾಘಾತ ತಂದಿದೆ. ಮಳೆ ಕಡಿಮೆಯಾಗಿರುವುದು ವಿದ್ಯುತ್ ಉತ್ಪಾದನೆ ಕುಂಠಿತಕ್ಕೆ ಕಾರಣ. ಇದರಿಂದಾಗಿ ರೈತರಿಗೆ 5 ಗಂಟೆ ವಿದ್ಯುತ್ ಸಿಗುತ್ತಿದೆ ಎನ್ನುತ್ತಾರೆ. ಆದರೆ, ಕೈಗಾರಿಕೆಗೆ, ಇತರೆ ಉದ್ಯಮಕ್ಕೆ ಸಮರ್ಪಕ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಸರ್ಕಾರದ ಇಬ್ಬಗೆ ನೀತಿ ಸರಿ ಅಲ್ಲ ಎಂದು ಕುರುಬೂರು ಶಾಂತಕುಮಾರ್​ ಕಿಡಿಕಾರಿದರು.

ಸರ್ಕಾರ ಎಚ್ಚೆತ್ತುಕೊಂಡು 10 ಗಂಟೆಗಳ ವಿದ್ಯುತ್ ನೀಡದಿದ್ದರೆ 45 ಲಕ್ಷ ಕೃಷಿ ಪಂಪ್​ಸೆಟ್ ರೈತರು ಬೀದಿಪಾಲಾಗುತ್ತಾರೆ ಎಂದು ಎಚ್ಚರಿಸಿದರು. ರಾಜ್ಯ ಸರ್ಕಾರ 220 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿದೆ. ಬರಗಾಲ ಸಂಕಷ್ಟದ ನೆರವು ಕಾರ್ಯಾರಂಭ ಆಗಿಲ್ಲ. ದನಕರುಗಳಿಗೆ ಮೇವು, ಕುಡಿಯುವ ನೀರು, ಬೆಳೆ ನಷ್ಟ ಪರಿಹಾರ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಕರ್ನಾಟಕ ರಾಜ್ಯೋತ್ಸವದ 50 ವರ್ಷಗಳ ಆಚರಣೆ ನಡೆಸುತ್ತಿರುವ ರಾಜ್ಯ ಸರ್ಕಾರ, ಎಲ್ಲ ಕಂದಾಯ ಹಾಗೂ ಇತರೆ ಇಲಾಖೆಗಳ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿಯೇ ವಾದ, ವಿವಾದ, ಆದೇಶಗಳನ್ನು ನೀಡುವಂತೆ ಕಠಿಣ ಕಾನೂನು ಆದೇಶ ಹೊರಡಿಸಬೇಕು. ಬಾಗಲಕೋಟೆ ಜಿಲ್ಲೆಯಲ್ಲಿ ಜಮಖಂಡಿ ಉಪವಿಭಾಗಾಕಾರಿ ಸಂತೋಷ್ ಕಾಮಗೌಡ ಈ ಕಾರ್ಯ ಮಾಡಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಇದೇ ರೀತಿ ರಾಜ್ಯಾದ್ಯಂತ ಜಾರಿ ಮಾಡಲಿ ಎಂದು ಹೇಳಿದರು.

ಮಾಧ್ಯಮಗೋಷ್ಟಿ ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ಹತ್ತಳ್ಳಿ ದೇವರಾಜ್, ಬರಡನುರ ನಾಗರಾಜ್, ಹಳಿಕರೆಹುಂಡಿ ಬಾಗ್ಯರಾಜ್, ಕಿರಗಸೂರ ಶಂಕರ, ಕುರುಬೂರು ಸಿದ್ದೇಶ್, ಹಾಡ್ಯರವಿ, ಪಟೇಲ್ ಶಿವಮೂರ್ತಿ, ಲಕ್ಷ್ಮಿಪುರ ವೆಂಕಟೇಶ, ಮಹದೇವಸ್ವಾಮಿ, ಸುನಿಲ್, ನೀಲಕಂಠಪ್ಪ, ಕಮಲಮ್ಮ, ಮಂಜುನಾಥ, ಮಹದೇವ ನಾಯಕ, ಪ್ರದೀಪ್ ಹಾಜರಿದ್ದರು.

ಇದನ್ನೂ ಓದಿ : ಕಬ್ಬಿನ ತೂಕದಲ್ಲಿ ಮೋಸ ಆರೋಪ: ಸರ್ಕಾರದ ವತಿಯಿಂದಲೇ ಎಲೆಕ್ಟ್ರಾನಿಕ್ ವೇಯಿಂಗ್ ಮಷಿನ್-ಸಚಿವ ಶಿವಾನಂದ ಪಾಟೀಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.