ETV Bharat / state

ಮೆದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಆರು ಮಂದಿ ಜೀವ ಉಳಿಸಿದ ಯುವಕ

author img

By

Published : Mar 4, 2023, 8:51 PM IST

ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ ಮಾಡಲಾಗಿದೆ.

ಮೆದುಳು ನಿಷ್ಕ್ರಿಯಗೊಂಡ ಯುವಕ ಮಣಿ
ಮೆದುಳು ನಿಷ್ಕ್ರಿಯಗೊಂಡ ಯುವಕ ಮಣಿ

ಮೈಸೂರು: ರಸ್ತೆ ಅಪಘಾತದಲ್ಲಿ ತಲೆ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದು ಆಸ್ಪತ್ರೆ ಸೇರಿದ್ದ 27 ವರ್ಷದ ಮಣಿ ಎಂಬ ಯುವಕನ ಮೆದುಳು ನಿಷ್ಕ್ರಿಯ ಗೊಂಡಿದ್ದು, ಅಂಗಾಂಗ ದಾನ ಮಾಡುವ ಮೂಲಕ 6 ಜನರ ಜೀವ ಉಳಿಸಿದ ಮಣಿ, ಸಾವಿನಲ್ಲೂ ಸಾರ್ತಕತೆ ಮರೆದಿದ್ದಾರೆ. ಹೃದಯ, ಯಕೃತ್ತು, ಎರಡು ಮೂತ್ರಪಿಂಡಗಳು, ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಹೃದಯವನ್ನು ಗ್ರೀನ್ ಕಾರಿಡಾರ್​ ಮೂಲಕ ಬೆಂಗಳೂರಿಗೆ ವರ್ಗಾಯಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಬಂಡಿಗೆರೆ ಗ್ರಾಮದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಣಿ ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಯನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಿಂದ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಮಾ.1 ರಂದು ಕರದೊಯ್ಯಲಾಗಿತ್ತು. ಅಲ್ಲಿ ಸಿಟಿ ಸ್ಕ್ಯಾನ್​ ನಡೆಸಿದ ವೇಳೆ ಅವರ ಮೆದುಳಿನ ಕಾಂಡ ಊದಿಕೊಂಡಿರುವುದು ಪತ್ತೆಯಾಗಿತ್ತು. ತಕ್ಷಣ ಅವರನ್ನು ಜೀವ ರಕ್ಷಕ ವ್ಯವಸ್ಥೆ ಮತ್ತು ತುರ್ತು ಆರೈಕೆಗಾಗಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು.

ಮಾ.2 ರಂದು ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಮಾನವ ಅಂಗಾಂಗ ಕಸಿ ಕಾಯಿದೆ 1994ರ ಶಿಷ್ಟಾಚಾರದ ಅನುಸಾರ ಅಪೋಲೊ ಬಿಜಿಎಸ್ ಆಸ್ಪತ್ರೆ ಮೈಸೂರಿನಲ್ಲಿ ವೈದ್ಯರ ತಂಡವು ಪರಿಶೀಲಿಸಿ ಘೋಷಣೆ ಮಾಡಿತು. ಘಟನೆಗೂ ಮುನ್ನ ಮಣಿ ಅವರು ಆರೋಗ್ಯದಿಂದ ಇದ್ದರಾ ಎಂದು ಮತ್ತಷ್ಟು ಪರೀಕ್ಷೆಗಳ ಮೂಲಕ ಅವರ ಅಂಗಾಂಗಗಳು ದಾನಕ್ಕೆ ಯೋಗ್ಯವಾಗಿವೆ ಎಂಬುದನ್ನು ವೈದ್ಯರು ಖಚಿತಪಡಿಸಿಕೊಂಡರು. ಬಳಿಕ ಮಣಿ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬದವರು ಸ್ವಯಂಪ್ರೇರಿತರಾಗಿ ಮುಂದೆ ಬಂದರು.

ಅಂಗಾಂಗ ಕಸಿ : ಶುಕ್ರವಾರ ಸಂಜೆ 4.48 ವೇಳೆಗೆ ಮಣಿ ಅವರ ಅಂಗಾಂಗಗಳನ್ನು (ಹೃದಯ, ಎರಡು ಮೂತ್ರಪಿಂಡ, ಒಂದು ಯಕೃತ್ತು, ಮತ್ತು ಕಾರ್ನಿಯಾಗಳು) ಬೇರ್ಪಡಿಸಲಾಯಿತು. ಸಂಜೆ 4.33 ರ ಹೊತ್ತಿಗೆ ಅಪೋಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರಿನಲ್ಲಿ ಕ್ರಾಸ್ ಕ್ಲಾಂಪ್ ಪ್ರಕ್ರಿಯೆ ಮೂಲಕ ಅಂಗಾಂಗ ಕಸಿಯನ್ನು ಪೂರ್ಣಗೊಳಿಸಲಾಯಿತು.

ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಹೃದಯ, ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಯಕೃತ್ತು, ಜೆಎಸ್‌ಎಸ್ ಆಸ್ಪತ್ರೆಗೆ ಎಡ ಮತ್ತು ಬಲ ಮೂತ್ರ ಪಿಂಡ, ಕೆ.ಆರ್.ಆಸ್ಪತ್ರೆಗೆ ಕಾರ್ನಿಯಾ ರವಾನೆ ಮಾಡಲಾಯಿತು. ಅಂಗಾಂಗ ದಾನವನ್ನು ಉತ್ತೇಜಿಸುವಲ್ಲಿ ಮತ್ತು ಈ ಉದಾತ್ತ ಉದ್ದೇಶಕ್ಕಾಗಿ ಮುಂದೆ ಬಂದ ಮೃತ ಕುಟುಂಬಕ್ಕೆ ಅಪೋಲೊ ಬಿಜಿಎಸ್ ಆಸ್ಪತ್ರೆ ಧನ್ಯವಾದಗಳನ್ನು ತಿಳಿಸಿದೆ. ಅಲ್ಲದೇ, ಅಪೋಲೊ ಬಿಜಿಎಸ್ ಆಸ್ಪತ್ರೆಯಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತುರ್ತು ಹೃದಯ ವರ್ಗಾವಣೆಗಾಗಿ ಗ್ರೀನ್ ಕಾರಿಡಾರ್‌ ಅನ್ನು ರಚಿಸಲು ಬೆಂಬಲ ನೀಡಿದ ಮೈಸೂರು ನಗರ ಸಂಚಾರ ಪೊಲೀಸ್ ವಿಭಾಗಕ್ಕೆ ಅಪೋಲೊ ಅಸ್ಪತ್ರೆ ಆಡಳಿತ ಮಂಡಳಿ ಧನ್ಯವಾದ ಹೇಳಿದೆ.

ಇದನ್ನೂ ಓದಿ: ಪೋಷಕರ ಇಚ್ಛೆಯ ಮೇರೆಗೆ ಅಂಗಾಂಗ ದಾನ ಮಾಡಿದ ಆಕಾಶ್.. ಅತ್ಯಂತ ಕಿರಿಯ ವಯಸ್ಸಿನ ದಾನಿ ಎಂಬ ಹಿರಿಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.