ETV Bharat / state

ಮಗಳನ್ನು ಪ್ರೀತಿಸಿದ ಬಾಲಕನ ಪ್ರಾಣ ತೆಗೆದ ಸ್ಥಾಯಿ ಸಮಿತಿ ಅಧ್ಯಕ್ಷ .. ಮಂಡ್ಯದಲ್ಲಿ 17 ಆರೋಪಿಗಳ ಬಂಧನ

author img

By

Published : Apr 28, 2021, 7:44 PM IST

Municipal council member and police officer arrested in link with murder case
ಪ್ರೀತಿಸಿದಕ್ಕೆ ಕೊಲೆ ಪ್ರಕರಣ

ಮಂಡ್ಯ ಜಿಲ್ಲೆಯಲ್ಲಿ ಚೆಲುವಿನ ಚಿತ್ತಾರ ಸಿನಿಮಾದಂತೆ ದುರಂತ ಕಥೆಯೊಂದು ನಡೆದಿದೆ. ಕಲ್ಲಹಳ್ಳಿಯ 17 ವರ್ಷದ ಬಾಲಕ ಅದೇ ಬಡಾವಣೆಯ ಬಾಲಕಿಯನ್ನು ಪ್ರೀತಿಸುತ್ತಿದ್ದ. ಈ ಕಾರಣಕ್ಕೆ ಆಕೆಯ ಕುಟುಂಬಸ್ಥರು ಬಾಲಕನನ್ನು ಮನೆಗೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು. ಬಳಿಕ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ: ತಮ್ಮ ಮಗಳೊಂದಿಗೆ ಪ್ರೀತಿ-ಪ್ರೇಮ ಅಂತಾ ತಿರುಗಾಡಿದ್ದ ಬಾಲಕನಿಗೆ ಹುಡುಗಿಯ ಕುಟುಂಬಸ್ಥರು ಮಸಣದ ಹಾದಿ ತೋರಿಸಿದ್ದಾರೆ. ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಪ್ರಕರಣ ನಡೆದಿದ್ದು, ಈ ಸಂಬಂಧ 17 ಜನ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಹೌದು, ಅಪ್ರಾಪ್ತ ವಯಸ್ಸಿನಲ್ಲೇ ಅವರಿಬ್ಬರಲ್ಲಿ ಪ್ರೀತಿ ಚಿಗುರೊಡೆದಿತ್ತು. ಇದು ಹುಡುಗಿಯ ಪೋಷಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಪ್ರೀತಿ ಮುಂದುವರಿದು, ಮುಂದೆ ಹೆಮ್ಮರವಾಗಿ ಬೆಳೆದೀತು ಎಂದು ಬಾಲಕನನ್ನು ಮನೆಗೆ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದರು ಬಾಲಕಿಯ ಪೋಷಕರು. ಹೀಗೆ ಹೊಡೆತ ತಿಂದ ಆತ ಚಿಕಿತ್ಸೆ ಫಲಿಸದೇ ಪ್ರಾಣ ಬಿಟ್ಟಿದ್ದಾನೆ. ಈ ಸಂಬಂಧ ಆರೋಪಿಗಳಾದ ನಗರಸಭೆ ಸದಸ್ಯ ಶಿವಲಿಂಗು ಹಾಗೂ ಪಿಎಸ್ಐ ಶಿವಮಂಜು ಅವರ ಇಬ್ಬರು ಪುತ್ರರು ಸೇರಿ ಒಟ್ಟು 17 ಮಂದಿಯನ್ನು ಮಂಡ್ಯದ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದಿಷ್ಟು..

ಕಲ್ಲಹಳ್ಳಿಯ 17 ವರ್ಷದ ಬಾಲಕ ಅದೇ ಬಡಾವಣೆಯ ಬಾಲಕಿಯನ್ನು ಪ್ರೀತಿಸುತ್ತಿದ್ದ. ಈ ಕಾರಣಕ್ಕೆ ಬಾಲಕಿಯ ಮನೆಯವರು ಆತನನ್ನು ಮನೆಗೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು. ಬಾಲಕಿಯ ತಂದೆ ಕಲ್ಲಹಳ್ಳಿ ಶಿವಲಿಂಗು ಎಂಬುವರು ಹಲ್ಲೆ ಮಾಡಿದ್ದು, ಇವರು ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ನಗರಸಭೆ ಸದಸ್ಯ, ಪೊಲೀಸ್ ಅಧಿಕಾರಿ ಮಕ್ಕಳು ಸೇರಿ 17 ಮಂದಿ ಬಂಧನ

ಇಬ್ಬರ ಪ್ರೀತಿಗೆ ಬಾಲಕಿಯ ಮನೆಯಲ್ಲಿ ವಿರೋಧವಿತ್ತು. ಎರಡ್ಮೂರು ಬಾರಿ ಹುಡುಗಿಯ ತಂದೆ ಹುಡುಗನಿಗೆ ಎಚ್ಚರಿಕೆ ನೀಡಿ, ತನ್ನ ಮಗಳ ಸಹವಾಸಕ್ಕೆ ಬರದಂತೆ ಬೆದರಿಕೆ ಹಾಕಿದ್ದರು ಎನ್ನಲಾಗ್ತಿದೆ. ಆದರೂ ಇಬ್ಬರ ಪ್ರೀತಿ ಮುಂದುವರೆದಿತ್ತು. ಇದೇ ಏಪ್ರಿಲ್ 14ರಂದು ಬಾಲಕಿಯ ಮನೆಗೆ ಬಂದಿದ್ದ ಬಾಲಕನಿಗೆ ಶಿವಲಿಂಗು ಮತ್ತು ಅವರ ಪತ್ನಿ ಅನುರಾಧ ಸೇರಿದಂತೆ ಸಂಬಂಧಿಕರು ಥಳಿಸಿದ್ದರು ಎನ್ನಲಾಗ್ತಿದೆ.

ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ. ಈ ಪ್ರಕರಣ ಸಂಬಂಧ 17 ಮಂದಿಯನ್ನು ಬಂಧಿಸಿರುವುದಾಗಿ ಎಸ್​ಪಿ ಅಶ್ವಿನಿ ಮಾಹಿತಿ ನೀಡಿದ್ದಾರೆ.

ಸಾಂತ್ವನ ಕೇಂದ್ರದಲ್ಲಿ ಬಾಲಕಿ..

ಘಟನೆ ಬಳಿಕ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು ಬಾಲಕಿಯ ಮನೆಗೆ ಪೊಲೀಸ್​ ಬಂದೋಬಸ್ತ್ ಒದಗಿಸಿದ್ದಾರೆ. ಬಾಲಕಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.