ETV Bharat / state

KRS ಜಲಾಶಯ ಖಾಲಿ ಖಾಲಿ.. ಮಳೆಗಾಗಿ ಪ್ರಾರ್ಥಿಸಿ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡರಿಂದ ಪರ್ಜನ್ಯ ಹೋಮ..

author img

By

Published : Jun 13, 2023, 4:40 PM IST

ವರುಣನ ಕೃಪೆಗಾಗಿ ಪ್ರಾರ್ಥಿಸಿ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಅವರ ಸಮ್ಮುಖದಲ್ಲಿ ಕೆಆರ್​ಎಸ್​ ಜಲಾಶಯದ ಕಾವೇರಿ ಬಲ ಪ್ರತಿಮೆ ಎದುರು ಪರ್ಜನ್ಯ ಜಪ ಹೋಮ ನೆರವೇರಿಸಲಾಯಿತು.

MLA Rameshbabu Bandisiddegowda
ವರುಣನ ಕೃಪೆಗಾಗಿ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡರಿಂದ ಪರ್ಜನ್ಯ ಹೋಮ

ವರುಣನ ಕೃಪೆಗಾಗಿ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡರಿಂದ ಪರ್ಜನ್ಯ ಹೋಮ..

ಮಂಡ್ಯ: ಮಳೆರಾಯ ಮುನಿಸಿಕೊಂಡಿರುವ ಪರಿಣಾಮ ಎಲ್ಲಾ ಜಲಾಶಯಗಳು ಖಾಲಿ ಖಾಲಿಯಾಗಿವೆ. ಜೊತೆಗೆ ಬೆಳೆಗಳು ಒಣಗಲು ಆರಂಭಿಸಿವೆ. ಇನ್ನೂ ಕೆಲವು ದಿನ ಇದೇ ಪರಿಸ್ಥಿತಿ ಮುಂದುವರಿದರೆ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ. ನಿಗದಿತ ಸಮಯಕ್ಕೆ ಮುಂಗಾರು ಮಳೆಯಾಗದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮಳೆರಾಯ ಕೃಪೆಗಾಗಿ ವಿವಿಧ ಸಾಂಪ್ರದಾಯಿಕ ಆಚರಣೆಗಳ ಮೂಲಕ ದೇವರ ಮೊರೆ ಹೋಗಿರುವ ದೃಶ್ಯಗಳು ಕಂಡುಬರುತ್ತಿವೆ.

ಮಳೆಗಾಗಿ ಪಾರ್ಥಿಸಿ ದೇವರ ಮೊರೆ ಹೋದ ಶಾಸಕರು: ಸ್ವತಃ ಜನಪ್ರತಿನಿಧಿಗಳು ಕೂಡ ವರುಣನ ಕೃಪೆಗಾಗಿ ಪ್ರಾರ್ಥಿಸುವ ಕಾರ್ಯ ತೊಡಗಿದ್ದಾರೆ. ರಾಜ್ಯದಲ್ಲಿ ಬರಗಾಲ ಸಮೀಪಿಸುತ್ತಿದೆ. ಮುಂಗಾರು ಕೈಕೊಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬೆಳೆದು ಬೆಳೆಗಳು ಕೂಡ ಒಣಗುತ್ತಿವೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಇದನ್ನು ಮನಗಂಡು ರಾಜ್ಯಕ್ಕೆ ಏನೂ ತೊಂದರೆಯಾಗಬಾರದು, ಅಣೆಕಟ್ಟೆಗಳು ತುಂಬಬೇಕು, ಮಳೆರಾಯ ಕೃಪೆ ತೋರಲಿ ಎಂದು ಮಂಗಳವಾರ ಶ್ರೀರಂಗಪಟ್ಟಣ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಅವರು ಕೆಆರ್​ಎಸ್​ ಜಲಾಶಯದ ಕಾವೇರಿ ಬಲ ಪ್ರತಿಮೆ ಎದುರು ವಿಶೇಷ ಪೂಜೆ ಪುನಸ್ಕಾರ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಶಾಸಕರು ಪೂಜೆಯಲ್ಲಿ ಕುಳಿತು ವರುಣನ ಆಗಮನವಾಗಲೆಂದು ಬೇಡಿಕೊಂಡ ದೃಶ್ಯ ಕಂಡುಬಂತು.

ಪರ್ಜನ್ಯ ಜಪ, ಹೋಮ: ಡಾ. ಭಾನುಪ್ರಕಾಶ ಶರ್ಮಾ ಅವರ ನೇತೃತ್ವದಲ್ಲಿ 12 ವೈದಿಕರ ತಂಡದಿಂದ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಪರ್ಜನ್ಯ ಜಪ, ಹೋಮ, ಕಳಶ ಸ್ಥಾಪನೆ, ಮಹಾ ಗಣಪತಿ ಪೂಜೆ, ಪುಣ್ಯಹಾದಿ, ಆದಿತ್ಯ ಪೂಜೆ, ಮಳೆ ದೇವತೆಗಳ ಆಹ್ವಾಹನೆ, ರುದ್ರಾಭಿಷೇಕ, ಗಂಗಾಪೂಜೆ ಹಾಗೂ ಮೂಲ ಮಂತ್ರಗಳನ್ನು ಜಪಿಸಲಾಯ್ತು.

ಕೆಆರ್​ಎಸ್​ ಜಲಾಶಯದಲ್ಲಿ ಕೇವಲ 81 ಅಡಿ ನೀರು ಇದೆ: ಪೂಜಾ ಕೈಂಕರ್ಯಗಳು ಮುಗಿದ ಬಳಿಕ ಕಾವೇರಿ ನೀರು ತುಂಬಿದ ದೊಡ್ಡ ಪಾತ್ರೆಯೊಳಗೆ ಮೂವರು ಸ್ವಾಮೀಜಿಗಳು ಕುಳಿತು ಮಂತ್ರ ಪಠಣೆ ಮಾಡಲಾಯ್ತು. ಗರಿಷ್ಠ 124.80 ಅಡಿ ಸಾಮರ್ಥ್ಯವಿರುವ ಕೆಆರ್​ಎಸ್​ ಜಲಾಶಯದಲ್ಲೀಗ ಕೇವಲ 81 ಅಡಿ ನೀರು ಮಾತ್ರ ಇದೆ. ಇದೇ ರೀತಿ ಮಳೆ ಅಭಾವದ ವಾತಾವರಣ ಮುಂದುವರೆದರೆ, ಜನ ತತ್ತರಿಸಿ ಹೋಗುತ್ತಾರೆ. ದೇವರ ದಯೆಯಿಂದ ಈಗ ನಡೆಸಿರೋ ಪರ್ಜನ್ಯ ಹೋಮ ಹಾಗೂ ಪೂಜೆಗಳು ಫಲ ಕೊಡುತ್ತಾ? ಮಳೆರಾಯ ಕೃಪೆ ತೋರುವನಾ ಎಂಬುದನ್ನು ಕಾದು ನೋಡಬೇಕಿದೆ.

ವರುಣನ ಕೃಪೆಗಾಗಿ ದೇವರ ಮೊರೆ ಹೋದ ರೈತರು: ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬೆಳೆಗಳು ಒಣಗಲು ಆರಂಭಿಸಿವೆ. ರೈತರು ಆಕಾಶದತ್ತ ನೋಡ್ತಾ ಕೂರುವ ಸ್ಥಿತಿ ನಿರ್ಮಾಣವಾಗಿದೆ. ರೈತರು ಮಳೆರಾಯನ ಕೃಪೆಗಾಗಿ ದೇವರ ಮೊರೆ ಹೋಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದ ರೈತರು, ಮಳೆ ಇಲ್ಲದೇ ಹೈರಾಣಾಗಿ ಹೋಗಿದ್ದು, ದೇವರ ಮೊರೆ ಹೋಗಿ ಕಂಬಳಿ ಬೀಸುವ ಮೂಲಕ ಮಳೆರಾಯನಿಗೆ ಆಹ್ವಾನಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಆಕಾಶದತ್ತ ಕಂಬಳಿಯನ್ನು ಬೀಸಿ ವರುಣ ದೇವರ ಕೃಪೆಗಾಗಿ ರೈತರು ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಿದ್ದರು. ಮಲೆ ಕುಂಬಳೂರು ಗುಡ್ಡದ ಮೇಲಿರೋ ಕೊಲ್ಲಾಪುರ ಲಕ್ಷ್ಮೀಗೆ ಕಂಬಳಿ ಹಾಸಿ ಮಳೆಗಾಗಿ ವಿಶೇಷ ಪೂಜೆ ಮಾಡಿದ್ದರು. ರೈತರು, ದೇವದ ಮೊರೆ ಹೋಗುವ ಮೂಲಕ ಮೋಡಗಳತ್ತ ಕಂಬಳಿ ಬೀಸಿದ್ದರು. ಕಂಬಳಿ ಬೀಸುವ ಪದ್ಧತಿ ತುಂಬಾ ಹಿಂದಿನಿಂದಲೂ ಆಚರಣೆಯಲ್ಲಿದೆ.

ಇದನ್ನೂ ಓದಿ: Pilikula Park Mangaluru: ಅರಣ್ಯ ಇಲಾಖೆ ಸುಪರ್ದಿಗೆ ಹೋಗಲಿದೆ ಪಿಲಿಕುಳ ಜೈವಿಕ‌ ಉದ್ಯಾನವನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.