ETV Bharat / state

ಪ್ರತ್ಯೇಕ ಘಟನೆ: ಕಾಡಾನೆ ದಾಳಿಗೆ ವ್ಯಕ್ತಿ ಬಲಿ, ಮಹಿಳೆಗೆ ಗಂಭೀರ ಗಾಯ

author img

By

Published : May 28, 2021, 9:24 AM IST

ಕೊಡಗಿನಲ್ಲಿ ಮಾನವ ಮತ್ತು ಕಾಡಾನೆ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಮತ್ತೋರ್ವ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿದ್ದಾನೆ.

elephant attack
ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಕೊಡಗು: ಜಿಲ್ಲೆಯಲ್ಲಿ ‌ಮತ್ತೆ ಕಾಡಾನೆ ದಾಳಿ ಮಾಡಿದ್ದು, ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.

ಪೊನ್ನಂಪೇಟೆ ತಾಲೂಕಿನ ದೇವಮಚ್ಚಿ ಗ್ರಾಮದ ನಿವಾಸಿ ನಾಣು (60) ಮೃತ ದುರ್ದೈವಿ. ಮುಂಜಾನೆ 6.30ಕ್ಕೆ ಮನೆಗೆ ಆಹಾರ ಸಾಮಾಗ್ರಿ ತರಲು ತಿತಿಮತಿಗೆ ಕಾಫಿ ತೋಟದ ನಡುವೆ ಹೋಗುತ್ತಿದ್ದಾಗ ಆನೆ ದಾಳಿ ಮಾಡಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ನಾಣು ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ.

ಕಾಡಾನೆ ದಾಳಿಗೆ ವ್ಯಕ್ತಿ ಬಲಿ, ಮಹಿಳೆಗೆ ಗಂಭೀರ ಗಾಯ

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿನೆಯಷ್ಟೇ ಮಡಿಕೇರಿ ತಾಲೂಕಿನ ಸುಂಠಿಕೊಪ್ಪದಲ್ಲಿ ಆನೆ ದಾಳಿಗೆ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೇ ಕೆಲವು ದಿನಗಳ ಹಿಂದೆ ಪೊನ್ನಂಪೇಟೆ ಭಾಗದಲ್ಲಿ ಇಬ್ಬರ ಮೇಲೆ ದಾಳಿ ಮಾಡಿತ್ತು. ಈಗ ಮತ್ತೆ ದಾಳಿ ನಡೆದಿದ್ದು, ಸ್ಥಳೀಯರು ಆತಂಕದಲ್ಲಿ ಜೀವನ‌ ನಡೆಸುವಂತಾಗಿದೆ.

ಆಹಾರ ಅರಸಿ ಬರುವ ಕಾಡಾನೆಗಳು ಬೆಳೆಗಳನ್ನು ನಾಶ ಮಾಡುವುದಲ್ಲದೆ ಸಿಕ್ಕ ಸಿಕ್ಕ ಜನರ ಮೇಲೆ ದಾಳಿ ಮಾಡುತ್ತಿವೆ. ರಸ್ತೆಯಲ್ಲಿ ಹೋಗುವ ಜನರ ಮೇಲೆ, ಕೂಲಿಗೆ ಹೋಗುವ ಕಾರ್ಮಿಕರ ಮೇಲೆ ಆನೆಗಳು ದಾಳಿ ಮಾಡಿ ಆತಂಕ ಸೃಷ್ಟಿಸುತ್ತಿವೆ. ಕೆಲಸಕ್ಕೆ ಹೋಗಲು ಜನರು ಹಿಂಜರಿಯುತ್ತಿದ್ದಾರೆ. ಕಾಡಿನಿಂದ ನಾಡಿಗೆ ಬರುವ ಆನೆಗಳನ್ನು ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಕೂಡಲೇ ಆನೆಯನ್ನು ಕಾಡಿಗೆ ಓಡಿಸಬೇಕು, ಇಲ್ಲವೇ ಆನೆಯನ್ನು ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಹಿಳೆಗೆ ಗಂಭೀರ ಗಾಯ:

ಕಾಡಾನೆ ದಾಳಿಗೆ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಸುಂಠಿಕೊಪ್ಪ ಗ್ರಾಮದ ನಿವಾಸಿ ಫಾತೀಮಾ (49) ಗಾಯಗೊಂಡ ಮಹಿಳೆ. ಮುಂಜಾನೆ ಕೂಲಿ ಕೆಲಸಕ್ಕೆ ಹೋಗುವಾಗ ಕಾಡಾನೆ ದಾಳಿ‌ ಮಾಡಿದೆ. ಗಾಬರಿಯಾದ ಮಹಿಳೆ ಕೂಗಾಡಿದ್ರು ಆನೆ ಬಿಡಲಿಲ್ಲ. ಹಿಂದೆ ಬರುತ್ತಿದ್ದ ಸ್ಥಳೀಯರು ಕೂಗಾಡಿದಾಗ ಕಾಡಾನೆ ಗಾಬರಿಗೊಂಡು ಕಾಫಿ ತೋಟಕ್ಕೆ ವಾಪಸಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸುಂಠಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.