ಗಂಗಾವತಿ: ನಗರಸಭಾ ವ್ಯಾಪ್ತಿಯ ಹೊಸಳ್ಳಿ ಸಮೀಪ ಆಶ್ರಯ ಯೋಜನೆಯಡಿ ವಿತರಿಸಲು ನಿಗದಿ ಮಾಡಲಾದ 540 ನಿವೇಶನಗಳನ್ನು ಅರ್ಹ ಪಲಾನುಭವಿಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆ ಭಾಗವಾಗಿ ನಗರಸಭೆಯಲ್ಲಿ ಅರ್ಜಿ ವಿತರಣೆ ಆರಂಭವಾಗಿದೆ.
ಅರ್ಜಿ ಸ್ವೀಕರಿಸಲು ಮೊದಲ ದಿನವಾಗಿದ್ದ ಸೋಮವಾರ ಬೆಳಗ್ಗೆ ಸಾವಿರಾರು ಜನ ಮಹಿಳೆಯರು ನಗರಸಭೆಯ ಮುಂದೆ ಜಮಾಯಿಸಿದ್ದರು. ಇದರಿಂದ ಸಿಬ್ಬಂದಿ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿತ್ತು.
ಬೆಳಗ್ಗೆ 8 ಗಂಟೆಯಿಂದಲೇ ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿದ್ದರು. ಸಂಜೆ 5 ಗಂಟೆಯಾದರೂ ಅರ್ಜಿ ಸಿಗದೇ ಕೆಲವರು ಬರಿಗೈಯಲ್ಲಿ ವಾಪಸ್ ಆದರು. ಅರ್ಜಿ ವಿತರಿಸಲು ಒಂದೇ ಕೌಂಟರ್ ಆರಂಭಿಸಿದ್ದು, ಸಮಸ್ಯೆಗೆ ಕಾರಣವಾಯಿತು.