ಮಡಿಕೇರಿ ದಸರಾದಲ್ಲಿ ಡಿಜೆ ಬಳಕೆಗೆ ಯಾವುದೇ ಸಮಸ್ಯೆ ಆಗಲ್ಲ: ಸಚಿವ ನಾಗೇಶ್

author img

By

Published : Sep 17, 2022, 9:58 AM IST

Minister Nagesh

ಮಡಿಕೇರಿ ಮತ್ತು ಗೋಣಿಕೊಪ್ಪ ಜನೋತ್ಸವ ದಸರಾಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದೆ. ಸಂಪ್ರದಾಯದಂತೆ ದಸರಾ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.

ಕೊಡಗು: ಮಡಿಕೇರಿ ದಸರಾ ಹಿಂದಿನಂತೆ ನಡೆಯಲಿದೆ. ಡಿಜೆ ಬಳಕೆಗೆ ಯಾವುದೇ ಸಮಸ್ಯೆ ಆಗಲ್ಲ. ಈ ಕುರಿತು ಈಗಾಗಲೇ ಕಾನೂನು ಸಚಿವರೊಂದಿಗೆ ಮಾತನಾಡಲಾಗಿದೆ. ಸುಪ್ರೀಂ ಕೋರ್ಟ್​ನಿಂದ ಅನುಮತಿಗೆ ಪ್ರಯತ್ನಿಸಲಾಗುವುದು ಎಂದು ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಹೇಳಿಕೆ ನೀಡಿದರು.

ನಗರದ ಜಿ.ಪಂ.ಸಭಾಂಗಣದಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ಪಡೆದು ಸಚಿವರು ಮಾತನಾಡಿದರು. ರಾತ್ರಿ 10 ಗಂಟೆ ಬಳಿಕ ಮೈಕ್ ಬಳಸದಂತೆ ಸುಪ್ರೀಂ ಕೋರ್ಟ್​ ಆದೇಶ ಹಿನ್ನೆಲೆ ಮಡಿಕೇರಿಯ ದಸರಾ ಜನೋತ್ಸವಕ್ಕೆ ಸಮಸ್ಯೆ ಆಗುವ ಆತಂಕ ಉಂಟಾಗಿತ್ತು. ಮಡಿಕೇರಿ, ಗೋಣಿಕೊಪ್ಪ ದಸರಾಕ್ಕೆ ಹೆಚ್ಚುವರಿ ಅನುದಾನಕ್ಕೆ ಮನವಿ ಹಿನ್ನೆಲೆ ಸಿಎಂ ಅವರ ಬಳಿ ಮಾತನಾಡುತ್ತೇವೆ. ಹೆಚ್ಚುವರಿಯಾಗಿ 40 ಲಕ್ಷ ಕೇಳಿದ್ದಾರೆ. ಅದನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ದಸರಾ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವ ನಾಗೇಶ್​​

ದಸರಾ ಯಶಸ್ಸಿಗೆ ಶ್ರಮಿಸುವಂತೆ ಮನವಿ: ಮಡಿಕೇರಿ ದಸರಾ ಯಾವುದೇ ಸಮಸ್ಯೆಯಿಲ್ಲದೆ ಹಿಂದಿನಂತೆ ನಡೆಯುವುದು. ಮೈಸೂರು ದಸರಾದಷ್ಟೇ ಜನರು ಇಲ್ಲಿಯೂ ಸೇರುತ್ತಾರೆ. ಅದರ ತಯಾರಿಗಾಗಿ ಸಭೆ ಕರೆಯಲಾಗಿತ್ತು. ಎರಡು ವರ್ಷಗಳ ಕಾಲ ಕೋವಿಡ್ ಹಿನ್ನೆಲೆ ಜನ ಇರಲಿಲ್ಲ. ಆದರೆ ಈ ಬಾರಿ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಸಿಎಂ ಜೊತೆಗೆ ಮಾತನಾಡಿ ಅಗತ್ಯತೆಗಳನ್ನು ಪೂರೈಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮಡಿಕೇರಿ ಮತ್ತು ಗೋಣಿಕೊಪ್ಪ ಜನೋತ್ಸವ ದಸರಾಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದೆ. ಸಂಪ್ರದಾಯದಂತೆ ದಸರಾ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಈ ಹಿಂದಿನಂತೆ ದಸರಾವನ್ನು ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ವಿವಿಧ ಉಪ ಸಮಿತಿಗಳು ಸೇರಿದಂತೆ ಕಾಲ ಕಾಲಕ್ಕೆ ಸಭೆ ಆಯೋಜಿಸಿ, ದಸರಾ ಯಶಸ್ಸಿಗೆ ಶ್ರಮಿಸುವಂತೆ ಸಚಿವರು ಮನವಿ ಮಾಡಿದರು.

ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದ್ದು, ದಸರಾವನ್ನು ಸಂಪ್ರದಾಯದಂತೆ ಆಯೋಜಿಸುವಂತಾಗಬೇಕು ಎಂದರು.

165 ವರ್ಷಗಳ ಇತಿಹಾಸ: ಕೊಡಗಿನ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸುಮಾರು 165 ವರ್ಷಗಳ ಇತಿಹಾಸವಿದೆ. ಇತ್ತೀಚಿನ ವರ್ಷಗಳಲ್ಲಿ ದಸರಾ ನಾಡಹಬ್ಬವು ಸರ್ಕಾರದ ಅನುದಾನದೊಂದಿಗೆ ಜನೋತ್ಸವವಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹೇಳಿದರು.

4 ಶಕ್ತಿ ದೇವತೆಗಳ ಕರಗ ಮೆರವಣಿಗೆ: ಮಡಿಕೇರಿ ದಸರಾ ಉತ್ಸವದಲ್ಲಿ 4 ಶಕ್ತಿ ದೇವತೆಗಳ ಕರಗ ಮೆರವಣಿಗೆ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಸೆಪ್ಟೆಂಬರ್, 26 ರಂದು 4 ಶಕ್ತಿ ದೇವತೆಗಳ ಕರಗ ಮೆರವಣಿಗೆಯೊಂದಿಗೆ ದಸರಾಗೆ ಚಾಲನೆ ದೊರೆಯಲಿದೆ. ಸೆ. 27 ಮತ್ತು 28 ರಂದು ಸಾಂಸ್ಕೃತಿಕ ಕಾರ್ಯಕ್ರಮ, ಸೆ.29 ರಂದು ಕ್ರೀಡಾಕೂಟ, ಸೆ.30 ರಂದು ಮಹಿಳಾ ದಸರಾ, ಅ.01 ರಂದು ಯುವ ದಸರಾ, ಅ.02 ರಂದು ಜನಪದ ದಸರಾ, ಅ.3 ರಂದು ಮಕ್ಕಳ ದಸರಾ, ಅ.04 ರಂದು ಕವಿಗೋಷ್ಠಿ ಮತ್ತು ಆಯುಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಈ ಎಲ್ಲಾ ದಿನಗಳಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಅ. 05 ರಂದು ವಿಜಯ ದಶಮಿಯ ರಾತ್ರಿ ದಶ ಮಂಟಪಗಳ ಶೋಭಾಯಾತ್ರೆಯಲ್ಲಿ 10 ದೇವಾಲಯಗಳಿಂದ ವಿಜಯದ ಸಂದೇಶ ನೀಡುವ ದಶಮಂಟಪಗಳು ಶೋಭಾಯಾತ್ರೆ ನಡೆಯಲಿದೆ. ಅ. 06 ರಂದು ಮುಂಜಾನೆ ಸಾಂಪ್ರದಾಯದಂತೆ ಬನ್ನಿ ಕಡಿಯುವುದರ ಮೂಲಕ ದಸರಾ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷರು ಮಾಹಿತಿ ನೀಡಿದರು.

ದಸರಾ ಸಮಿತಿ ಕಾರ್ಯಧ್ಯಕ್ಷರಾದ ರಮೇಶ್ ಮಾತನಾಡಿ, ದಸರಾದ ಅಂದಾಜು ಪಟ್ಟಿಯ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿದರು. ದಸರಾ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಬೇಕು. ವಿದ್ಯುತ್ ಮಾರ್ಗ ಸರಿಪಡಿಸುವುದು, ಆರೋಗ್ಯ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಹೀಗೆ ಹಲವು ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು.

ಇದನ್ನೂ ಓದಿ: ಮಡಿಕೇರಿ ದಸರಾ ಆಚರಣೆ.. ಡಿಜೆಗೆ ನಿರ್ಬಂಧ, ನಿರಾಶರಾದ ಜನತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.