ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಜೋಡೆತ್ತುಗಳ ಹಾಗೆ ಇದ್ದವರು. ಇಂದು ಚಿರತೆಗಳ ಹಾಗೆ ಕಚ್ಚಾಡುತ್ತಿದ್ದಾರೆ. ಅವರಿಬ್ಬರಿಗೂ ಸಿಎಂ ಖುರ್ಚಿ ಚಿಂತೆಯಾಗಿದೆ. ಆದರೆ ಸದ್ಯ ಅದು ಖಾಲಿ ಇಲ್ಲ, ಮುಂದೆಯೂ ಅದು ಬಿಜೆಪಿಯದ್ದೇ ಎಂದು ಸಚಿವ ಶ್ರೀರಾಮುಲು ಹೇಳಿದರು.
ನಗರದಲ್ಲಿಂದು ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2018 ರಲ್ಲಿ ಕಾಂಗ್ರೆಸ್ ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿತ್ತು. ಅದರ ಪಾಪದ ಫಲವಾಗಿ ಸರ್ಕಾರ ಉರುಳಿತು. ಇವತ್ತು ಪರಿಸ್ಥಿತಿ ಬೇರೆ ಇದೆ. ಎಲ್ಲಾ ವಿಚಾರದಲ್ಲಿ ಬಿಜೆಪಿ ಮುಂದಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ನ ಈ ಎರಡು ಚಿರತೆಗಳು ಏನೇ ಕಾದಾಟ ನಡೆಸಿದರೂ, ಇವರಿಗಂತು ಖುರ್ಚಿ ಸಿಗುವುದಿಲ್ಲ. ಬಿಜೆಪಿ 150 ಸೀಟುಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದ್ದು, ಮತ್ತೆ ಬಸವರಾಜ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡಲಿದ್ದೇವೆ ಎಂದು ಘೋಷಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಬಳ್ಳಾರಿಗೆ ಕರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಸಿದ್ದರಾಮಯ್ಯಗೆ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದು. ಮೀಸಲಾತಿ ನೀಡುವ ಕುರಿತು ನನ್ನ ಬಗ್ಗೆ ಅವಹೇಳನಕಾರಿಯಾಗಿ ಪಕ್ಷದವರು ಮಾತನಾಡಿದ್ದರು. ಈ ಕಾರಣಕ್ಕೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಚಿವ ಶ್ರೀರಾಮುಲು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಆರ್ಬಿಐ ದೇಶದ ಆರ್ಥಿಕತೆಯ ರಕ್ಷಕ, ಸಂವಿಧಾನ ಪ್ರಜಾಪ್ರಭುತ್ವದ ಆತ್ಮ: ಸಿಎಂ ಬೊಮ್ಮಾಯಿ