ETV Bharat / state

ಸುಪ್ರೀಂಗೆ ಸಲ್ಲಿಸಿರುವ ಮನವಿಯಂತೆ ತಮಿಳುನಾಡಿಗೆ ನಿತ್ಯ 24 ಟಿಎಂಸಿ ನೀರು ಹರಿಸಲು ಸಾಧ್ಯವೇ ಇಲ್ಲ: ಸಚಿವ ಬೋಸರಾಜ್

author img

By

Published : Aug 15, 2023, 3:10 PM IST

Updated : Aug 15, 2023, 5:08 PM IST

ರಾಜ್ಯದ ವಿವಿಧೆಡೆ 77ನೇ ಸ್ವಾತಂತ್ರ್ಯ ದಿನವನ್ನು ಅದ್ಧೂರಿ, ಸಂಭ್ರಮದಿಂದ ಆಚರಿಸಲಾಯಿತು.

Independence Day Parade
ಸ್ವಾತಂತ್ರ್ಯೋತ್ಸವ ಪರೇಡ್​

ಮಡಿಕೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕೊಡಗು: ನಿತ್ಯ 24 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಿದೆ. ಆದ್ರೆ ತಮಿಳುನಾಡು ಸರ್ಕಾರ ಕೇಳುವಷ್ಟು ಪ್ರಮಾಣದ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಸಣ್ಣ ನೀರಾವರಿ ಹಾಗೂ ಕೊಡಗು ಉಸ್ತುವಾರಿ ಸಚಿವ ಬೋಸರಾಜ್ ಹೇಳಿದ್ದಾರೆ. 77 ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಮಡಿಕೇರಿಯ ಐತಿಹಾಸಿಕ ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಮೊದಲು ನಮಗೆ ರಾಜ್ಯದ ರೈತರ ಮತ್ತು ಜನರ ಹಿತಾಸಕ್ತಿಯೇ ಮುಖ್ಯ. ರಾಜ್ಯದ ರೈತರ ಹಿತ ಬಲಿ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟ ಸಂದೇಶ ನೀಡಿದ್ದಾರೆ. ನೀರು ಬಿಡಬೇಕೋ ಬೇಡವೋ ಎಂಬುದು ಪ್ರಕೃತಿಯ ಮೇಲೆ ಆಧಾರಿತವಾಗಿರುತ್ತದೆ. ಈಗಾಗಲೇ ನಡೆಸಿರುವ ಐಸಿಸಿ ಸಭೆಯಲ್ಲಿಯೂ ರೈತರಿಗಾಗಿ ನಾಲೆಗಳಿಗೆ ನೀರು ಯಾವಾಗ ಹರಿಸಬೇಕೆಂದು ನಿರ್ಧರಿಸಲಾಗಿದೆ. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಭಾಗಿಯಾಗಿದ್ದರು.

ಹಾವೇರಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ: ಹಾವೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ 77 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ. ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಧ್ವಜಾರೋಹಣ ನೇರವೇರಿಸಿದರು. ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ನಂತರ ನಡೆದ ಪರೇಡ್ ವೀಕ್ಷಣೆ ನಡೆಸಿದ ಸಚಿವ ಶಿವಾನಂದ ತೆರೆದ ವಾಹನದಲ್ಲಿ ವಿವಿಧ ಪ್ಲಟೋನ್‌ಗಳ ವೀಕ್ಷಣೆ ನಡೆಸಿದರು.

ಹಾವೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ನಂತರ ವಿವಿಧ ಪ್ಲಟೋನಗಳು ಪಥಸಂಚಲ ನಡೆಸಿದವು. ಪೊಲೀಸ್, ಅಬಕಾರಿ ಅರಣ್ಯ ಮತ್ತು ವಿವಿಧ ಶಾಲಾ ವಿದ್ಯಾರ್ಥಿಗಳ ಪಥಸಂಚಲನ ಆಕರ್ಷಣೀಯವಾಗಿತ್ತು. ಇದೇ ಸಂದರ್ಭದಲ್ಲಿ ವಿವಿಧ ವಲಯಗಳಲ್ಲಿ ಗಣ್ಯ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಮನರಂಜನೆ ಕಾರ್ಯಕ್ರಮಗಳು ದೇಶಭಕ್ತಿ ಸಾರಿದವು.

ಚಿಕ್ಕಮಗಳೂರಿನಲ್ಲಿ ರಂಭಾಪುರಿ ಶ್ರೀಗಳಿಂದ ಧ್ವಜಾರೋಹಣ: ರಾಷ್ಟ್ರಧ್ವಜದ ಆರೋಹಣದ ಈ ಸಂದರ್ಭ ರಾಷ್ಟ್ರದ ಐಕ್ಯತೆ ಹಾಗೂ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವುದೇ ಸ್ವಾತಂತ್ರ್ಯದ ಸಂಕೇತ. ಧ್ವಜದಲ್ಲಿನ ಮೂರು ಬಣ್ಣ ಭಾವೈಕ್ಯತೆಯ ಸಂಕೇತ. ಮಧ್ಯದ ಚಕ್ರ ಅಹಿಂಸೆಯನ್ನು ತೋರುತ್ತಿದೆ. ದೇಶದ ಭದ್ರತೆ ಹಾಗೂ ಸುಭ್ರದತೆಯ ಹಿತದೃಷ್ಟಿಯಿಂದ ರಾಷ್ಟ್ರದ ಎಲ್ಲರೂ ಒಂದಾಗಿ-ಒಗ್ಗಟ್ಟಿನಿಂದ ಶ್ರಮಿಸಬೇಕಾಗಿರುವುದು ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.

ಚಿಕ್ಕಮಗಳೂರು ರಂಭಾಪುರಿ ಮಠದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಇಂದು ಮಠದ ಆವರಣದಲ್ಲಿ ಶಾಲಾ ಮಕ್ಕಳ ಜೊತೆ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆಯಲು ರಾಷ್ಟ್ರದ ಮುತ್ಸದ್ಧಿಗಳು, ದೇಶಪ್ರೇಮಿಗಳು ಅವಿರತವಾಗಿ ಹೋರಾಡಿದ್ದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಬ್ರಿಟಿಷರ ದಾಸ್ಯದಿಂದ ಹೊರಬಂದು ಸ್ವಾತಂತ್ರ್ಯವಾಗಿ ಬದುಕಲು ಹೋರಾಡಿದವರಲ್ಲಿ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಬಾಲಗಂಗಾಧರ್ ತಿಲಕ್, ದಾದಾಬಾಯ್ ನವರೋಜಿ ಸೇರಿದಂತೆ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನದಿಂದ ರಾಷ್ಟ್ರ ಸ್ವಾತಂತ್ರ್ಯ ಪಡೆದಿದೆ. ಸ್ವಾತಂತ್ರ್ಯದ ಬಳಿಕ ಈ ರಾಷ್ಟ್ರ ಪ್ರಗತಿ ಪಥದಲ್ಲಿ ನಡೆಯುತ್ತಿರುವುದು ಶುಭೋದಯದ ಸಂಕೇತ ಎಂದರು.

ವೈಯಕ್ತಿಕ ಹಿತಾಸಕ್ತಿಗಾಗಿ ದೇಶದ ಭದ್ರತೆ-ಸುಭ್ರದತೆಗೆ ಯಾವುದೇ ರೀತಿಯ ಧಕ್ಕೆ ಆಗಬಾರದು. ದೇಶ-ನಾಡಿನ ಬಗ್ಗೆ ಸ್ವಾಭಿಮಾನ ಇದ್ದಿದ್ದೇ ಆದರೆ ಎಂತಹ ಕಠಿಣ ಸಮಸ್ಯೆಗಳನ್ನೂ ಎದುರಿಸಬಹುದು. 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿರುವುದು ರಾಷ್ಟ್ರದ ಎಲ್ಲಾ ಜನರ ಸೌಭಾಗ್ಯ. ಈ ದೇಶ ಉತ್ತರೋತ್ತರವಾಗಿ ಅಭಿವೃದ್ಧಿ ಆಗಲಿದೆ ಎಂದರು.

ಬಳ್ಳಾರಿಯಲ್ಲಿ 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಧ್ವಜಾರೋಹಣ: ಬಳ್ಲಾರಿ ನಗರದ ಹೆಚ್​ ಆರ್​ ಗವಿಯಪ್ಪ ವೃತ್ತದಲ್ಲಿ 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಅವರು ಧ್ವಜಾರೋಹಣ ಮಾಡಿದರು. ಸಚಿವ ನಾಗೇಂದ್ರ, ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಳ್ಳಾರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಳ್ಳಾರಿ ವಿಮ್ಸ್ ಕ್ರೀಡಾಂಗಣದಲ್ಲಿ ಸಚಿವ ನಾಗೇಂದ್ರ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ವಾಹನದಲ್ಲಿ ಪೊಲೀಸ್, ಎನ್​ಸಿಸಿ ಸೇರಿದಂತೆ ವಿವಿಧ ತುಕಡಿಗಳ ಪರಿವೀಕ್ಷಣೆ ಮಾಡಿದರು. ಬಳಿಕ 20 ಹೆಚ್ಚು ವಿವಿಧ ತುಕಡಿಗಳಿಂದ ಸಚಿವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಸಚಿವ ನಾಗೇಂದ್ರ ಅವರು ಜೊತೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ಭರತ್ ರೆಡ್ಡಿ, ವೈಎಂ ಸತೀಶ್ ಭಾಗಿಯಾಗಿದ್ದರು.

ಇದನ್ನೂ ಓದಿ: 77 ನೇ ಸ್ವಾತಂತ್ರ್ಯ ದಿನಾಚರಣೆ: ಕೋಲಾರದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ.. ವಿವಿಧ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಸಂಭ್ರಮ

Last Updated : Aug 15, 2023, 5:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.