ಎಷ್ಟು ಬಾರಿ ಮದುವೆ, ಸದ್ಯ ಯಾರೊಂದಿಗೆ ಸಂಸಾರ.. ಮಹಿಳಾ ಅಧಿಕಾರಿಗೆ ಮಾಹಿತಿ ಕೇಳಿದವನಿಗೆ ಸಂಕಷ್ಟ

author img

By

Published : Oct 2, 2022, 3:37 PM IST

Updated : Oct 2, 2022, 6:00 PM IST

Etv Bharatarrest-of-man-who-asked-personal-information

ಆರ್​ಟಿಐ ಕಾರ್ಯಕರ್ತರೊಬ್ಬರು ಮಹಿಳಾ ಅಧಿಕಾರಿಗೆ ವೈಯಕ್ತಿಕ ಮಾಹಿತಿಯನ್ನು ತುರ್ತಾಗಿ ನೀಡುವಂತೆ ರೈಟ್​ ಟು ಇನ್​ಫಾರ್ಮೆಶನ್​ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಅಧಿಕಾರಿ ದೂರು ನೀಡಿದ್ದಕ್ಕೆ ಪೊಲೀಸರು ಆರ್​ಟಿಐ ಕಾರ್ಯಕರ್ತನನ್ನು ಬಂಧಿಸಿದ್ದಾರೆ.

ಕೋಲಾರ : ಮಹಿಳಾ ಅಧಿಕಾರಿಯ ವೈಯಕ್ತಿಕ ವಿಚಾರಗಳ ಕುರಿತು ಆರ್​ಟಿಐನಲ್ಲಿ ಮಾಹಿತಿ ಕೇಳಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮುಳಬಾಗಲು ತಾಲ್ಲೂಕಿನ ಮಂಡಿಕಲ್ ನಾಗರಾಜ್ ಎಂಬ ಆರ್​ಟಿಐ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯ ಕುರಿತು ಆರ್​ಟಿಐ ಕಾರ್ಯಕರ್ತ ನಾಗರಾಜ್ ವೈಯಕ್ತಿಕ ವಿಚಾರಗಳನ್ನು ಕೇಳಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗ್ತಿದೆ. ತಹಶಿಲ್ದಾರ್ ಅವರಿಗೆ ಈವರೆಗೆ ಎಷ್ಟು ಬಾರಿ ಮದುವೆಯಾಗಿದೆ, ಯಾರೊಂದಿಗೆ ಡಿವೋರ್ಸ್ ಆಗಿದೆ, ಸದ್ಯ ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ, ಎಲ್ಲಿ ಮದುವೆಯಾಗಿದೆ, ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರಗಳನ್ನು ನಾಗರಾಜ್​ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ ಗಂಡಂದಿರು ಬಿಡಲು ಕಾರಣ ಏನು, ಯಾವ ಇಲಾಖೆಯಲ್ಲಿ ಇವರೆಲ್ಲಾ ಕೆಲಸ‌ ಮಾಡುತ್ತಿದ್ದಾರೆ, ಗಂಡಂದಿರಿಗೆ ಡಿವೋರ್ಸ್ ಆಗಿದೆಯಾ, ಇಲ್ಲವಾ? ಆಗಿದ್ದರೆ ಯಾವ ಕಾರಣಕ್ಕೆ ಡಿವೋರ್ಸ್ ಆಗಿದೆ ಎನ್ನುವ ಮಾಹಿತಿಯನ್ನು ಕೇಳಲಾಗಿದೆಯಂತೆ. ಈ ಎಲ್ಲಾ ಮಾಹಿತಿಯನ್ನು ತುರ್ತಾಗಿ ನೀಡುವಂತೆ ನಾಗರಾಜ್​ ಆರ್​ಟಿಐ ಅರ್ಜಿ ಸಲ್ಲಿಸಿದ್ದಾರಂತೆ.

ಈ ಕುರಿತು ಆರ್​ಟಿಐ ಕಾರ್ಯಕರ್ತನ ವಿರುದ್ಧ ತಹಶಿಲ್ದಾರ್ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಆರ್​ಟಿಐ ಕಾರ್ಯಕರ್ತ ನಾಗರಾಜ್​ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಮುಳಬಾಗಲು ನಗರ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : ಸಿಧು ಮೂಸೆ ವಾಲಾ ಕೊಲೆ ಕೇಸ್​: ಪೊಲೀಸ್​ ಕಸ್ಟಡಿಯಿಂದ ಆರೋಪಿ ಪರಾರಿ

Last Updated :Oct 2, 2022, 6:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.