ETV Bharat / state

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಬಿಜೆಪಿ - ಕಾಂಗ್ರೆಸ್ ಪಕ್ಷಗಳ ವಿರುದ್ಧ ದೂರು

author img

By

Published : Apr 20, 2023, 7:55 PM IST

ಚುನಾವಣೆ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಆರೋಪ ಕೊಪ್ಪಳ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಕೇಳಿ ಬಂದಿದೆ.

Complaint against BJP-Congress parties
ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಮೇಲೆ ದೂರು

ಗಂಗಾವತಿ (ಕೊಪ್ಪಳ) : ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಆರೋಪದಡಿ ಇದೀಗ ಮತ್ತೆರಡು ಪಕ್ಷಗಳ ಅಧ್ಯಕ್ಷರ ಮೇಲೆ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ನಗರದಲ್ಲಿ ನಿನ್ನೆ (ಬುಧವಾರ) ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಅವರ ಬೃಹತ್ ರೋಡ್ ಶೋ ನಡೆಸಿದ್ದರು. ಈ ಸಂದರ್ಭದಲ್ಲಿ 8 ರಿಂದ 10 ವರ್ಷ ವಯೋಮಾನದ ಮಕ್ಕಳನ್ನು ಬಳಸಿಕೊಂಡು ಅವರಿಗೆ ಪಕ್ಷದ ಧ್ವಜ ನೀಡಿ, ಬಾವುಟ ನೀಡಿ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

Submission of nomination papers
ನಾಮಪತ್ರ ಸಲ್ಲಿಕೆ

ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಚುನಾವಣಾಧಿಕಾರಿ ಸುದೇಶ ಕುಮಾರ ಆರೋಪಿಸಿದ್ದು, ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಕಾಯ್ದೆ 1986ರ ಅಡಿಯಲ್ಲಿ ಬಿಜೆಪಿಯ ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಡೆಸಿದ ಬೃಹತ್ ರೋಡ್ ಶೋ ಸಂದರ್ಭದಲ್ಲಿ 6 ರಿಂದ 13 ವರ್ಷ ವಯೋಮಾನದ 15 ರಿಂದ 20 ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಗುರುಪ್ರಸಾದ್ ಆರೋಪಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶಾಮೀದ ಮನಿಯಾರ ಅವರ ಮೇಲೆಯೂ ಎಫ್ಐಆರ್ ದಾಖಲಾಗಿದೆ. ಈಗಾಗಲೇ ಕೆಆರ್​ಪಿಪಿ ಮತ್ತು ಜೆಡಿಎಸ್ ಪಕ್ಷದ ಅಧ್ಯಕ್ಷರ ಮೇಲೆ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಮೇಲೆ ದೂರು ದಾಖಲಿಸಿದ್ದಾರೆ. ಒಟ್ಟು ನಾಲ್ಲು ಪ್ರಕರಣ ದಾಖಲಾಗಿವೆ.

ಅಮಾವಾಸ್ಯೆಯಂದೇ 20 ನಾಮಪತ್ರ ಸಲ್ಲಿಕೆ : ಒಳ್ಳೆಯ ಕೆಲಸ ಕಾರ್ಯಗಳನ್ನು ಅಮಾವಾಸ್ಯೆಯ ದಿನ ಮಾಡಬಾರದು ಎಂಬ ನಂಬಿಕೆ ಜನರಲ್ಲಿದೆ. ಆದರೆ, ಅಮಾವಾಸ್ಯೆಯ ದಿನವೇ ನಾಮಪತ್ರಗಳ ಸಲ್ಲಿಕೆಯ ಭರಾಟೆ ಜೋರಾಗಿ ನಡೆದಿದ್ದು, ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಬಯಸಿ ಗುರುವಾರ 20 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಇಂದು ಎರಡೂ ಕ್ಷೇತ್ರದಲ್ಲಿ ತಲಾ ಹತ್ತು ಜನ ನಾಮಪತ್ರ ಸಲ್ಲಿಸಿದ್ದಾರೆ.

ವಿಶೇಷವಾಗಿ ಗಂಗಾವತಿಯಲ್ಲಿ ಮೂವರು ಮಹಿಳೆಯರು, ಕನಕಗಿರಿಯಲ್ಲಿ ಇಬ್ಬರು ಮಹಿಳೆಯರು ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಕನಕಗಿರಿ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಬಂಡಾಯದ ಬಿಸಿ ಕಂಡು ಬಂದಿದ್ದು, ಟಿಕೆಟ್ ನಿರೀಕ್ಷಿಸುತ್ತಿದ್ದ ಹಲವರು ಬಂಡಾಯದ ಕಳಹೆ ಊದಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರಿಂದ ರಾಜಗೋಪಾಲ್ ಜೆಡಿಎಸ್ ಬಿ ಫಾರಂ ಪಡೆದು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಮತ್ತೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿ ಗಾಯತ್ರಿ ತಿಮ್ಮಾರೆಡ್ಡಿ ಗೆ ಟಿಕೆಟ್​ ಕೈ ತಪ್ಪಿತ್ತು. ಈ ಹಿನ್ನೆಲೆ ಕೆಆರ್​ಪಿಪಿ ಕಡೆ ಮುಖ ಮಾಡಿ ಟಿಕೆಟ್​ಗೆ ಯತ್ನ ನಡೆಸಿ ಕೆಆರ್​ಪಿಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಸಿದ್ದಾರೆ. ಇನ್ನು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಕೈಗೊಂಡು ಬಿಜೆಪಿಯಲ್ಲಿ ಅಸಮಾಧಾನ ಲಾಭವನ್ನಾಗಿಸಿಕೊಳ್ಳಲು ಯತ್ನಿಸಿದ್ದ ಧರ್ಮಣ್ಣ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಯಾರು? ಎಲ್ಲಿ? ನಾಮಪತ್ರ : ಕನಕಗಿರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಒಟ್ಟು ಹತ್ತು ನಾಮಪತ್ರಗಳು ದಾಖಲಾಗಿವೆ. ಕೆಆರ್​ಪಿಪಿ ಯಿಂದ ಡಾ. ಚಾರುಲ್, ಆರ್​ಪಿಪಿ ಪಕ್ಷದಿಂದ ಉಷಾ, ಬಿಎಸ್ಪಿಯಿಂದ ಬೇನಾಳಪ್ಪ, ಎಐಎಂಇಪಿ ಪಕ್ಷದಿಂದ ರಮೇಶ ಕೋಟೆ, ಬಿಜೆಪಿ ಅಭ್ಯರ್ಥಿ ಬಸವರಾಜ ದಢೇಸುಗೂರು, ಜೆಡಿಎಸ್ ಪಕ್ಷದಿಂದ ಪಿ.ವಿ ರಾಜಗೋಪಾಲ, ಪಕ್ಷೇತರ ಅಭ್ಯರ್ಥಿಗಳಾಗಿ ಹುಲಿಯಪ್ಪ, ಕಲ್ಯಾಣ ನಾಗರಾಜು, ಧರ್ಮಣ್ಣ ನಾಮಪತ್ರ ಸಲ್ಲಿಸಿದ್ದಾರೆ.

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಪಿಕೆಪಿ ಪಕ್ಷದಿಂದ ವೆಂಕಟೇಶರರಾವ್ ಕುಲಕರ್ಣಿ, ಕೆಆರ್​ಪಿಪಿ ಯಿಂದ ಜಿ. ಜನಾರ್ದನರೆಡ್ಡಿ, ಆಮ್ ಆದ್ಮಿ ಪಕ್ಷದಿಂದ ಶರಣಪ್ಪ ಸಜ್ಜಿಹೊಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕನಕಪ್ಪ ಹನುಮಂತಪ್ಪ. ಇಂಡಿಯನ್ ಮೂವ್ಮೆಂಟ್ ಪಾರ್ಟಿಯಿಂದ ಬಸಪ್ಪ ಶಂಕ್ರಪ್ಪ ಕರಡಿ, ಮನೋಹರಗೌಡ ಕೆಆರ್​ಪಿಪಿಯಿಂದ ಹಾಗೂ ಪಕ್ಷೇತರರಾಗಿ ಭಾಗ್ಯವಂತಪ್ಪ, ಶರಣಪ್ಪ ಮರಿಯಪ್ಪ, ಶಿವಶಂಕರ್ ಸಿದ್ದಲಿಂಗಯ್ಯ ಶೆಟ್ಟರ್, ದೇವಪ್ಪ ಹುಸೇನಪ್ಪ, ಗೀತಾ ಮೋಹನ್ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಠೇವಣಿ ಮುಟ್ಟುಗೋಲು ಟೆನ್ಷನ್: 3 ಚುನಾವಣೆಗಳಲ್ಲಿ ಠೇವಣಿ ಜಪ್ತಿಯ ಸ್ವಾರಸ್ಯಕರ ಅಂಕಿಅಂಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.