ETV Bharat / state

ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿ ಅರಳಲು ಕಾರಣವೇನು? ಎಡವಟ್ಟು ಮಾಡಿಕೊಳ್ತಾ ಕಾಂಗ್ರೆಸ್​?

author img

By

Published : Sep 7, 2021, 6:15 AM IST

ಕಾಂಗ್ರೆಸ್ ಸೋಲಿಗೆ ಬಿಜೆಪಿಯ ಸತತ ಪ್ರಯತ್ನ ಕಾರಣ ಒಂದಡೆಯಾದರೆ ಇನ್ನೊಂದೆಡೆ ಕಾಂಗ್ರೆಸ್ ನಾಯಕರಲ್ಲಿ ತಾಳಮೇಳ ತಪ್ಪುತ್ತಿರುವುದು ಇನ್ನೊಂದು ಕಾರಣ ಎನ್ನಲಾಗುತ್ತಿದೆ.

what is the reason for congress fail in palika election
ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿ ಅರಳಲು ಕಾರಣವೇನು?

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಅಧಿಪತ್ಯ ಸಾಧಿಸಿ ಕಾಂಗ್ರೆಸ್ ಭದ್ರಕೋಟೆ ಅಂತಾನೆ ಕರೆಸಿಕೊಂಡಿದ್ದ ಕಲಬುರ್ಗಿ ಮಹಾನಗರ ಪಾಲಿಕೆ ಇದೀಗ ಕಾಂಗ್ರೆಸ್​ಗೆ ಕೈಕೊಟ್ಟು ಕಮಲದ ಮಡಲಿನತ್ತ ವಾಲಿದೆ.

ಕಳೆದ ಸುಮಾರು 40 ವರ್ಷಗಳಿಂದ ಕೇಸರಿ ಪಡೆಗೆ ಒಲಿಯದ ಕಲಬುರಗಿ ಮಹಾನಗರ ಪಾಲಿಕೆಯಲ್ಲೀಗ ಕೇಸರಿ ಪಡೆ ಚಿಗರೊಡಿಯುತ್ತಿದೆ. 2013 ರ ಪಾಲಿಕೆ ಚುನಾವಣೆ ತನಕ ಕೈ ಪಡೆ ಮುಂದೆ ಕೇಸರಿ ಮಕಾಡೆ ಮಲಗುತಿತ್ತು. ಆದರೆ, 2013ರ ನಂತರ ಚುನಾವಣೆಯಲ್ಲಿ ಕಮಲ ಅರಳುತ್ತಲೇ ಬರುತ್ತಿದೆ.

ಮೊದಲನೇ ಬಾರಿಗೆ ಆಡಳಿತ ಚುಕ್ಕಾಣೆ:

2013 ರ ಗುಲ್ಬರ್ಗಾ ಮಹಾನಗರ ಪಾಲಿಕೆಯ 55 ವಾರ್ಡ್ ಗಳ ಪೈಕಿ 23 ಸೀಟುಗಳನ್ನು ಗೆದ್ದು ಕಾಂಗ್ರೆಸ್ ಜಯಭೇರಿ ಭಾರಿಸಿದ್ದರೆ, ಉಳಿದ ಪಕ್ಷಗಳು ಹೀನಾಯ ಸೋಲನುಭಿಸಿದ್ದವು. ಬಿಜೆಪಿ 7, ಜನತಾ ದಳ (ಜಾತ್ಯತೀತ) 10, ಕೆಜೆಪಿ 7, ಪಕ್ಷೇತರರು 6, ಇತರ 2 ಅಭ್ಯರ್ಥಿಗಳು ಗೆದ್ದಿದ್ದರು. ಕಾಂಗ್ರೆಸ್ ಪರ ಗಾಳಿ ಮುಂದುವರೆದಿರುವದು ಆ ವರ್ಷವು ಸ್ಪಷ್ಟವಾಗಿತ್ತು.

ಆದ್ರೆ ಕಾಂಗ್ರೆಸ್ ಪಕ್ಷದ ಆಂತರಿಗೆ ಸಮಸ್ಯೆಯಿಂದಾಗಿ ಬಿಜೆಪಿ ಇತರ ಸದಸ್ಯರ ಬೆಂಬಲ ಹಾಗೂ ಬಂಡಾಯ ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಬಿಜೆಪಿ ಆಡಳಿತ ಚುಕ್ಕಾಣೆ ಹಿಡಿದಿತ್ತು. ನಂತರ 2018 ರಲ್ಲಿ ನಡೆಯಬೇಕಿದ್ದ ಚುನಾವಣೆ ವಾರ್ಡ್ ವರ್ಗಿಕರಣ ಸೇರಿದಂತೆ ಇತರ ತಾಂತ್ರಿಕ ಕಾರಣಗಳಿಂದ ಚುನಾವಣೆ ಮುಂದೂಡುತ್ತಲೆ ಬರಲಾಗಿತ್ತು. ಇದೀಗ ಮತ್ತೊಮ್ಮೆ ಪಾಲಿಕೆ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷದ ಸರಿಸಮಾನವಾಗಿ ಬಿಜೆಪಿ ಹೆಜ್ಜೆ ಇಡುವಲ್ಲಿ ಯಶಸ್ವಿ ಕಂಡಿದೆ.

ಬಿಜೆಪಿ ಸಾಧನೆ‌ ಕಾಂಗ್ರೆಸ್‌ಗೆ ಆತಂಕ:

ಪಾಲಿಕೆ ಚುನಾವಣೆ 2021ರಲ್ಲಿ ಕಾಂಗ್ರೆಸ್ 27 ಸ್ಥಾನ ಗಳಿಸಿದ್ರೆ, ಸರಿಸಮಾನವಾಗಿ ಬೆನ್ನಟ್ಟಿದ ಬಿಜೆಪಿ 23 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದಂತೆ 4 ಜೆಡಿಎಸ್ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದೊಂದಿಗೆ ಸೇರಿ ಕಲಬುರ್ಗಿಯಲ್ಲಿ ಬಿಜೆಪಿ ಅಧಿಪತ್ಯ ಸಾಧಿಸಲು ಈಗಾಗಲೇ ರಣತಂತ್ರ ರೂಪಿಸಲು ಆರಂಭಿಸಿದೆ.

ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರ ತವರಾಗಿರುವ ಕಲಬುರಗಿಯಲ್ಲಿ ಕಾಂಗ್ರೆಸ್ ಭದ್ರಕೋಟೆ ನಿಧಾನವಾಗಿ ಚಿದ್ರವಾಗುತ್ತಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಯಾಗತೊಡಗಿದೆ. ಹೇಳ ಹೆಸರು ಇಲ್ಲದಂತಿರುತ್ತಿದ್ದ ಬಿಜೆಪಿ ಈಗ ಸರಿಸಮ ಬಲದಲ್ಲಿ ನಿಲ್ಲುತ್ತಿರುವುದು ಕೇಸರಿ ಪಡೆಯಲ್ಲಿ ಉತ್ಸಾಹ ಹೆಚ್ಚಿಸಿದ್ರೆ, ಕೈಪಡೆಯಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.

ಖಮರುಲ್ ಇಸ್ಲಾಂ ಹಾಗೂ ರವಿಕುಮಾರ್​
ಖಮರುಲ್ ಇಸ್ಲಾಂ ಹಾಗೂ ರವಿಕುಮಾರ್​

ಇಚ್ಛಾಶಕ್ತಿ ಕೊರತೆ ಸೋಲಿಗೆ ಕಾರಣ?

ಕಾಂಗ್ರೆಸ್ ಸೋಲಿಗೆ ಬಿಜೆಪಿಯ ಸತತ ಪ್ರಯತ್ನ ಕಾರಣ ಒಂದೆಡೆಯಾದ್ರೆ ಇನ್ನೊಂದಡೆ ಕಾಂಗ್ರೆಸ್ ನಾಯಕರಲ್ಲಿ ತಾಳಮೇಳ ತಪ್ಪುತ್ತಿರುವುದು ಇನ್ನೊಂದು ಕಾರಣ ಎನ್ನಲಾಗುತ್ತಿದೆ. ಪಾಲಿಕೆಯ ಪ್ರತಿ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ಶಾಸಕ ಖಮರುಲ್ ಇಸ್ಲಾಂ ನಿಧನದಿಂದ ಇಲ್ಲಿನ ರಾಜಕೀಯ ಚದುರಂಗದಾಟಕ್ಕೆ ಹಿನ್ನೆಡೆ ಆಗಿದೆ ಎಂದು ಸ್ವತಃ ಖಮರುಲ್ ಇಸ್ಲಾಂ ಅವರ ಪತ್ನಿ ಶಾಸಕಿ ಖನೀಜಾ ಫಾತಿಮಾ ಹೇಳಿದ್ದಾರೆ.

ಮತ್ತೊಂದಡೆ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಮಾಜಿ ಸಿಎಂ ಎನ್ ಧರಂಸಿಂಗ್ ನಿಧನದ ಹಿನ್ನೆಲೆ ಅವರ ಅನುಪಸ್ಥಿತಿ ಇದ್ದರೆ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಕಾರಣ ಕಲಬುರಗಿ ರಾಜಕಾರಣದತ್ತ ಇಚ್ಛಾಶಕ್ತಿ ಕಳೆದುಕೊಂಡಿದ್ದಾರೆ.

ಇಂತಹ ಹಲವು ಕಾರಣಗಳಿಂದ ಘಟಾನುಘಟಿ ನಾಯಕರ ಅನುಪಸ್ಥಿತಿ ಕಾಂಗ್ರೆಸ್ ಭದ್ರಕೋಟೆ ಒಡೆಯಲು ಕಾರಣವಾಗಿದೆ ಎನ್ನಲಾಗಿದೆ. ಮಾತ್ರವಲ್ಲ ಟಿಕೆಟ್ ಹಂಚಿಕೆಯಲ್ಲಿಯೂ ನಾಯಕರುಗಳು‌ ಪ್ರಭಾವ ಬಿರಿದ್ದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಅಂತ ವಿಶ್ಲೇಷಿಸಲಾಗುತ್ತಿದೆ.‌

ಜೇವರ್ಗಿ ಶಾಸಕ ಅಜಯಸಿಂಗ್ ಸೇರಿ ಇತರ ನಾಯಕರು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಅಭ್ಯರ್ಥಿಗಳ ಪರವಾಗಿ ನಾಯಕರು ಸಮರ್ಪಕ ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬರುವ ರಣತಂತ್ರ ರೂಪಿಸಲು ವಿಫಲವಾಗಿ ಸೋಲಿನ ಕಹಿ ಅನುಭವಿಸಿದ್ದಾರೆ ಅಂತ ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ.

ಬಿಜೆಪಿ ನಾಯಕರ ವರ್ಕೌಟ್ ಯಶಸ್ವಿ:

ಕಾಂಗ್ರೆಸ್ ತನ್ನ ನಾಯಕರನ್ನು ಕರೆಸಿ ಪ್ರಚಾರ ಮಾಡುವಲ್ಲಿ ಹಿನ್ನಡೆ ಅನುಭವಿಸಿದೆ. ಇದನ್ನೇ ನಗದೀಕರಣ ಮಾಡಿಕೊಂಡ ಬಿಜೆಪಿ ನಾಯಕರು ತಮ್ಮ ಘಟಾನುಘಟಿ ನಾಯಕರನ್ನು ಕರೆಸಿ ಪ್ರಚಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ, ಸಚಿವರಾದ ಬೈರತಿ ಬಸವರಾಜ್, ಶ್ರೀರಾಮುಲು, ಮುರುಗೇಶ್ ನಿರಾಣಿ, ನಾಗೇಶ್ ಸೇರಿದಂತೆ ಅನೇಕ ನಾಯಕರು ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದರು.

ಅಲ್ಲದೇ ಕಲಬುರ್ಗಿಯಲ್ಲಿಯೇ ಟಿಕಾಣಿ ಹೂಡಿದ ರಾಜಕೀಯ ಚದುರಂಗದಾಟದ ಕಿಲಾಡಿ ಅಂತಲೇ ಹೆಸರು ಪಡೆದ ಬಿಜೆಪಿ ಕಾರ್ಯದರ್ಶಿ ಎನ್. ರವಿಕುಮಾರ್​​ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆ ಆಗಲು ಕಾರಣರಾಗಿದ್ದಾರೆ. .

ಒಟ್ಟಿನಲ್ಲಿ ಕಾಂಗ್ರೆಸ್ ತನಗರಿವಿಲ್ಲದಂತೆ ಮಾಡುತ್ತಿರುವ ಚಿಕ್ಕಪುಟ್ಟ ತಪ್ಪುಗಳನ್ನೇ ಎನ್​ಕ್ಯಾಶ್​ ಮಾಡಿಕೊಂಡು ಭದ್ರಕೊಟೆ ಒಡೆದು ತನ್ನ ಮಡಿಲಿಗೆ ಹಾಕಿಕೊಳ್ಳಲು ಬಿಜೆಪಿ ಮಾಡಿದ ಪ್ರಯತ್ನ ಸಫಲಗೊಂಡಿದೆ ಅಂತ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.