ETV Bharat / state

ಮಣಿಕಂಠ ರಾಠೋಡ್​ ಮೇಲೆ ದಾಳಿಯೇ ನಡೆದಿಲ್ಲ: ಎಸ್​ಪಿ ಅಡ್ಡೂರು ಶ್ರೀನಿವಾಸುಲು ಸ್ಪಷ್ಟನೆ

author img

By ETV Bharat Karnataka Team

Published : Dec 7, 2023, 8:38 AM IST

Updated : Dec 7, 2023, 5:52 PM IST

ನಾನು ಹಲ್ಲೆ ಮಾಡಿಸಿದ್ದೇನೆಂದು ಆರೋಪ ಮಾಡಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ್​, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

SP Adduru Srinivasulu
ಕಲಬುರಗಿ ಎಸ್​ಪಿ ಅಡ್ಡೂರು ಶ್ರೀನಿವಾಸುಲು

ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಲಬುರಗಿ ಎಸ್​ಪಿ ಅಡ್ಡೂರು ಶ್ರೀನಿವಾಸುಲು

ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​​ ಮೇಲೆ ದಾಳಿಯೇ ನಡೆದಿಲ್ಲ, ಕಾರು ಅಪಘಾತದಲ್ಲಿ ಗಾಯಗೊಂಡು ಸುಖಾಸುಮ್ಮನೆ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿರುವುದು ಪೊಲೀಸ್​ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ಕಲಬುರಗಿ ಎಸ್​ಪಿ ಅಡ್ಡೂರು ಶ್ರೀನಿವಾಸುಲು ಸ್ಪಷ್ಟೀಕರಣ ನೀಡಿದ್ದಾರೆ.

"ಮಣಿಕಂಠ ರಾಠೋಡ್​ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಶಹಾಬಾದ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಮಾಡಿದಾಗ ಅವರ ಮೇಲೆ ಹಲ್ಲೆಯಾಗಿರಲಿಲ್ಲ, ಅದೊಂದು ಅಪಘಾತ ಪ್ರಕರಣವೆಂದು ತನಿಖೆಯಲ್ಲಿ ಬಯಲಾಗಿದೆ. ಸಾಕ್ಷಿದಾರರ ಹೇಳಿಕೆ ಹಾಗೂ ಪೊಲೀಸ್ ತನಿಖೆಯಲ್ಲಿ ಅಪಘಾತವಾಗಿರುವುದು ಗೊತ್ತಾಗಿದೆ. ಯಾದಗಿರಿ ಜಿಲ್ಲೆಯ ಗುರಮಠಕಲ್ ಹತ್ತಿರದ ಚೆಪೆಟ್ಲಾದಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನ್ಯಾಯಾಧೀಶರ ಮುಂದೆ ಸಾಕ್ಷಿದಾರರ ಹೇಳಿಕೆಯನ್ನು ಪಡೆಯಲಾಗಿದೆ. ಅಪಘಾತವಾದ ಕಾರನ್ನು ಹೈದರಾಬಾದ್​ನ ಶೋ ರೂಮ್​ವೊಂದರಲ್ಲಿ ಬಿಟ್ಟಿರುವುದು ಪತ್ತೆಯಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಎಸ್​ಪಿ ಅಡ್ಡೂರು ಶ್ರೀನಿವಾಸಲು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮಣಿಕಂಠ ರಾಠೋಡ್​ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆ : ಇನ್ನು ಈ ಕುರಿತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ''ಬಿಜೆಪಿ ಪಕ್ಷದ‌ ಮಣಿಕಂಠ ರಾಠೋಡ ಮೇಲಿನ ಹಲ್ಲೆ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅವರು ದೂರು ನೀಡಿರುವಂತೆ ಶಂಕರವಾಡಿ ಬಳಿ ಅವರ ಮೇಲೆ ಯಾವುದೇ ಹಲ್ಲೆಯಾಗಿಲ್ಲ. ಬದಲಿಗೆ ಮಣಿಕಂಠ ಹಾಗೂ ಅವರ ಸ್ನೇಹಿತರು ಪ್ರಯಾಣಿಸುತ್ತಿದ್ದ ವಾಹನ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚೆಪೆಟ್ಲಾ ಬಳಿ ಅಪಘಾತಕ್ಕೀಡಾಗಿದೆ. ಆ ಸಂದರ್ಭದಲ್ಲಿ ಅವರಿಗೆ ಗಾಯಗಳಾಗಿವೆ, ಇದು ತನಿಖೆಯ ವೇಳೆ ಸಾಕ್ಷಿಗಳ ಹೇಳಿಕೆಯಿಂದ ತಿಳಿದು ಬಂದಿದೆ ಅಂತಾ ಎಸ್ ಪಿ ಅಡ್ಡೂರು ಶ್ರೀನಿವಾಸಲು ಸ್ಪಷ್ಟಪಡಿಸಿದ್ದಾರೆ. ನನ್ನ ಮೇಲೆ ನಿರಾಧಾರ ಆರೋಪ ಮಾಡಿ ಚಾರಿತ್ರ್ಯ ಹರಣ ಮಾಡಿದ‌ ಬಿಜೆಪಿಯ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸುವೆ. ಮಣಿಕಂಠ ರಾಠೋಡ್​ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆ'' ಎಂದು ಹೇಳಿದರು.

ಅಕ್ಕಿ ಹಾಗೂ ಹಾಲಿನ ಪುಡಿ ಕಳ್ಳತನದ ಆರೋಪದ ಮೇಲೆ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿಯ ಮಾತು ಕೇಳಿಕೊಂಡು ನನ್ನ ಚಾರಿತ್ರ್ಯ ಹರಣ ಮಾಡಿ ರಾಜೀನಾಮೆಗೆ ಒತ್ತಾಯಿಸಿದ್ದ ವಿರೋಧ ಪಕ್ಷದ ನಾಯಕ ಆರ್ ಅಶೋಕ್​, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ ಸೇರಿದಂತೆ ಬಿಜೆಪಿಯ ಕೆಲ ನಾಯಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸುವುದರ ಜೊತೆಗೆ ಸಿಎಲ್​ಪಿ ಲೀಡರ್ ಜೊತೆಗೆ ಚರ್ಚಿಸಿ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಪ್ರಿಯಾಂಕ್​ ಖರ್ಗೆ ಹೇಳಿದರು.

ಇದನ್ನೂ ಓದಿ : ಕಲಬುರಗಿ : ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಮಣಿಕಂಠ ರಾಠೋಡ್ ನೀಡಿದ ದೂರಿನಂತೆ ತನಿಖೆ ಕೈಗೊಂಡ ಪೊಲೀಸರು ಸತ್ಯವನ್ನು ಬಯಲಿಗೆ ಎಳೆದಿದ್ದಾರೆ. ನನ್ನ ಮೇಲೆ ಆಧಾರರಹಿತ ಆರೋಪ ಹೊರೆಸಿ ನನ್ನ ರಾಜೀನಾಮೆಗೆ ಆಗ್ರಹಿಸಿ ಸಂಪುಟದಿಂದ ವಜಾ‌ ಮಾಡುವಂತೆ ಹೇಳಿದ ಬಿಜೆಪಿ ನಾಯಕರು ಈಗ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುತ್ತಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಮಣಿಕಂಠನ ಪರವಾಗಿ ಬ್ಯಾಟಿಂಗ್ ಮಾಡುವ ಬಿಜೆಪಿ ನಾಯಕರು ಅವನು ಪ್ರಿಯಾಂಕ್ ಖರ್ಗೆಯನ್ನು ಶೂಟ್ ಮಾಡುತ್ತೇನೆ ಎಂದಾಗ, ಖರ್ಗೆ ಕುಟುಂಬವನ್ನು ಸಾಫ್ ಮಾಡುತ್ತೇನೆ ಎಂದಾಗ, ನನ್ನ ಕುಟುಂಬದವರ ಮತ್ತು ತಾಯಿಯ ಫೋಟೋಗಳನ್ನು ಸಾಮಾಜಿಕ‌ ಜಾಲತಾಣದಲ್ಲಿ ಹಾಕಿದ್ದಾಗ ಎಲ್ಲಿಗೆ ಹೋಗಿದ್ದರು ? ಎಂದು ವಾಗ್ದಾಳಿ ನಡೆಸಿದರು.

Last Updated : Dec 7, 2023, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.