ETV Bharat / state

ಮಳೆರಾಯನ ಅಟ್ಟಹಾಸಕ್ಕೆ ಬಹುತೇಕ ಜಮೀನನಲ್ಲಿ ಬೆಳೆ ನಾಶ: ದುಃಖಿತರಾದ ಕಾಡಂಚಿನ ಜನ

author img

By

Published : May 22, 2023, 9:53 PM IST

ಆಲಿಕಲ್ಲು ಸಹಿತ ಸುರಿದ ಮಳೆಯಿಂದಾಗಿ ಹತ್ತಿ, ಜೋಳ, ರಾಗಿ ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗಿವೆ.

ಮಳೆರಾಯನ ಅಟ್ಟಹಾಸ
ಮಳೆರಾಯನ ಅಟ್ಟಹಾಸ

ಮೈಸೂರು : ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸರಗೂರು ಸಮೀಪದ ಹಳೇಹೆಗ್ಗುಡಿಲು, ಹಳೆಯೂರು, ದಡದಹಳ್ಳಿ ಸೇರಿದಂತೆ ಇನ್ನಿತರ ಕಾಡಂಚಿನ ಗ್ರಾಮದ ಬಹುತೇಕ ಜಮೀನುಗಳಲ್ಲಿ ಬೆಳೆ ನಾಶವಾಗಿದೆ. ಆಲಿಕಲ್ಲು ಸಹಿತ ಸುರಿದ ಮಳೆಯಿಂದಾಗಿ ಆಗತಾನೆ ಮೊಳಕೆಯೊಡೆದಿದ್ದ ಹತ್ತಿ, ಜೋಳ, ರಾಗಿ ಸೇರಿದಂತೆ ಇನ್ನಿತರ ಬೆಳೆಗಳು ನಾಶ ಆಗಿದ್ದು, ಮುಂದೆ ನಮ್ಮ ಗತಿ ಏನು ಎಂದು ರೈತರು ಚಿಂತಿತರಾಗಿದ್ದಾರೆ.

ಹಳೇಹೆಗ್ಗುಡಿಲು ಗ್ರಾಮದ ಚೆನ್ನಯ್ಯ, ನಿಂಗಯ್ಯ, ಮುತ್ತಯ್ಯ, ರಾಜೇಶ್‌, ರಾಜು, ಪುಟ್ಟಯ್ಯ, ಚಿಕ್ಕಣ್ಣ, ಕಾಂತರಾಜು, ರಾಮಯ್ಯ ಸೇರಿದಂತೆ ಇನ್ನಿತರ ರೈತರ ಜಮೀನುಗಳು ದೊಡ್ಡ ಕಾವಲಿಯಂತೆ ಮಾರ್ಪಟ್ಟಿದ್ದು, ಜಮೀನಿನಲ್ಲಿ ಇದ್ದ ಮರಗಳೆಲ್ಲ ಭಾರಿ ಮಳೆಗೆ ನೆಲಕಚ್ಚಿವೆ. ಈ ಮೊದಲು ಹತ್ತಿ ಹಾಗೂ ರಾಗಿ ಬೆಳೆದು ಹೇಗೋ ಜೀವನ ಮಾಡಿಕೊಂಡಿದ್ದ ಈ ಕಾಡಂಚಿನ ರೈತರು ಈ ವರ್ಷದಿಂದ ಜೋಳವನ್ನು ಸಹ ಬೆಳೆಯಲು ಮುಂದಾಗಿದ್ದರು. ಆದರೆ ಆರಂಭದಲ್ಲೇ ಮಳೆಯ ಆರ್ಭಟಕ್ಕೆ ರೈತರ ಕನಸು ನುಚ್ಚು ನೂರಾಗಿದೆ.

ಒಂದು ಕಡೆ ಆನೆ ಹಾಗೂ ಹಂದಿ ಹಾವಳಿ ಮತ್ತೊಂದು ಕಡೆ ಈ ರೀತಿಯ ಭಾರಿ ಮಳೆ ಹೊಡೆತ. ಈ ನಡುವೆ ಬದುಕುವುದೇ ನಮಗೆ ದುಸ್ತರವಾಗಿದೆ. ಸರ್ಕಾರ ನಮ್ಮಂತಹ ಕಾಡಂಚಿನ ರೈತರ ಸಮಸ್ಯೆಗಳಿಗೆ ಆದಷ್ಟು ಬೇಗ ಸ್ಪಂದನೆ ನೀಡುವ ಮೂಲಕ ನಮಗೆ ಪರಿಹಾರ ನೀಡಬೇಕು. ಈ ಮೂಲಕ ನಮಗೆ ಬದುಕಲು ಅವಕಾಶ ನೀಡಬೇಕು. ಹಾಗೆಯೇ ಬೆಲೆ ಪರಿಹಾರವನ್ನು ಹೆಚ್ಚಿಗೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ರಾಜಧಾನಿಯಲ್ಲಿ ಧರೆಗೆ ಉರುಳಿದ 400ಕ್ಕೂ ಹೆಚ್ಚು ಮರಗಳು : ಬೆಂಗಳೂರಿನಲ್ಲಿ ಕಳೆದ ಎರಡ ದಿನಗಳಿಂದ ಸುರಿದ ಆಲಿಕಲ್ಲು ಸಹಿತ ಮಳೆ ನಗರದಲ್ಲಿ 400ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 1600ಕ್ಕೂ ಅಧಿಕ ಮರಗಳ ಕೊಂಬೆ ಮುರಿದಿವೆ. ರಸ್ತೆಗೆ ಬಿದ್ದ ಮರಗಳಿಂದ ವಾಹನ ಸವಾರರು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಬಿಬಿಎಂಪಿಗೆ 600ಕ್ಕೂ ಅಧಿಕ ದೂರುಗಳು ಬಂದಿವೆ. ಕಬ್ಬನ್ ಪಾರ್ಕ್ ಒಂದರಲ್ಲಿಯೇ 50ಕ್ಕೂ ಹೆಚ್ಚು ಮರಗಳು ಬಿದ್ದಿವೆ.

ರಾಜ್ಯದ ಹಲವೆಡೆ ಮಳೆ, ರೈತರ ಪರಾದಾಟ : ನಿನ್ನೆ ಒಂದು ದಿನ ಸುರಿದ ಆಕಾಲಿಕ ಮಳೆಯಿಂದಾಗಿ ದೊಡ್ಡಬಳ್ಳಾಪುರ, ಬಳ್ಳಾರಿ, ಚಾಮರಾಜನಗರದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕಸವನಹಳ್ಳಿ ಗ್ರಾಮದ ರವಿಚಂದ್ರ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಹೀರೆಕಾಯಿ, ಹೂಕೋಸು, ಶಾವಂತಿಗೆ ಹೂ ತೋಟ ಸಂಪೂರ್ಣ ನಾಶವಾಗಿದೆ. ಇನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ಸುತ್ತಮುತ್ತಲ ಭಾಗಗಳಲ್ಲಿ ಬಾಳೆತೋಟಕ್ಕೆ ಹಾನಿಯಾಗಿದ್ದು, ತಗಡು-ಶೀಟ್ ಮನೆಗಳಿಗೆ ಹಾನಿಯಾಗಿದೆ.

ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರು ಭಾಗದಲ್ಲಿ 2 ಗಂಟೆಗೂ ಅಧಿಕ ಮಳೆಯಾಗಿದ್ದು, ಹಲವೆಡೆ ರಸ್ತೆಗಳಿಗೆ ಮರಗಳು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಹಲವೆಡೆ ಬಾಳೆ, ತರಕಾರಿ ಬೆಳೆ ನೆಲಕ್ಕುರುಳಿದ್ದು ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ : ಎರಡು ದಿನದ ಮಳೆಗೆ ನಗರದಲ್ಲಿ ಉರುಳಿ ಬಿದ್ದಿವೆ ನೂರಾರು ಮರಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.