ಗಂಗಾವತಿ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಶ್ರೀನಾಥ್ಗೆ ಗಾಳ ಹಾಕಿದ್ದು, ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಶ್ರೀನಾಥ್ ಅವರ ನಿವಾಸಕ್ಕೆ ಆಗಮಿಸಿದ ಡಿ ಕೆ ಶಿವಕುಮಾರ್, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ಹಿನ್ನೆಲೆ ರಾಜ್ಯಾಧ್ಯಂತ ಪಕ್ಷವನ್ನು ಬಲಪಡಿಸುವುದು ಅಗತ್ಯವಿದೆ.
ಈ ಹಿನ್ನೆಲೆ ಈಗಾಗಲೇ ನಾನಾ ಪಕ್ಷಗಳಲ್ಲಿರುವ ಈಡಿಗ ಸಮುದಾಯದ ನಾಯಕರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದರೆ, ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ಸರ್ಕಾರದಲ್ಲಿ ಉನ್ನತ ಸ್ಥಾನ ಮಾನ ನೀಡಲಾಗುವುದು.
ಈಡಿಗ ಸಮುದಾಯದ ನಾಯಕರನ್ನು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ನಾಯಕತ್ವ ವಹಿಸಿಕೊಳ್ಳುವಂತೆ ಶ್ರೀನಾಥ್ ಅವರಿಗೆ ಸಲಹೆ-ಸೂಚನೆ ನೀಡುವಂತೆ ಡಿ ಕೆ ಶಿವಕುಮಾರ್, ಶ್ರೀನಾಥ್ ಅವರ ತಂದೆ ಮಾಜಿ ಸಂಸದ ಹೆಚ್ ಜಿ ರಾಮುಲು ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸ್ಥಳೀಯ ಮಟ್ಟದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಕೆಲ ಗೊಂದಲ ಇವೆ. ಇವು ಇತ್ಯರ್ಥವಾದರೆ ಮುಂದಿನ ದಿನಗಳಲ್ಲಿ ತಮ್ಮ ನೀರ್ಧಾರ ಪ್ರಕಟಿಸುವುದಾಗಿ ಈ ಸಂದರ್ಭದಲ್ಲಿ ಶ್ರೀನಾಥ್ ಹೇಳಿದ್ದಾರೆ ಎನ್ನಲಾಗಿದೆ.