ETV Bharat / state

ಗರ್ಭಿಣಿ ಹೊಟ್ಟೆಯಲ್ಲೇ ಶಿಶು ಸಾವು: ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ - ಆಸ್ಪತ್ರೆ ಮುಂಭಾಗ ಪ್ರತಿಭಟನೆ

author img

By ETV Bharat Karnataka Team

Published : Oct 19, 2023, 9:36 AM IST

ಹೆರಿಗೆ ಮಾಡಿಸುವಲ್ಲಿ ವೈದ್ಯೆ ವಿಳಂಬ ಮಾಡಿ ನಿರ್ಲಕ್ಷ್ಯ ತೋರಿದ್ದರಿಂದ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

kushtagi
ಕುಷ್ಟಗಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ

ಕುಷ್ಟಗಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ

ಕೊಪ್ಪಳ : ಹೆರಿಗೆಗೆ ಆಗಮಿಸಿದ್ದ ಮಹಿಳೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ ಗರ್ಭದಲ್ಲೇ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ವಿರುಪಾಪುರ ಗ್ರಾಮಸ್ಥರು ಹಾಗೂ ಕೆಲ ದಲಿತಪರ ಸಂಘಟನೆಗಳ ಮುಖಂಡರು ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆ ಮುಂದೆ ಶಿಶುವಿನ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಘಟನೆ ಹಿನ್ನೆಲೆ : ಕುಷ್ಟಗಿ ತಾಲೂಕಿನ ವಿರುಪಾಪುರ ಗ್ರಾಮದ ಗರ್ಭಿಣಿಗೆ ಮಂಗಳವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿಂದೆ ಇವರಿಗೆ ಮೂವರು ಮಕ್ಕಳ ಸಹಜ ಹೆರಿಗೆಯಾಗಿತ್ತು. ಹಾಗಾಗಿ, ಅನಗತ್ಯವಾಗಿ ಶಸ್ತ್ರಚಿಕಿತ್ಸೆ ನಡೆಸುವುದು ಬೇಡ, ಕಾದು ನೋಡೋಣ ಎಂದು ಮಹಿಳೆಯ ಆರೋಗ್ಯ ತಪಾಸಣೆ ನಡೆಸಿದ್ದ ವೈದ್ಯೆ ಕುಟುಂಬಸ್ಥರಿಗೆ ವಿವರಿಸಿದ್ದರು. ಇದಾಗಿ ಒಂದು ದಿನ ಕಳೆದರೂ ಸಹ ಸಹಜ ಹೆರಿಗೆ ಆಗಲಿಲ್ಲ. ಬುಧವಾರ ಮತ್ತೆ ಗರ್ಭಿಣಿಯನ್ನು ಪರೀಕ್ಷಿಸಿದಾಗ ಮಗು ಗರ್ಭದಲ್ಲಿಯೇ ಮೃತಪಟ್ಟಿತ್ತು. ಇದರಿಂದ ತಾಯಿ ಆರೋಗ್ಯಕ್ಕೆ ಕುತ್ತು ಬರದಿರಲೆಂದು ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಮೃತ ಗಂಡು ಶಿಶುವನ್ನು ಹೊರ ತೆಗೆದಿದ್ದಾರೆ.

ಆಸ್ಪತ್ರೆ ಮುಂಭಾಗ ಪ್ರತಿಭಟನೆ : ಇನ್ನು ಗಂಡು ಮಗು ಮೃತಪಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯ ಸಂಬಂಧಿಕರು ವೈದ್ಯರ ಅಮಾನತಿಗೆ ಆಗ್ರಹಿಸಿ ಆಸ್ಪತ್ರೆ ಮುಂಭಾಗದಲ್ಲಿ ಶಿಶುವಿನ ಶವವಿಟ್ಟು ಪ್ರತಿಭಟನೆ ನಡೆಸಿದರು. ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ, ಆಸ್ಪತ್ರೆಗೆ ಬಂದ ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ್ದರೆ ಮಗು ಬದುಕುಳಿಯುತ್ತಿತ್ತು ಎಂದು ಆರೋಪಿಸಿದರು.

ಇದನ್ನೂ ಓದಿ : ಗರ್ಭಿಣಿ ಹೊಟ್ಟೆಯಲ್ಲಿ ನವಜಾತ ಶಿಶು ಸಾವು : ಕಾವಾಡಿಗರಹಟ್ಟಿಗೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಭೇಟಿ

ವೈದ್ಯೆಯನ್ನು ತಕ್ಷಣ ಅಮಾನತು ಮಾಡಲು ಸಾಧ್ಯವಿಲ್ಲ, ಘಟನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ತನಿಖೆ ನಡೆಸಬೇಕಾಗುತ್ತದೆ. ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ ಆಸ್ಪತ್ರೆಯ ಇತರೆ ವೈದ್ಯಾಧಿಕಾರಿಗಳು ಮಹಿಳೆಯ ಕುಟುಂಬಸ್ಥರ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಪ್ರತಿಭಟನಾಕಾರರು ಇದಕ್ಕೆ ಒಪ್ಪಲಿಲ್ಲ.

ಇದನ್ನೂ ಓದಿ : ತರೀಕೆರೆ ಆಸ್ಪತ್ರೆ ಮುಂದೆ ' ಬಿ ನೆಗೆಟಿವ್ ' ರಕ್ತ ಸಿಗದೆ ಗರ್ಭಿಣಿ ಪರದಾಟ ; ಹೆರಿಗೆ ಮಾಡಿಸಿದ ವೈದ್ಯರು ಹೇಳಿದ್ದೇನು ?

ನಂತರ ಡಿಎಚ್‌ಒ ಡಾ. ಲಿಂಗರಾಜು ಟಿ ಅವರು ಪ್ರತಿಭಟನಾಕಾರರಿಗೆ ಫೋನ್ ಕರೆ ಮಾಡಿ ಸಂಪರ್ಕಿಸಿ ಈ ಬಗ್ಗೆ ತನಿಖೆ ನಡೆಸಿ, ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾಣಂತಿ ಸಂಬಂಧಿಕರು ನೀಡಿರುವ ಲಿಖಿತ ದೂರಿನ ಆಧಾರದ ಮೇಲೆ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಡಿಎಚ್‌ಒ ತಿಳಿಸಿದ್ದಾರೆ.

ಇದನ್ನೂ ಓದಿ : ಹೆರಿಗೆಗೆ ದಾಖಲಿಸದೇ ವಾಪಸ್​ ಕಳುಹಿಸಿದ ಆಸ್ಪತ್ರೆ ಸಿಬ್ಬಂದಿ. . ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.