ETV Bharat / state

ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯಕ್ರಮದಲ್ಲಿ ಸಿಎಂ ಭಾಗಿ, ಪ್ರಗತಿ ಪರಿಶೀಲನೆ ಸಭೆ

author img

By ETV Bharat Karnataka Team

Published : Dec 27, 2023, 10:47 PM IST

ಆದಿಮ ಸಾಂಸ್ಕೃತಿಕ ಕೇಂದ್ರದ 200ನೇ ಹುಣ್ಣಿಮೆ ಹಾಡಿನ ಸಮಾರೋಪ ‌ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದರು.

cm-siddaramaiah-participated-in-the-program-of-adima-sanskriti-kendra
ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ : ಪ್ರಗತಿ ಪರಿಶೀಲನೆ ಸಭೆ

ಕೋಲಾರ: ಸಿಎಂ ಸಿದ್ದರಾಮಯ್ಯ ಇಂದು ನಗರದ ಹೊರವಲಯದ ತೇರಹಳ್ಳಿ ಬೆಟ್ಟದಲ್ಲಿರುವ‌ ಆದಿಮ ಸಾಂಸ್ಕೃತಿಕ ‌ಕೇಂದ್ರಕ್ಕೆ ಭೇಟಿ ನೀಡಿದರು. 200ನೇ ಹುಣ್ಣಿಮೆ ಹಾಡಿನ ಸಮಾರೋಪ ‌ಸಮಾರಂಭಕ್ಕೆ ಆಗಮಿಸಿದ ಸಿಎಂ, ಜಾನಪದ ಹಾಡುಗಳನ್ನು ಕೇಳಿದಾಗ ನೋಡಿದಾಗ ಮೈ ನವಿರೇಳುತ್ತದೆ. ಹಾಗಾಗಿ ಒಂದು ಗಂಟೆ ಸಮಯ ಇಲ್ಲಿ ಇರೋಣ ಅಂದುಕೊಂಡಿದ್ದೆ. ಆದರೆ ಜಾನಪದ ಕಲೆ ನೋಡಿದಾಗ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ ಎಂದು ಹೇಳಿದರು.

ಮೊದಲನೇ ಬಾರಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಬಹಳ ಸಂತೋಷವಾಗಿದೆ. ಮನುಷ್ಯ ಸಂಬಂಧಗಳು ಸಮಾಜದಲ್ಲಿ ಬಹಳ ಮುಖ್ಯ. ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಜನರಲ್ಲಿ ಮನುಷ್ಯತ್ವ ಉಂಟುಮಾಡುವ ಪ್ರಯತ್ನವನ್ನು ಸಂಸ್ಥೆ ಮಾಡಿದೆ. ಹೀಗಾಗಿ ಆದಿಮಗೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ ಎಂದರು.

ಎಲ್ಲರೂ ವಿಶ್ವಮಾನವರಾಗಲು ಸಾಧ್ಯವಾಗದೇ ಇರಬಹುದು, ಆದರೆ ಪ್ರಯತ್ನ ಮಾಡುವುದು ಬಹಳ ಮುಖ್ಯ. ಸಮಸಮಾಜದ ಮಾನವೀಯತೆಯನ್ನು ಕೂಡಿದ ಸಮಾಜ ನಿರ್ಮಾಣ ಮಾಡುವ ಅಗತ್ಯ ಇದೆ. ಅಸಮಾನತೆ ಮನುಷ್ಯನ ಸ್ವಾರ್ಥದಿಂದ ಆಗಿದೆಯೇ ಹೊರತು ದೈವ ಮಾಡಿರುವುದು ಅಲ್ಲ. ನಾವೇ ಅಸಮಾನತೆ ನಿರ್ಮಾಣ ಮಾಡಿಕೊಂಡಿದ್ದೇವೆ. ಅಕ್ಷರ ಸಂಸ್ಕೃತಿಗಳಿಂದ ವಂಚಿತರಾದುದರಿಂದ ಅಸಮಾನತೆ ಉಂಟಾಯಿತು. ಅಸಮಾನತೆ ಹೋಗದೆ ಹೋದರೆ ಸಮಸಮಾಜದ ಕನಸು ಕನಸಾಗೆ ಉಳಿದು ಹೋಗುತ್ತದೆ ಎಂದು ತಿಳಿಸಿದರು.

ಸ್ವಾರ್ಥ ಮಾಡುವವರು ಅಧಿಕಾರಕ್ಕೆ ಅಂಟಿಕೊಂಡಿರುವವರು. ನಾನು ಅಂಬೇಡ್ಕರ್ ಅವರು ಹೇಳಿದ ರಾಜಕೀಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು. ಹೀಗಾಗಿ ಕಟ್ಟಕಡೆಯ ಮನುಷ್ಯನಿಗೆ ದೊರಕಬೇಕಾದ ಪಾಲನ್ನು ಕೊಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ‌ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ‌‌ ಸಚಿವ‌ ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿ ಪರಿಶೀಲನೆ ಸಭೆ: ಇದಕ್ಕೂ ಮುನ್ನ, ಹೆಲಿಕಾಪ್ಟರ್ ‌ಮೂಲಕ ಆರ್.ಎಲ್.ಜಾಲಪ್ಪ ಮೆಡಿಕಲ್ ಕಾಲೇಜಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್​ ಶಾಸಕರು ಸ್ವಾಗತ ಕೋರಿದರು. ಈ ವೇಳೆ ಸಚಿವ ಬೈರತಿ‌ ಸುರೇಶ್,‌ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಂಡರು. ಸಿಎಂ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಭೆಯಲ್ಲಿ‌ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರು ಭಾಗಿಯಾಗಿದ್ದರು.

ಇದನ್ನೂ ಓದಿ: ದಾವಣಗೆರೆ: ಯತ್ನಾಳ್​ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.