ETV Bharat / state

ನಾವು ಬಿಟ್ರೆ ತಾನೇ ಡಿಕೆಶಿ-ಸಿದ್ದರಾಮಯ್ಯ ಸಿಎಂ ಆಗೋದು: ಸಚಿವ ಬಿ. ಶ್ರೀರಾಮುಲು

author img

By

Published : Jul 19, 2022, 7:49 PM IST

ಸಮಾಜವಾದಿ ಸಿದ್ಧಾಂತಗಳನ್ನ ಸಿದ್ದರಾಮಯ್ಯ ಗಾಳಿಗೆ ತೂರಿದ್ದಾರೆ- ಅವರನ್ನು ಬಾದಾಮಿ ಕ್ಷೇತ್ರದ ಜನ ತಿರಸ್ಕರಿಸುತ್ತಾರೆ- ಸಾರಿಗೆ ಸಚಿವ ಬಿ. ಶ್ರೀರಾಮುಲು

ಸಚಿವ ಬಿ. ಶ್ರೀರಾಮುಲು
ಸಚಿವ ಬಿ. ಶ್ರೀರಾಮುಲು

ಕಲಬುರಗಿ: ನಾವು ಬಿಟ್ರೆ ತಾನೇ ಡಿ. ಕೆ ಶಿವಕುಮಾರ್, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದು? ಮುಖ್ಯಮಂತ್ರಿ ಸ್ಥಾನ ಏನು ಅವರ ಮನೆ ಕುರ್ಚಿನಾ? ಅವರು ಕನಸು ಕಾಣ್ತಿದ್ದಾರೆ ಅಷ್ಟೇ. ನಾವು ಅವರನ್ನು ಸಿಎಂ ಆಗಲು ಬಿಡೋದಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಸಚಿವ ಬಿ. ಶ್ರೀರಾಮುಲು ಅವರು ಮಾತನಾಡಿರುವುದು

ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ‌ಮಾತನಾಡಿದ ಅವರು, ಎಸ್​ ಎಂ ಕೃಷ್ಣ ಅವರ ಬಳಿಕ ಒಕ್ಕಲಿಗರಿಗೆ ಸಿಎಂ ಆಗುವ ಅದೃಷ್ಟ ಒಲಿದು ಬರಲಿದೆ ಎಂಬ ಡಿ. ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಪಕ್ಷದಲ್ಲಿಯೇ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಒಂದು ಕಡೆ ಸಿದ್ದರಾಮೋತ್ಸವ ನಡೆಯುತ್ತಿದೆ. ಮತ್ತೊಂದೆಡೆ ಡಿಕೆಶಿ ಈ ರೀತಿ ಮಾತನಾಡುತ್ತಿದ್ದಾರೆ. ಯಾವುದೇ ಉತ್ಸವಗಳು ನಡೆಯಲಿ. ಉತ್ಸವ ಮೂರ್ತಿಗಳು ದೇವಾಲಯದ ಹೊರಗೆ ಇರಬೇಕು. ಊರೆಲ್ಲಾ ಮೆರವಣಿಗೆ ಮಾಡಿ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಹೊರಗೆ ಇಡುತ್ತಾರೆ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕಾಗಿದೆ.‌ ಸಿದ್ದರಾಮಯ್ಯ ಅವರ ಮುಂದಿನ ಪರಿಸ್ಥಿತಿಯೂ ಇದೇ ಆಗುತ್ತೆ ಎಂದು ವ್ಯಂಗ್ಯವಾಡಿದರು.

ಸಿದ್ಧಾಂತ ಗಾಳಿಗೆ ತೂರಿದ್ದಾರೆ: ತಾವು ಮುಂದಿನ ಮುಖ್ಯಮಂತ್ರಿ ಆಗಬಹುದು ಅಂದುಕೊಂಡಿರುವ ಸಿದ್ದರಾಮಯ್ಯ ಅವರು, ಒಂದು ಕ್ಷೇತ್ರಕ್ಕಾಗಿ ಅಲ್ಲಿ ಇಲ್ಲಿ ಅಂತಾ ಹುಡುಕಾಟ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ನನ್ನ ಸ್ಪರ್ಧೆ ಬಗ್ಗೆ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು. ಪಕ್ಷ ಎಲ್ಲಿ ಸ್ಪರ್ಧಿಸಲು ಸೂಚಿಸುತ್ತದೆಯೋ ಅಲ್ಲಿ ನಾನು ಸ್ಪರ್ಧಿಸುತ್ತೇನೆ. ಸಿದ್ದರಾಮಯ್ಯನವರ ಬಗ್ಗೆ ಭಯ ಅನ್ನುವ ಪ್ರಶ್ನೆಯೇ ಇಲ್ಲ. ಸಮಾಜವಾದಿ ಸಿದ್ಧಾಂತದಿಂದ ಬಂದವರು ಈ ರೀತಿ ಉತ್ಸವ ಮಾಡುತ್ತ ಸಿದ್ಧಾಂತವನ್ನು ಗಾಳಿಗೆ ತೂರಿದ್ದಾರೆ ಎಂದು ಸಚಿವ ಶ್ರೀರಾಮುಲು ಆರೋಪಿಸಿದ್ರು.

ಸಿದ್ದರಾಮಯ್ಯ ಅವರನ್ನು ಈ ಬಾರಿ ಬಾದಾಮಿ ಕ್ಷೇತ್ರದ ಜನ ತಿರಸ್ಕರಿಸುತ್ತಾರೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಶ್ರೀರಾಮುಲು ಅವರನ್ನು ಕಳೆದುಕೊಂಡಿದ್ದೇವೆ ಎಂದು ಜನ ಪಶ್ಚಾತ್ತಾಪ ಮತ್ತು ನೋವು ಅನುಭವಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ತಿರಸ್ಕೃತ ಪಕ್ಷ: ಸದ್ಯ ನಮ್ಮ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಮೋದಿ ಎಲ್ಲಿಯವರೆಗೆ ಇರ್ತಾರೋ ಅಲ್ಲಿಯವರೆಗೆ ರಾಜ್ಯದಲ್ಲಿ ಬೇರೆ ಪಕ್ಷದವರು ಸಿಎಂ ಆಗಲ್ಲ. ನಾವು ರಾಜ್ಯದಲ್ಲಿ ಬಿಜೆಪಿ ಸೋಲುವುದಕ್ಕೆ ಬಿಡುವುದಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್​ ತಿರಸ್ಕೃತ ಪಕ್ಷವಾಗಿದೆ ಎಂದು ಸಚಿವ ಶ್ರೀರಾಮುಲು ಹರಿಹಾಯ್ದರು.

ಓದಿ: ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ: ಉದ್ಘಾಟಕರ ಆಯ್ಕೆ ಸಿಎಂ ಹೆಗಲಿಗೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.