ಎರಡು ಎದೆಗುಂಡಿಗೆ ಸಿಎಂ ಬೊಮ್ಮಾಯಿ: ಕೊಪ್ಪಳದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ
Updated on: Jan 25, 2023, 10:58 PM IST

ಎರಡು ಎದೆಗುಂಡಿಗೆ ಸಿಎಂ ಬೊಮ್ಮಾಯಿ: ಕೊಪ್ಪಳದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ
Updated on: Jan 25, 2023, 10:58 PM IST
ನಾನು ಫ್ಲೆಕ್ಸ್ ಹಾಕಿಸಿಕೊಂಡು, ಸುದ್ದಿ ಪತ್ರಿಕೆ ಟಿವಿಯಲ್ಲಿ ಬರೋದಕ್ಕೆ ಕಾರ್ಯಕ್ರಮಗಳನ್ನ ಆಯೋಜಿಸುತ್ತಿಲ್ಲ - ಜನಾರ್ದನರೆಡ್ಡಿ ಹೊಸ ಪಕ್ಷ ಸ್ಥಾಪನೆಯಿಂದ ಬಿಜೆಪಿಗೆ ಏನೂ ಪರಿಣಾಮ ಆಗುವುದಿಲ್ಲ - ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು 4222 ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಿಲಾಗಿದೆ.
ಕೊಪ್ಪಳ: ಸುಮಾರು ವರ್ಷಗಳ ಹಿಂದೆ ಸದಾಶಿವ ಆಯೋಗದ ವರದಿ ಹಾಗೂ ನಾಗಮೋಹನದಾಸ ಅವರ ವರದಿಯನ್ನು ಕಾಂಗ್ರೆಸ್ ಪಕ್ಷದವರು ಟ್ರಜರಿಯಲ್ಲಿಟ್ಟಿದ್ದರು. ಅದನ್ನು ಹೊರತೆಗೆದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅದಕ್ಕೆ ಅವರನ್ನ ನಾವು ಎರಡು ಎದೆಗುಂಡಿಗೆ ಸಿಎಂ ಎಂದು ಕರೆಯುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಕೊಪ್ಪಳದ ಟಣಕನಕಲ್ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಫ್ಲೆಕ್ಸ್ ಹಾಕಿಸಿಕೊಂಡು, ಸುದ್ದಿ ಪತ್ರಿಕೆ ಟಿವಿಯಲ್ಲಿ ಬರೋದಕ್ಕೆ ಕಾರ್ಯಕ್ರಮಗಳನ್ನ ಆಯೋಜಿಸುತ್ತಿಲ್ಲ. ನಾವು ಮಾಡುವ ಕೆಲಸದಿಂದ ಜನರಿಗೆ ಅನುಕೂಲವಾಗಬೇಕು ಅಷ್ಟೇ. ಫೆಬ್ರವರಿ ಅಂತ್ಯದೊಳಗೆ ಕೃಷ್ಣೆಯ ನದಿಯ ನೀರನ್ನು ತಂದು ಲೋಕಾರ್ಪಣೆ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅವರೆಲ್ಲ ಒಂದು ಸಂಘಟನೆ ಅಡಿ ಹೋರಾಟ ಮಾಡಿ ನ್ಯಾಯ ಕೇಳುತ್ತಿಲ್ಲ. ಆರೇಳು ಸಂಘಟನೆಗಳನ್ನ ಮಾಡಿಕೊಂಡಿದ್ದಾರೆ. ಯಾರಿಗೇ ಅಂತ ಸ್ಪಂದಿಸಬೇಕು ಗೊತ್ತಾಗುತ್ತಿಲ್ಲ. ನಾನು ಅವರ ಸಮಸ್ಯೆಗಳನ್ನು ಕೇಳಿ ಭರವಸೆ ನೀಡಿ ಬಂದಿದ್ದೇನೆ. ಒಬ್ಬ ಮಂತ್ರಿ ಎಲ್ಲ ಕೆಲಸ ಬಿಟ್ಟು 24 ಗಂಟೆಯೂ ಅಲ್ಲಿಯೇ ಕುಳಿತುಕೊಳ್ಳಲು ಆಗುವುದಿಲ್ಲ. ಅವರ ಬೇಡಿಕೆ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾನೂನು ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡುತ್ತೇವೆ ಎಂದು ಪ್ರತಿಕ್ರತಿಯಿಸಿದರು.
ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಕರೆತರುವ ಕುರಿತು ಕೇಳಿ ಬರುತ್ತಿರುವ ಮಾತಿನ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ನನಗೆ ಗೊತ್ತಿರದ ವಿಷಯ. ಭಾರತೀಯ ಜನತಾ ಪಾರ್ಟಿ ತನ್ನದೇ ಆದ ತತ್ವ ಮತ್ತು ಸಿದ್ಧಾಂತಗಳ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದೆ. ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆಯಿಂದ ಬಿಜೆಪಿಗೆ ಏನೂ ಪರಿಣಾಮ ಆಗುವುದಿಲ್ಲ ಎಂದರು. ಕೇಂದ್ರ ಸರ್ಕಾರ ಮಾಡಬೇಕಾದ ಕಾರ್ಯವನ್ನು ರಾಜ್ಯ ಬಿಜೆಪಿ ಸರ್ಕಾರ ತನ್ನ ಸಂಪನ್ಮೂಲಗಳನ್ನು ಬಳಸಿಕೊಂಡು ರಾಜ್ಯದಲ್ಲಿರುವ ಗ್ರಾಮೀಣ ಭಾಗದ ಬಡ ಮಕ್ಕಳಿಕೆ ಮತ್ತು ಪಟ್ಟಣಗಳಲ್ಲಿರುವ ಬಡ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಒಟ್ಟು 4222 ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.
ಈ ಹಿಂದೆ ಅಂಗನವಾಡಿ ಅವರ ಎನ್ಪಿಎಸ್ ( ರಾಷ್ಟ್ರೀಯ ಪಿಂಚಣಿ ಯೋಜನೆ ) ಯನ್ನು ಕಾಂಗ್ರೆಸ್ ನವರು ಕಿತ್ತುಕೊಂಡಿದ್ದರು. ಈಗ ಕಾಂಗ್ರೆಸ್ ನಾಯಕರು ಯಾವ ನೈತಿಕತೆಯ ಮೇಲೆ ಮಾತನಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿದಂತೆ 200 ಯುನಿಟ್ ಉಚಿತ ವಿದ್ಯುತ್ ಅನ್ನು ಕೊಡಲು ಹೋರಟಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಚುನಾವಣೆ ಸಂದರ್ಭದಲ್ಲಿ ಎಲ್ಲ ಯೋಜನೆಗಳು ನೆನಪಾಗುತ್ತವೆ ಎಂದು ಟೀಕಿಸಿದರು.
ನಮ್ಮ ಸರ್ಕಾರ ಚುನಾವಣೆಯ ಆರು ತಿಂಗಳ ಹಿಂದೆಯೇ 78 ಯುನಿಟ್ ಅನ್ನು ಉಚಿತವಾಗಿ ನೀಡಿದೆ, ಕಾಂಗ್ರೆಸ್ ಪಕ್ಷದವರು ಕೇವಲ ಚುನಾವಣೆಗಾಗಿ ಮಾತ್ರ ಘೋಷಣೆಗಳನ್ನು ಮಾಡುತ್ತಾರೆ ಎಂದು ಜನರಿಗೆ ತಿಳಿದಿದೆ ಎಂದು ಹೇಳಿದರು.
ಇದನ್ನೂ ಓದಿ : ವಿಡಿಯೋ ನೋಡಿ... ಅಜ್ಮೀರ್ನ ಸಂತ ಖ್ವಾಜಾ ಗರೀಬ್ ದರ್ಗಾಕ್ಕೆ ರೆಡ್ಡಿ ಭೇಟಿ.!
