ETV Bharat / state

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು

author img

By ETV Bharat Karnataka Team

Published : Jan 14, 2024, 5:15 PM IST

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ದಶಪಥ ಹೆದ್ದಾರಿ
ದಶಪಥ ಹೆದ್ದಾರಿ

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಮದ್ದೂರು ಪಟ್ಟಣ ಸಮೀಪದ ಶಿಂಷಾ ನದಿ ಎಲಿವೇಟೆಡ್ ರಸ್ತೆಯಲ್ಲಿ (ಮೇಲು ಸೇತುವೆ ಮೇಲೆ) ಶನಿವಾರ ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಮಂಡ್ಯ ಮಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ಐಸಿಐಸಿಐ ಬ್ಯಾಂಕ್‌ನಲ್ಲಿ (ಹೋಂ ಫೈನಾನ್ಸ್ ವಿಭಾಗ) ಕೆಲಸ ನಿರ್ವಹಿಸುತ್ತಿದ್ದ ಶಂಕರ್, ಮಹದೇವು ಹಾಗೂ ಕಿಶೋರ್ ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದರು. ಶನಿವಾರ ಬೆಳಿಗ್ಗಿನ ಜಾವ 4:30ರ ಸಮಯದಲ್ಲಿ ಬೊಲೆರೋ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಮದ್ದೂರು ಪಟ್ಟಣದ ಎಲಿವೇಟೆಡ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ವಾಹನ ಶಿಂಷಾ ನದಿ ಸೇತುವೆ ಮೇಲೆಯೇ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕ್ಯಾಮರಾ ಕಂಬಕ್ಕೆ ಗುದ್ದಿದೆ. ಇದರಿಂದ ಮೈಸೂರು ಕಡೆಗೆ ಹೋಗುವ ರಸ್ತೆಗೆ ಹೋಗಿ ಕಾರು ಮಗುಚಿ ಬಿದ್ದಿದೆ.

ಡಿಕ್ಕಿಯ ರಭಸಕ್ಕೆ ಮ್ಯಾನೇಜರ್ ಶಂಕರ್ ಸ್ಥಳದಲ್ಲೇ ಮೃತಪಟ್ಟಿದ್ದು, ಮಹದೇವು (ಸಾಲ ವಸೂಲಾತಿ ವಿಭಾಗದ ಮ್ಯಾನೇಜರ್)ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿಶೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಸರಣಿ ರಜೆ ಹಿನ್ನೆಲೆಯಲ್ಲಿ ದಶಪಥ ಹೆದ್ದಾರಿಯಲ್ಲಿ ಕೆಲಕಾಲ ಕಿಲೋ ಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮದ್ದೂರು ಸಂಚಾರಿ ಪೊಲೀಸ್ ಠಾಣೆಯ ಸಬ್​ ಇನ್‌ಸ್ಪೆಕ್ಟರ್​ ಜೆ.ಇ.ಮಹೇಶ್ ಹಾಗೂ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಟ್ರಾಫಿಕ್ ಜಾಮ್ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮದ್ದೂರು ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾರು ಅಪಘಾತ: ಹುಟ್ಟಿದ ದಿನವೇ ಸಾವಿಗೀಡಾದ ಬರ್ತಡೇ ಬಾಯ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.