ETV Bharat / state

ಕೋಮು ಗಲಭೆ ಪ್ರಕರಣ.. ಹುಲಿಹೈದರ ಗ್ರಾಮ ತೊರೆದ ಪುರುಷರು, ಮಹಿಳೆಯರ ಪರದಾಟ

author img

By

Published : Aug 17, 2022, 1:53 PM IST

Updated : Aug 18, 2022, 6:28 AM IST

ಕೊಪ್ಪಳದ ಹುಲಿಹೈದರ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲಿಹೈದರ ಗ್ರಾಮದಲ್ಲಿ ಆತಂಕದ ವಾತಾವರಣ ಮುಂದುವರೆದಿದೆ. ಹುಲಿಹೈದರ ಗ್ರಾಮವನ್ನು ತೊರೆದ ಪುರುಷರು ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ.

Men leave Hulihyder village  Communal clash cases  Koppal crime news  ಹುಲಿಹೈದರ ಗ್ರಾಮವನ್ನು ತೊರೆದ ಪುರುಷರು  ಹುಲಿಹೈದರ ಕೋಮು ಗಲಭೆ ಪ್ರಕರಣ  ಹುಲಿಹೈದರ್ ಮಾರಾಮಾರಿ ವಿಡಿಯೋ ವೈರಲ್  ಹುಲಿಹೈದರ್​ ಗ್ರಾಮಕ್ಕೆ ರಾಜಕೀಯ ಮುಖಂಡರ ಭೇಟಿ  ಹುಲಿಹೈದರ್​ ಗ್ರಾಮದ ಜನತೆಗೆ ರಾಜಕೀಯ ನಾಯಕರ ಭರವಸೆ  ಕೋಮು ಗಲಭೆ ಪ್ರಕರಣ  ಕೊಪ್ಪಳ ಅಪರಾಧ ಸುದ್ದಿ
ಹುಲಿಹೈದರ ಗ್ರಾಮವನ್ನು ತೊರೆದ ಪುರುಷರು

ಗಂಗಾವತಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಹುಲಿಹೈದರ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಆತಂಕದ ವಾತವರಣ ಮುಂದುವರಿದಿದೆ. ಹುಲಿಹೈದರ ಗ್ರಾಮವನ್ನು ತೊರೆದ ಪುರುಷರು ಬೇರೆ ಗ್ರಾಮಗಳಿಗೆ ತೆರಳಿದ್ದಾರೆ. ಕಾರಣ ಈ ಗಲಭೆ ಕುರಿತು 58 ಜನರ ಮೇಲೆ ಎರಡು ಪ್ರಕರಣ ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚುವರಿ ಯುವಕರನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆ ಬಹುತೇಕರ ಪುರುಷರು ಗ್ರಾಮವನ್ನು ತೊರೆದಿದ್ದಾರೆ.

ಕಳೆದ ಒಂದು ವಾರದಿಂದ ಪುರುಷರಿಲ್ಲದೇ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಲಾಲನೆ - ಪಾಲನೆ, ದೈನಿಕ ಅಗತ್ಯ ವಸ್ತುಗಳ ಖರೀದಿಯಂತ ಕನಿಷ್ಠ ಕಾರ್ಯಕ್ಕೂ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವಾರ ಕಳೆದರೂ ಗ್ರಾಮದಲ್ಲಿ ಪುರುಷರ ಓಡಾಟವಿಲ್ಲದಂತಾಗಿದ್ದು, ಮೌನ ಆವರಿಸಿದೆ. ಗ್ರಾಮಕ್ಕೆ ಭೇಟಿ ನೀಡುತ್ತಿರುವ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರ ಓಡಾಟದಿಂದಾಗಿ ಆಗಾಗ ಗ್ರಾಮದಲ್ಲಿ ಕೊಂಚ ಸದ್ದಾಗುತ್ತಿರುವುದು ಬಿಟ್ಟರೆ ಬಹುತೇಕ ಮನೆಗಳ ಬಾಗಿಲು ಹಾಕಿದ ಸ್ಥಿತಿ ಕಂಡು ಬರುತ್ತಿದೆ.

ಹುಲಿಹೈದರ್​ ಕೋಮು ಗಲಭೆ ಪ್ರಕರಣದ ಹಿನ್ನೆಲೆ: ಕನಕಗಿರಿ ವಿಧಾನಸಭಾ ಕ್ಷೇತ್ರದ ಹುಲಿಹೈದರ ಗ್ರಾಮದಲ್ಲಿ ಆಗಸ್ಟ್ 11ರಂದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಘಟನೆಯಲ್ಲಿ ಯಂಕಪ್ಪ (60 ವರ್ಷ), ಮತ್ತು ಬಾಷಾವಲಿ (22 ವರ್ಷ) ಸಾವೀಗೀಡಾಗಿದ್ದು, ಹಲವರು ಗಾಯಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನನ್ವಯ ಇದುವರೆಗೆ 36 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗಲಭೆ ವೇಳೆ ಸಾವನ್ನಪ್ಪಿದ್ದ ಯಂಕಪ್ಪ ತಳವಾರ ಎಂಬುವವರ ಪತ್ನಿ ಹಂಪಮ್ಮ ನೀಡಿದ್ದ ದೂರಿನ ಆಧಾರದಲ್ಲಿ 30 ಮಂದಿಯ ವಿರುದ್ಧ ಹಾಗೂ ಇದೇ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಪಾಷಾವಲಿ ಎಂಬುವವರ ಸಹೋದರ ಖಾದರಾಭಾಷಾ ಅವರು 28 ಜನರ ಮೇಲೆ ಪ್ರತ್ಯೇಕ ದೂರು ಸಲ್ಲಿಸಿದ್ದರು.

ಕನಕಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡೂ ದೂರಿಗೆ ಸಂಬಂಧಿಸಿದಂತೆ ಒಂದು ಪ್ರಕರಣದಲ್ಲಿ 21 ಹಾಗೂ ಮತ್ತೊಂದು ಪ್ರಕರಣದಲ್ಲಿ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹುಲಿಹೈದರ್ ಮಾರಾಮಾರಿ ವಿಡಿಯೋ ವೈರಲ್: ಹುಲಿಹೈದರ್ ಗ್ರಾಮ ಪಂಚಾಯತ್ ಮುಂಭಾಗದಲ್ಲೇ ಮಾರಾಮಾರಿ ಜರುಗಿದ್ದು, ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಬಾಷಾವಲಿ ಮೃತದೇಹದ ಪಕ್ಕವೇ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯಂಕಪ್ಪನನ್ನು ಪೊಲೀಸ್ ವಾಹನದಲ್ಲಿಯೇ ಆಸ್ಪತ್ರೆಗೆ ಕಳುಹಿಸಿರುವ ದೃಶ್ಯ ಸೆರೆಯಾಗಿದೆ. ಪೊಲೀಸರ ಎದುರೆ ಜನರು ದೊಣ್ಣೆ ಹಿಡಿದು ಗಲಾಟೆಗೆ ಮುಂದಾಗಿದ್ದಾರೆ. ಪೊಲೀಸರನ್ನೇ ಸುಮ್ಮನಿರಿ ಎನ್ನುವ ಮಾತುಗಳು ಈ ವಿಡಿಯೋದಲ್ಲಿ ಕೇಳಿ ಬಂದಿತ್ತು.

ಹುಲಿಹೈದರ್​ ಗ್ರಾಮಕ್ಕೆ ರಾಜಕೀಯ ಮುಖಂಡರ ಭೇಟಿ: ಗುಂಪು ಘರ್ಷಣೆಯಲ್ಲಿ ಸಾವಿಗೀಡಾದ ಇಬ್ಬರು ಮತ್ತು ಗಾಯಗೊಂಡ ಹಲವರ ಮನೆಗಳಿಗೆ ಸಂಸದ ಕರಡಿ ಸಂಗಣ್ಣ ಮತ್ತು ಶಾಸಕ ಬಸವರಾಜ ದಢೇಸುಗೂರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಮೃತಪಟ್ಟಿದ್ದ ಯಂಕಪ್ಪ ತಳವಾರ ಮತ್ತು ಬಾಷಾವಲಿ ನಿವಾಸಕ್ಕೆ ಭೇಟಿ ನೀಡಿದ ಸಂಸದ ಮತ್ತು ಶಾಸಕರು ಮೃತರ ಕುಟುಂಬ ಸದಸ್ಯರ ಜೊತೆ ಚರ್ಚಿಸಿದರು. ನಂತರ ಕೋಮು ಘರ್ಷಣೆಯಿಂದ ಗ್ರಾಮದಲ್ಲಿ ನಡೆದ ಘಟನೆ ಮತ್ತು ಸಾವನ್ನಪ್ಪಿದವರನ್ನು ನೆನೆದು ಕಣ್ಣೀರಾದರು.

ಹುಲಿಹೈದರ್​ ಗ್ರಾಮದ ಜನತೆಗೆ ರಾಜಕೀಯ ನಾಯಕರ ಭರವಸೆ: ಘಟನೆ ನಡೆದು ಅನೇಕ ದಿನಗಳು ಕಳೆಯುತ್ತಾ ಬಂದರೂ ಭಯದ ವಾತಾವರಣ ಇನ್ನೂ ಕಡಿಮೆಯಾಗಿಲ್ಲ. ಮಕ್ಕಳು - ಮಹಿಳೆಯರು ಹೊರಕ್ಕೆ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಇಂದಿನಿಂದ ಗ್ರಾಮದಲ್ಲಿ ಹಣ್ಣು, ತರಕಾರಿ, ಹಾಲು, ಆಹಾರದ ಕಿಟ್ ಸೇರಿದಂತೆ ಅಗತ್ಯ ವಸ್ತುಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ರಾಜಕೀಯ ನಾಯಕರು ಗ್ರಾಮದ ಜನರಿಗೆ ಭರವಸೆ ನೀಡಿದ್ದರು.

ಓದಿ: ಕೊಪ್ಪಳ ಹುಲಿಹೈದರ ಸಂಘರ್ಷ: ಈವರೆಗೆ 36 ಜನರ ಬಂಧನ

Last Updated :Aug 18, 2022, 6:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.