ETV Bharat / state

ಜೆಡಿಎಸ್ ಭದ್ರಕೋಟೆಯಲ್ಲಿ ಯಡಿಯೂರಪ್ಪ ಅಬ್ಬರ.. ಬಿಜೆಪಿ ಅಭ್ಯರ್ಥಿ ಪರ ತವರಿನಲ್ಲಿ ಮತಬೇಟೆ

author img

By

Published : May 4, 2023, 11:10 PM IST

ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಅವರು ತಮ್ಮ ಹುಟ್ಟೂರಾದ ಕೆ ಆರ್​ ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಸಿದರು.

ಜೆಡಿಎಸ್ ಭದ್ರಕೋಟೆಯಲ್ಲಿ ಮಾಜಿ ಸಿಎಂ ಬಿಎಸ್​ವೈ ಅಬ್ಬರ
ಜೆಡಿಎಸ್ ಭದ್ರಕೋಟೆಯಲ್ಲಿ ಮಾಜಿ ಸಿಎಂ ಬಿಎಸ್​ವೈ ಅಬ್ಬರ

ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ

ಮಂಡ್ಯ : ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಇಂದು ಮಾಜಿ ಸಿಎಂ ಯಡಿಯೂರಪ್ಪ ಅಬ್ಬರದ ಪ್ರಚಾರ ನಡೆಸಿದರು. ಬಿಎಸ್​ವೈ ಹುಟ್ಟೂರು ಕೆ. ಆರ್ ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಸಿದರು. ಪ್ರಚಾರ ಸಭೆಗೂ ಮುನ್ನವೇ ಪಟ್ಟಣದ ಹೆಲಿಪ್ಯಾಡ್ ಬಳಿಯಿಂದ ಕಾರ್ಯಕರ್ತರು ಬೃಹತ್ ಬೈಕ್ ರ್‍ಯಾಲಿ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.

ಬಿಎಸ್​ವೈ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಗ್ರಾಮ ದೇವತೆ ಗೋಗಾಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ತಮ್ಮ ಹುಟ್ಟೂರಿನ ನಿವಾಸಕ್ಕೆ ಭೇಟಿ ಕೊಟ್ಟು ದೇವರ ಮನೆಯಲ್ಲಿ ಪೂಜೆ ಸಲ್ಲಿಸಿದರು. ತರುವಾಯ ಪ್ರಚಾರ ಸಭೆಗೆ ಜ್ಯೋತಿ ಬೆಳಗುವ ಮೂಲಕ ಚಾಲನೆ ಕೊಟ್ಟು ಅಬ್ಬರದ ಪ್ರಚಾರ ನಡೆಸಿದರು.

ಸಚಿವ ಕೆ ಸಿ ನಾರಾಯಣ್ ಗೌಡ

ಇದೇ ವೇಳೆ ಮಾತನಾಡಿದ ಸಚಿವ ಕೆ ಸಿ ನಾರಾಯಣ್​ಗೌಡ ಅವರು, ಬಿ ಎಸ್​ ಯಡಿಯೂರಪ್ಪನವರು ಸಿಎಂ ಆಗುತ್ತಾರೆ ಅಂತ ಜೆಡಿಎಸ್ ತೊರೆದು ಬಿಜೆಪಿ ಸೇರಿದೆ. ನಾನು 700 ಕೋಟಿ ಹಣ ನೀಡುವಂತೆ ಕೇಳ್ದೆ. ಅವರು 1 ಸಾವಿರ ಕೋಟಿ ಹಣ ಕೊಡ್ತೀನಿ ಅಂತ ಹೇಳಿದ್ರು. 1800 ಕೋಟಿ ಹಣವನ್ನು ಕೆ ಆರ್ ಪೇಟೆ ತಾಲೂಕಿಗೆ ಕೊಟ್ರು. ಇನ್ನು ಒಳ್ಳೆಯ ಕೆಲಸ ಮಾಡುವ ಕಾಲ ಬರುತ್ತೆ. ಯಡಿಯೂರಪ್ಪ ಅವ್ರ ನೇತೃತ್ವದಲ್ಲಿ ಬಿಜೆಪಿಗೆ 130 ಸೀಟ್ ಬರುತ್ತೆ. ಅಮಿತ್ ಶಾ, ಮೋದಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರ ಮಾಡ್ತಿದ್ದಾರೆ. ನೀವು ಮತ್ತೊಮ್ಮೆ ಗೆಲ್ಲಿಸಿಕೊಟ್ರೆ ನಿಮ್ಮ ಸೇವೆ ಮಾಡ್ತೀನಿ ಎಂದು ಹೇಳಿದ್ರು.

ಬಳಿಕ ವೇದಿಕೆಯಲ್ಲಿ ಭಾಷಣ ಮಾಡಿದ ಸಂಸದೆ ಸುಮಲತಾ, ಬಿ ಎಸ್​ ಯಡಿಯೂರಪ್ಪ ಅವರು 2019ರಲ್ಲಿ ಸಿಎಂ ಆಗುವ ಮೊದಲು ಸಂಸದರ ಸಭೆ ಕರೆದಿದ್ರು. ಆಗ ಮೈಶುಗರ್ ಕಾರ್ಖಾನೆ ಪುನಶ್ಚೇತನ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ಸಿಎಂ ಆದ ಕೂಡಲೇ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಕ್ರಮ ತೆಗೆದುಕೊಂಡ್ರು. ಹೇಳಿದ್ದನ್ನೇ ಮಾಡ್ತಾರೆ, ಮಾಡಿದ್ದನ್ನೇ ಹೇಳ್ತಾರೆ ಅಂದ್ರೆ ಅದು ಯಡಿಯೂರಪ್ಪ. ಅಂಬರೀಶ್ ತೀರಿಕೊಂಡಾಗ ಮೈತ್ರಿ ಸರ್ಕಾರ ಇತ್ತು. ಕಾಂಗ್ರೆಸ್ ನಾಯಕರಾಗಲಿ, ಜೆಡಿಎಸ್ ನಾಯಕರಾಗಲಿ ಅಂಬರೀಶ್ ಹೆಸರನಲ್ಲಿ ಏನೂ ಮಾಡಲಿಲ್ಲ. ಚಿತ್ರರಂಗದವರು ಹೋಗಿ ಕೇಳಿಕೊಂಡಾಗ ಮನವಿ ಪತ್ರವನ್ನ ಕುಮಾರಸ್ವಾಮಿ ಎಸೆದ್ರು.

ಯೋಚನೆ ಮಾಡಿ ನಾರಾಯಣಗೌಡರಿಗೆ ಮತ ಹಾಕಿ: ಅದೇ ಯಡಿಯೂರಪ್ಪ ಸಿಎಂ ಆದಾಗ ಸ್ಮಾರಕಕ್ಕೆ 5 ಕೋಟಿ ರೂ. ಬಿಡುಗಡೆ ಮಾಡಿದ್ರು. ಕೆ ಆರ್ ಪೇಟೆಗೆ 1,800 ಕೋಟಿಯನ್ನ ನಾರಾಯಣಗೌಡ ತಂದಿದ್ದಾರೆ. ನಾನು ಕೇಂದ್ರದಿಂದ ಕೆ ಆರ್ ಪೇಟೆಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ 700 ಕೋಟಿ ಅನುದಾನ ತಂದಿದ್ದೇನೆ. ಅಕ್ಕಪಕ್ಕದ ಜಿಲ್ಲೆಗಳು ಅಭಿವೃದ್ಧಿ ಆಗುತ್ತವೆ. ಆದ್ರೆ ಮಂಡ್ಯ ಜಿಲ್ಲೆ ಅಭಿವೃದ್ಧಿ ಯಾಕೆ ಆಗುತ್ತಿಲ್ಲ ಅನ್ನೋದನ್ನ ಅರಿಯಬೇಕು. ಒಂದು ಕುಟುಂಬದ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷಕ್ಕೆ ವೋಟ್ ಹಾಕಬೇಡಿ. ಕಾಂಗ್ರೆಸ್​​ನಲ್ಲಿ ಅಭ್ಯರ್ಥಿಗಳೇ ಇಲ್ಲದೆ, ಬೇರೆ ಪಕ್ಷದವರನ್ನ ಕರೆತಂದು ಟಿಕೆಟ್ ಕೊಟ್ಟಿದ್ದಾರೆ. ನೀವು ಯೋಚನೆ ಮಾಡಿ ನಾರಾಯಣಗೌಡರಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ಸಂಸದೆ ಸುಮಲತಾ ಅಂಬರೀಶ್​

ನಾರಾಯಣಗೌಡರು ಮತ್ತೊಮ್ಮೆ ಸಚಿವರಾಗಲಿದ್ದಾರೆ ಎನ್ನುತ್ತ ಭಾಷಣ ಆರಂಭಿಸಿದ ಬಿಎಸ್‌ವೈ, ಉರಿಬಿಸಿಲಿನ ಧಗೆ ಕಡಿಮೆ ಆಗದಿದ್ರು ಆತ್ಮೀಯತೆಯಿಂದ ಕುಳಿತಿದ್ದಕ್ಕೆ ಜನರಿಗೆ ಧನ್ಯವಾದ. ಶನಿವಾರ ಸಂತೆಗೆ ತರಕಾರಿ ಮಾರಲು ಅಣ್ಣನ ಜೊತೆ ಹೋಗ್ತಿದ್ದೆ. ಆ ಕಾಲದಲ್ಲಿ ಬಹಳ ಕಷ್ಟವಿತ್ತು. ಆಗ ನಮ್ಮನ್ನ ಸಾಕಿದ್ದು ನಮ್ಮಣ್ಣ. ನಮ್ಮ ಮಾವ ಬಸವರಾಜಪ್ಪ. ಪಂಚಾಯತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂಜರಿಯುವ ಕಾಲದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಬಿ ಎಸ್​ ಯಡಿಯೂರಪ್ಪ. ಪಕ್ಷ ಸಂಘಟನೆ ಮಾಡಿ ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತೇವೆ. ರಾಜ್ಯದ ಉದ್ದಗಲ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡ್ತೀನಿ. ಕೊನೆ ಉಸಿರು ಇರುವ ತನಕ ಪಕ್ಷ ಕೊಟ್ಟ ಸ್ಥಾನಮಾನ ಮರೆಯಲ್ಲ ಎಂದು ಹೇಳಿದರು.

ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ: ಚುನಾವಣೆಗೆ ನಿಲ್ಲಲು ಪಕ್ಷ ಸಂಘಟನೆ ಮಾಡ್ತೀನಿ ಎಂದಿದ್ದೆ. ರಾಜ್ಯದಲ್ಲಿ 135ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ತರಲಿದ್ದೇವೆ. ಕಾಂಗ್ರೆಸ್ ಕಾಲ ಮುಗಿದಿದೆ. ನರೇಂದ್ರ ಮೋದಿ, ಅಮಿತ್ ಶಾ ಮುಂದೆ ರಾಹುಲ್ ಗಾಂಧಿ ಸಮವಾಗಲು ಸಾಧ್ಯವೇ?. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬೀಡುಬಿಟ್ಟು ಕೆಲಸ ಮಾಡಿದ್ರು ಗೆಲ್ಲಲು ಸಾಧ್ಯವಾಗಿದ್ದು 4-5 ಸ್ಥಾನ ಮಾತ್ರ. ನನ್ನ ಹುಟ್ಟು ಹಬ್ಬಕ್ಕೆ ಪ್ರಧಾನಿಗಳು ಬಂದಾಗ 4-5 ಲಕ್ಷ ಜನ ಸೇರಿದ್ರು. ಮೋದಿ ನನ್ನ ಮೇಲೆ ಇಟ್ಟಿರುವ ಪ್ರೀತಿ ಎಲ್ಲರಿಗೂ ಗೊತ್ತಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ಸುಮಲತಾ ಸೇರಿ 25 ಸ್ಥಾನ ಗೆದ್ದಿದ್ದೆವು. ಅದೇ ಮುಂದೆಯೂ 25 ಸ್ಥಾನ ಗೆಲ್ಲುತ್ತೇವೆ. ಎಲ್ಲಾ ವರ್ಗದ ಜನ ಬಿಜೆಪಿ ಪರವಿದ್ದಾರೆ. ಮುಚ್ಚಿದ್ದ ಮೈಶುಗರ್ ಕಾರ್ಖಾನೆ ಪ್ರಾರಂಭಿಸಿದ್ದೇವೆ. ಕಬ್ಬಿಗೆ ಹೆಚ್ಚಿನ ಬೆಲೆ ಕೊಡ್ತಿದ್ದೇವೆ. ಮೂರು ಸಿಲಿಂಡರ್ ಉಚಿತ ಕೊಡಲು ತೀರ್ಮಾನ ಮಾಡಿದ್ದೇವೆ. ಬಿಜೆಪಿ ಕಾರ್ಡುದಾರರಿಗೆ ಪ್ರತಿನಿತ್ಯ ಅರ್ಧ ಲೀ ನಂದಿನಿ ಹಾಲು, ಹತ್ತು ಕೆಜಿ ಅಕ್ಕಿ ಹತ್ತು ಲಕ್ಷ ಮನೆ ಕಟ್ಟಿಕೊಡುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಜೆಡಿಎಸ್ ತುಳಿಯುತ್ತೇನೆಂದ ಶಿವಲಿಂಗೇಗೌಡರ ರಾಜಕೀಯಕ್ಕೆ ಅಂತ್ಯ ಹಾಡಿ: ಹೆಚ್ ಡಿ ದೇವೇಗೌಡ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.