ETV Bharat / state

ಸಾರಿಗೆ ಬಸ್ ಹತ್ತಲು ಶಾಲಾ ವಿದ್ಯಾರ್ಥಿನಿಯರಿಗೆ ಅಡ್ಡಿ ಆರೋಪ: ಕಲಬುರಗಿಯಲ್ಲಿ ಕೆಕೆಆರ್​ಟಿಸಿ ಚಾಲಕ ಅಮಾನತು

author img

By

Published : Jul 28, 2023, 9:41 PM IST

kkrtc-bus-driver-suspended-for-not-allowing-school-girls-in-bus
ಸಾರಿಗೆ ಬಸ್ ಹತ್ತಲು ಶಾಲಾ ವಿದ್ಯಾರ್ಥಿನಿಯರಿಗೆ ಅಡ್ಡಿ : ಕಲಬುರಗಿಯಲ್ಲಿ ಕೆಕೆಆರ್​ಟಿಸಿ ಚಾಲಕ ಅಮಾನತು

ಶಾಲಾ ವಿದ್ಯಾರ್ಥಿನಿಗೆ ಬಸ್​ ಹತ್ತಲು ಅಡ್ಡಿಪಡಿಸಿದ ಆರೋಪದ ಮೇಲೆ ಬಸ್ ಚಾಲಕನ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಕಲಬುರಗಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಾರಿಗೆ ಬಸ್ ಹತ್ತಲು ಶಾಲಾ ವಿದ್ಯಾರ್ಥಿನಿಯರಿಗೆ ಅಡ್ಡಿಪಡಿಸಿದ್ದಲ್ಲದೇ, ಬುರ್ಖಾ ಧರಿಸಿ ಮಾತನಾಡು ಎಂದು ಹೇಳಿ ಅನುಚಿತವಾಗಿ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಬಸ್ ಚಾಲಕನನ್ನು ಅಮಾನತು ಮಾಡಲಾಗಿದೆ.

ಕಲಬುರಗಿ ಬಸ್ ಡಿಪೋ 3 ರ ಚಾಲಕ ಮೆಹಬೂಬ್ ಪಟೇಲ್ ಅಮಾನತುಗೊಂಡ ಚಾಲಕ. ಜುಲೈ 26ರಂದು ಬಸವಕಲ್ಯಾಣ - ಕಲಬುರಗಿ ಮಧ್ಯೆ ಸಂಚರಿಸುವ ಬಸ್ ಕಮಲಾಪುರ ನಿಲ್ದಾಣದಲ್ಲಿ ನಿಂತಾಗ ಕಮಲಾಪುರದಿಂದ ಓಕಳಿ ಗ್ರಾಮಕ್ಕೆ ಹೋಗಲು ಬಸ್ ಹತ್ತುತ್ತಿದ್ದ ವಿದ್ಯಾರ್ಥಿನಿಯರ ಜೊತೆ ಚಾಲಕ ದರ್ಪದಿಂದ ವರ್ತಿಸಿದ್ದ ಆರೋಪ ಕೇಳಿ ಬಂದಿದೆ. ಇದೇ ವೇಳೆ, ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಿ ಮಾತನಾಡು ಎಂದು ಚಾಲಕ ಹೇಳಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ, ಇದೇ ವಿಚಾರವಾಗಿ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದೀಗ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಚಾಲಕನನ್ನು ಅಮಾನತು ಮಾಡಲಾಗಿದೆ ಎಂದು ಕೆಕೆಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ ರಾಚಪ್ಪ ದೃಢಪಡಿಸಿದ್ದಾರೆ‌.

ಚಾಲಕ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರು ಎಂಬ ಆರೋಪ ಇದೆ. ಶಿಕ್ಷಕರು ಮತ್ತು ಚಾಲಕನ ನಡುವೆ ನಡೆದ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಅಲ್ಲದೇ, ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಚಾಲಕ ಮೆಹಬೂಬ್ ಪಟೇಲ್ ವಿರುದ್ದ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಚಾಲಕನನ್ನು ಕೆಕೆಆರ್​ಟಿಸಿ ಕಲಬುರಗಿ ವಿಭಾಗದ ಡಿಸಿ ಅಮಾನತು ಮಾಡಿದ್ದಾರೆ.

ಪ್ರತ್ಯೇಕ ಘಟನೆ- ಮಂಗಳೂರಲ್ಲಿ ಬಸ್​​ ಚಾಲಕನ ಮೇಲೆ ಕ್ರಮ: ಇತ್ತೀಚೆಗೆ ಬಸ್​ ಚಾಲನೆ ವೇಳೆ ಮೊಬೈಲ್​ ಬಳಸಿದ ಆರೋಪದ ಮೇಲೆ ಮಂಗಳೂರಿನಲ್ಲಿ ಚಾಲಕರೊಬ್ಬರನ್ನು ಅಮಾನತು ಮಾಡಲಾಗಿತ್ತು. ಮಂಗಳೂರಿನ ಸ್ಟೇಟ್ ಬ್ಯಾಂಕ್​ ಬಳಿಯಿಂದ ತಲಪಾಡಿ ನಡುವೆ ಚಲಿಸುವ ಸಿಟಿ ಬಸ್​ ಚಾಲಕ ಮೊಬೈಲ್ ಬಳಸುತ್ತಲೇ ಚಾಲನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. 42 ನಂಬರಿನ ಸೈಂಟ್ ಆಂಟನಿ ಬಸ್ ಚಾಲಕ ನಿರ್ಲಕ್ಷ್ಯ ರೀತಿಯಲ್ಲಿ ಮೊಬೈಲ್ ಉಪಯೋಗಿಸುತ್ತ ಬಸ್ ಚಲಾಯಿಸಿದ್ದರು.

ಪ್ರಯಾಣಿಕರೊಬ್ಬರು ಇದರ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟು ವರೆಗೂ ಮೊಬೈಲ್ ಹಿಡಿದುಕೊಂಡು ಬಸ್​ ಚಲಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಬಳಿಕ ಟ್ರಾಫಿಕ್​ ಪೊಲೀಸ್​ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಚಾಲಕನ ಡಿಎಲ್ ರದ್ದುಗೊಳಿಸುವಂತೆ ಆರ್‌ಟಿಒಗೆ ಸೂಚಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್​ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದರು.

ಇದನ್ನೂ ಓದಿ; ಒಂದು ಕೈಲಿ ಮೊಬೈಲ್, ಇನ್ನೊಂದು ಕೈಯಲ್ಲಿ ಬಸ್​ ಸ್ಟೇರಿಂಗ್ ​: ಚಾಲಕನ ವಿಡಿಯೋ ವೈರಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.