ETV Bharat / state

ಗಂಗಾವತಿ: ಮುರುಕುಂಬಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

author img

By

Published : Mar 20, 2023, 10:23 PM IST

ಗ್ರಾಮದ ರಸ್ತೆ ದುರಸ್ತಿ ಕಾರ್ಯ ಅಪೂರ್ಣ ಹಿನ್ನೆಲೆಯಲ್ಲಿ ಮುರುಕುಂಬಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

murukumbi-villagers-warn-of-election-boycott
ಗಂಗಾವತಿ: ಮುರುಕುಂಬಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಗಂಗಾವತಿ(ಕೊಪ್ಪಳ): ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ಗಂಗಾವತಿ ತಾಲೂಕಿನ ಗ್ರಾಮದ ಜನರು ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ಬೇಡಿಕೆಗೆ ಜನಪ್ರತಿನಿಧಿಗಳಿಂದ ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ಜನರ ಸಮಸ್ಯೆಗೆ ಸ್ಪಂದಿಸದ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಧೋರಣೆಗೆ ಬೇಸತ್ತ ಕನಕಗಿರಿ ವಿಧಾನಸಭಾ ಕ್ಷೇತ್ರದ ಕೇಸರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರುಕುಂಬಿ ಗ್ರಾಮಸ್ಥರು 2023ರ ವಿಧಾನಸಭಾ ಚುನಾವಣೆ ಬಹಿಷ್ಕರಿಸುವ ನಿರ್ಣಯಕ್ಕೆ ಬಂದಿದ್ದಾರೆ. ಕೇಸರಟ್ಟಿ-ಹಣವಾಳ ಗ್ರಾಮಗಳ ಮಧ್ಯೆ ಇರುವ 6 ಕಿ.ಮೀ. ರಸ್ತೆ ದುರಸ್ತಿ ಕಾರ್ಯ ಅಪೂರ್ಣವಾಗಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹದಗೆಟ್ಟ ರಸ್ತೆಗೆ 3.5 ಕೋಟಿ: ಕೇಸರಹಟ್ಟಿಯಿಂದ ಹಣವಾಳ ಗ್ರಾಮಕ್ಕೆ ಇರುವ ಕೇವಲ 6 ಕಿ.ಮೀ ರಸ್ತೆ ದುರಸ್ತಿಗಾಗಿ ಈಗಾಗಲೇ 3.5 ಕೋಟಿ ಮೊತ್ತದ ಅನುದಾನ ನಾನಾ ಇಲಾಖೆಯ ಯೋಜನೆಗಳನ್ನು ಎತ್ತುವಳಿ ಮಾಡಲಾಗಿದೆ. ಆದರೆ ರಸ್ತೆ ಮಾತ್ರ ಸರಿಯಾಗಿಲ್ಲ. ಇತ್ತ ಗ್ರಾಮ ಪಂಚಾಯತಿಯ ಕೆಲ ಸದಸ್ಯರು ಮತ್ತು ಶಾಸಕ ಬಸವರಾಜ ದಢೇಸ್ಗೂರು ಅವರ ಬೆಂಬಲಿಗರು ರಸ್ತೆ ನಿರ್ಮಾಣದ ನೆಪದಲ್ಲಿ ಬಿಲ್ ಮಾಡಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಗ್ರಾಮದ ಯುವಕ ಬಸವರಾಜ ನಾಯಕ್, ಕೇಸರಹಟ್ಟಿ- ಹಣವಾಳ ಗ್ರಾಮಗಳ ಮಧ್ಯೆ ಮರಕುಂಬಿ ಗ್ರಾಮವಿದೆ. ನಮ್ಮ ಗ್ರಾಮ ಈ ಎರಡು ಗ್ರಾಮಗಳಿಗೆ ಸಮಾನ ಅಂತರದಲ್ಲಿದೆ. ಸುಮಾರು ಆರು ಕಿಲೋಮೀಟರ್ ಉದ್ದದ ರಸ್ತೆ ದುರಸ್ತಿಗೆ ಕಳೆದ ಐದು ವರ್ಷದಿಂದ ಸಹಾಸ ಮಾಡಲಾಗುತ್ತಿದೆ. ಹಿಂದೆ ರಸ್ತೆಯನ್ನು ಬಗೆದು ಕಲ್ಲು ಮತ್ತು ಮಣ್ಣು ಹಾಕಲಾಗಿತ್ತು. ನಂತರ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ರಸ್ತೆ ಕಾಮಗಾರಿ ಅಪೂರ್ಣವಾಗಿದೆ. ಈ ಅಪೂರ್ಣ ರಸ್ತೆಯಲ್ಲಿ ಶಾಲಾ-ಕಾಲೇಜು ಮಕ್ಕಳ ಓಟಾಡ, ದ್ವಿಚಕ್ರ, ಆಟೋಗಳ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿದೆ ಎಂದರು.

ಕೇಸರಹಟ್ಟಿ ಮತ್ತು ಗಂಗಾವತಿಗೆ ಪ್ರತಿನಿತ್ಯ ನೂರಾರು ಶಾಲಾ-ಕಾಲೇಜುಗಳ ಮಕ್ಕಳು, ಚಿಕಿತ್ಸೆಗಾಗಿ ಅನಾರೋಗ್ಯ ಪೀಡಿತರು, ಗರ್ಭಿಣಿಯರು ಸಂಚರಿಸುತ್ತಾರೆ. ಆದರೆ ಸೂಕ್ತ ರಸ್ತೆ ಇಲ್ಲದ ಕಾರಣಕ್ಕೆ ಸಾರಿಗೆ ಇಲಾಖೆಯ ವಾಹನ ಸೇರಿದಂತೆ ಆಟೋಗಳು ಗ್ರಾಮಕ್ಕೆ ಬರುತ್ತಿಲ್ಲ ಎಂದರು.

ಡಿಸಿ ಗಮನಕ್ಕಿದ್ದರೂ ಇಲ್ಲದ ಪರಿಹಾರ: ಎರಡು ವರ್ಷದ ಹಿಂದೆ ಆಗಿನ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಾಲ್ಕರ್ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಈ ರಸ್ತೆಯ ಬಗ್ಗೆ ಅವರ ಗಮನಕ್ಕೆ ತರಲಾಗಿತ್ತು. ಸಾಕಷ್ಟು ಬಾರಿ ಮಾಧ್ಯಮದ ಮೂಲಕವೂ ಸಂಬಂಧಿತ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ರಸ್ತೆ ಮಾತ್ರ ದುರಸ್ತಿಯಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕೂಡಲೇ ಸರ್ಕಾರಿ ಅಧಿಕಾರಿಗಳು ಗಮನ ಹರಿಸಿ ಕೇಸರಹಟ್ಟಿ ಹಣವಾಳ್ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕನಕಗಿರಿ ಕ್ಷೇತ್ರದ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಬಿಎಸ್​ವೈ ಕಾಲದಲ್ಲಿ ಇವಿ ಬೈಕ್ ಟ್ಯಾಕ್ಸಿಗೆ ಅನುಮತಿ: ಈಗ ವಿರೋಧ ಯಾಕೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.