ಮೈಸೂರು: ಇಲ್ಲಿನ ವಿಮಾನ ನಿಲ್ದಾಣವನ್ನು ವಾಯುಪಡೆಗೆ ನೀಡಬಾರದು ಎಂಬ ಸಂಸದ ಪ್ರತಾಪ್ ಸಿಂಹ ಅವರು ಸಲ್ಲಿಸಿದ ಮನವಿಗೆ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಂದಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣ ಸಂಪೂರ್ಣವಾಗಿ ನಾಗರಿಕರ ಪ್ರಯಾಣದ ಉದ್ದೇಶಕ್ಕೆ ಸೀಮಿತವಾಗಿರಬೇಕು ಹಾಗೂ ಹೆಲಿಕಾಪ್ಟರ್ ನೆಲೆಯಾಗಿಸಲು ಅವಕಾಶ ನೀಡಿದ್ದ ಹಿಂದಿನ ಸರ್ಕಾರದ ತೀರ್ಮಾನವನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿಕೊಂಡಿದ್ದ ಪ್ರತಾಪ್ ಸಿಂಹ ಅವರ ಬೇಡಿಕೆಗಳಿಗೆ ಸಚಿವರು ಸ್ಪಂದಿಸಿದ್ದಾರೆ.
ವಾಯುಪಡೆಗೆ ಈ ವಿಮಾನ ನಿಲ್ದಾಣವನ್ನು ನೀಡಿದರೆ ಭದ್ರತೆ ದೃಷ್ಟಿಯಿಂದ ಕೆಲವು ನಿರ್ಬಂಧ ವಿಧಿಸಭೇಕಾಗುತ್ತದೆ ಹಾಗೂ ಇದರಿಂದ ವಿಮಾನ ನಿಲ್ದಾಣದ ಬೆಳವಣಿಗೆಗೆ ಅಡ್ಡಿಯಾಗುವುದು ಎಂದು ಪ್ರತಾಪ್ ಸಿಂಹ ಮನವಿಯಲ್ಲಿ ಉಲ್ಲೇಖಿಸಿದ್ದರು. ಅದಲ್ಲದೇ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳಲು ಶೀಘ್ರವೇ ಆಸ್ಪದ ಕಲ್ಪಿಸುವಂತೆ ಕೇಳಿಕೊಂಡಿದ್ದಾರೆ.