ಕೊಪ್ಪಳ: ಬೆತ್ತಲೆಯಾಗಿ ಪೂಜೆ ಮಾಡಿದರೆ ನಿಮ್ಮ ತಂದೆ ಮಾಡಿದ ಸಾಲ ತೀರುತ್ತೆ ಎಂದು ಹೇಳಿ ಅಪ್ರಾಪ್ತನನ್ನು ಬೆತ್ತಲೆ ಪೂಜೆ ಮಾಡಿದ್ದ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಪ್ಪಳ ತಾಲೂಕಿನ ಹಾಸಗಲ್ನ ಬಾಲಕನನ್ನು ಬೆತ್ತಲೆ ಮಾಡಿ ಆತನ ಅಂಗಾಂಗಗಳಿಗೆ ಪೂಜೆ ಮಾಡಿರುವ ಘಟನೆ ನಡೆದಿತ್ತು.
ಆರೋಪಿಗಳಾದ ಶರಣಪ್ಪ ತಳವಾರ, ವಿರುಪನಗೌಡ ಹಾಗೂ ಶರಣಪ್ಪ ಓಜನಳ್ಳಿ ಎಂಬುವರನ್ನು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಜೂನ್ 16ರಂದು ಘಟನೆ ನಡೆದಿತ್ತು. ಬಾಲಕನ ಬೆತ್ತಲೆ ಪೂಜೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಈ ಸಂಬಂಧ ಅಪ್ರಾಪ್ತನ ತಂದೆ ಭಾನುವಾರ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.
ಘಟನೆ ಹಿನ್ನೆಲೆ: ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ಅಪ್ರಾಪ್ತ ಸೇರಿದಂತೆ ಇನ್ನುಳಿದ ಕೆಲವರು ಜೆಜೆಎಂ ಕೆಲಸಕ್ಕೆಂದು ಹುಬ್ಬಳ್ಳಿಯ ತಿಮ್ಮಾಪುರಕ್ಕೆ ಹೋಗಿದ್ದಾಗ ಈ ಘಟನೆ ಜರುಗಿತ್ತು. ಕೆಲಸಕ್ಕೆಂದು ತೆರಳಿದ ಸಂದರ್ಭದಲ್ಲಿ ಅವರು ತಂಗಲು ನೀಡಿದ್ದ ಕೋಣೆಯೊಂದರಲ್ಲಿ ಬಾಲಕನನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ದರು. ಆರೋಪಿಗಳು ಬೆತ್ತಲೆಯಾಗಿ ಪೂಜೆ ಮಾಡಿದರೆ ನಿಮ್ಮ ತಂದೆಯ ಸಾಲ ತೀರುತ್ತದೆ ಎಂದು ಬಾಲಕನನ್ನು ಪುಸಲಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ಬೆತ್ತಲೆಗೊಳಿಸಿ ಪೂಜೆ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಕೂಡಲೇ ಅವರನ್ನ ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದರು. ಅದರಂತೆ ಸೋಮವಾರ ಮೂವರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.
ಓದಿ: ಎನ್ಟಿಐ ಹೌಸಿಂಗ್ ಸೊಸೈಟಿ ವಂಚನೆ ಪ್ರಕರಣ: ಕಾರ್ಪೋರೇಟ್ ಮಾದರಿಯಲ್ಲಿ ದಂಧೆಗಿಳಿದಿದ್ದರಾ ಆರೋಪಿಗಳು?