ಕಲಬುರಗಿ : ತಂದೆಯ ಕೊಲೆಗೆ ಸೇಡು ತೀರಿಸಿಕೊಳ್ಳಲು ಆರೋಪಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದ ಘಟನೆ ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ನಡೆದಿದೆ.
ದೇಗಲಮಡಿ ಗ್ರಾಮದ ರಾಜ್ಕುಮಾರ್ (35) ಎಂಬುವರು ಕೊಲೆಯಾದ ವ್ಯಕ್ತಿ. ಈತನನ್ನು ಇದೇ ಗ್ರಾಮದ ಮಹೇಶ್ ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ರಾಜ್ ಕುಮಾರ್ ಈ ಹಿಂದೆ ಮಹೇಶ್ನ ತಂದೆಯನ್ನ ಕೊಲೆ ಮಾಡಿದ ಆರೋಪದ ಮೇರೆಗೆ ಜೈಲು ಸೇರಿದ್ದ. ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ.
ಇತ್ತೀಚೆಗೆ ಗ್ರಾಮದಲ್ಲಿ ಮತ್ತೆ ಪುಢಾರಿತನ ನಡೆಸಿದ್ದನಂತೆ. ಗ್ರಾಮದ ದೇವಸ್ಥಾನ ಮತ್ತಿತರೆಡೆ ಕುಳಿತ ಜನರನ್ನು ಬೆದರಿಸಿ ಕಳುಹಿಸುವುದು ಮಾಡುತ್ತಿದ್ದನಂತೆ. ಇದಲ್ಲದೆ ನಿನ್ನೆ ತಡರಾತ್ರಿ ಕುಡಿದ ನಶೆಯಲ್ಲಿ ಮಹೇಶನ ಮನೆಗೆ ತೆರಳಿ ಗಲಾಟೆ ಮಾಡಿದ್ದನಂತೆ.
ಸಮಾಧಾನ ಮಾಡಿ ಕಳುಹಿಸಿದ್ದರೂ ಇಂದು ಬೆಳಗ್ಗೆ ಮತ್ತೆ ಮನೆಗೆ ನುಗ್ಗಿ ರಾಜ್ಕುಮಾರ್ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಮಹೇಶ್, ರಾಜ್ಕುಮಾರ್ನ ತಲೆಯ ಮೇಲೆ ಕಲ್ಲು ಹಾಕಿ ಹತ್ಯೆಗೈದಿದ್ದಾನೆ ಎಂಬುದು ತಿಳಿದು ಬಂದಿದೆ. ಸದ್ಯ ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಓದಿ: ಚಳ್ಳಕೆರೆಯಲ್ಲಿ ಮರ್ಡರ್.. ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆಂಡತಿಯನ್ನೇ ಕೊಂದ ಪಾಪಿ ಪತಿ