ETV Bharat / state

Honor Killing: ಮರ್ಯಾದಾ ಹತ್ಯೆ ಆರೋಪ.. ಕೋಲಾರದಲ್ಲಿ ಅನ್ಯ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ತಂದೆ.. ನೊಂದ ಯುವಕ ಆತ್ಮಹತ್ಯೆ

author img

By

Published : Jun 27, 2023, 10:17 PM IST

Updated : Jun 27, 2023, 10:58 PM IST

ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೋರ್ವ ಮಗಳನ್ನೇ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

father-killed-daughter-for-intercaste-love-affair
ಮರ್ಯಾದಾ ಹತ್ಯೆ : ಅನ್ಯ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ

ಕೋಲಾರ : ಜಿಲ್ಲೆಯಲ್ಲಿ ಮಂಗಳವಾರ ಮರ್ಯಾದಾ ಹತ್ಯೆ ಆರೋಪ ಪ್ರಕರಣ ನಡೆದಿದೆ. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೋರ್ವ ಸ್ವಂತ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಈ ಘಟನೆಯಿಂದ ನೊಂದ ಮೃತಳ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಬೋಡಗುರ್ಕಿ ಗ್ರಾಮದ ಕೀರ್ತಿ(20), ಹಾಗೂ ಆತ್ಮಹತ್ಯೆ ಮಾಡಿಕೊಂಡವನನ್ನು ಗಂಗಾಧರ್​(24) ಎಂದು ಗುರುತಿಸಲಾಗಿದೆ.

ಮೃತ ಗಂಗಾಧರ್​ ಹಾಗೂ ಕೀರ್ತಿ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧ ಗಂಗಾಧರ್​ ತಮ್ಮ ಪ್ರೀತಿಯ ವಿಚಾರವನ್ನು ಕೀರ್ತಿಯ ತಂದೆ ಕೃಷ್ಣಮೂರ್ತಿ ಬಳಿ ಹೇಳಿದ್ದಾನೆ. ಅಲ್ಲದೆ ಮದುವೆ ಮಾಡಿಕೊಡುವಂತೆಯೂ ಕೇಳಿಕೊಂಡಿದ್ದಾನೆ. ಆದರೆ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿಯಾಗಿದೆ. ಇಬ್ಬರ ಮದುವೆಗೆ ಕೀರ್ತಿಯ ತಂದೆ ಒಪ್ಪಿಗೆ ಸೂಚಿಸಿರಲಿಲ್ಲ ಎಂದು ತಿಳಿದುಬಂದಿದೆ.

ಪೋಷಕರು ಗಂಗಾಧರ್​ನನ್ನು ಮರೆತುಬಿಡುವಂತೆ ಕೀರ್ತಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದಾರೆ. ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದೇ ಇಬ್ಬರೂ ಪ್ರೀತಿಸುತ್ತಿದ್ದರು. ಈ ಸಂಬಂಧ ಮಂಗಳವಾರ ಬೆಳಗ್ಗೆ ಮತ್ತೆ ಕೀರ್ತಿ ಮತ್ತು ತಂದೆ ಕೃಷ್ಣಮೂರ್ತಿ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಕೋಪಗೊಂಡ ಕೃಷ್ಣಮೂರ್ತಿ ಮಗಳನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ. ಕೀರ್ತಿ ಸತ್ತ ವಿಷಯ ತಿಳಿದ ಪ್ರಿಯಕರ ಗಂಗಾಧರ್​ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಘಟನೆ ಸಂಬಂಧ ಕಾಮಸಮುದ್ರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯಪ್ರದೇಶದಲ್ಲಿ ಮರ್ಯಾದಾ ಹತ್ಯೆ : ತಂದೆಯೋರ್ವ ತನ್ನ ಮಗಳು ಮತ್ತು ಆಕೆಯ ಪತಿಯನ್ನು ಹತ್ಯೆ ಮಾಡಿದ್ದ ಘಟನೆ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದಿತ್ತು. ಇದೊಂದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಅಂಬಾಹ್ ಪೊಲೀಸ್ ಠಾಣೆ ವ್ಯಾಪ್ತಿಯ ರತನ್‌ಬಸಾಯಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಮೃತರನ್ನು ಶಿವಾನಿ ಮತ್ತು ಚೋಟು ತೋಮರ್​ ಎಂದು ಗುರುತಿಸಲಾಗಿತ್ತು.

ಮಗಳು ನಾಪತ್ತೆಯಾಗಿರುವ ಬಗ್ಗೆ ತಂದೆ ರಾಜಪಾಲ್ ಸಿಂಗ್ ಜೂನ್ 3 ರಂದು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಇನ್ನೊಂದೆಡೆ ಜೂನ್ 4 ರಂದು ಅಂಬಾ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಮೃತ ಶಿವಾನಿ ಕುಟುಂಬದವರೇ ಇಬ್ಬರನ್ನೂ ಕೊಂದಿದ್ದಾರೆ ಎಂದು ಚೋಟು ತೋಮರ್ ಕುಟುಂಬ ಆರೋಪಿಸಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮೃತ ಶಿವಾನಿ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಶಿವಾನಿಯ ತಂದೆ ರಾಜಗೋಪಾಲ್​ ಸಿಂಗ್​ ಹತ್ಯೆ ಮಾಡಿರುವುದಾಗಿ ಪೊಲೀಸ್​ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯು ಕೆಲ ಸಂಬಂಧಿಕರೊಂದಿಗೆ ಸೇರಿಕೊಂಡು ಮಗಳನ್ನು ಮತ್ತು ಆಕೆಯ ಪತಿಯನ್ನು ಕೊಂದು, ಬಳಿಕ ದೇಹವನ್ನು ಮೊಸಳೆ ತುಂಬಿದ ನದಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ : ಮರ್ಯಾದಾ ಹತ್ಯೆ: ಅಕ್ಕನ ಕತ್ತು ಹಿಸುಕಿ, ಆಕೆಯ ಪ್ರಿಯಕರನಿಗೆ ಗುಂಡಿಕ್ಕಿದ ಅಪ್ರಾಪ್ತ ತಮ್ಮ

Last Updated : Jun 27, 2023, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.