ETV Bharat / state

ಗುಲಾಬಿ ಬೆಳೆದು ಲಕ್ಷ ಲಕ್ಷ ಆದಾಯ.. ಬಡ ರೈತನ ಬದುಕು ಅರಳಿಸಿತು ರೋಸ್​

author img

By

Published : Nov 27, 2022, 4:50 PM IST

ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ದಿನ್ಸಿ (ಕೆ) ಗ್ರಾಮದ ನಿವಾಸಿಯೊಬ್ಬರು ಒಂದೂವರೆ ಎಕರೆ ಬರಡು ಭೂಮಿಯಲ್ಲಿ ಗುಲಾಬಿ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ರೈತ ಹನುಮಂತ ಹಾಗೂ ಗುಲಾಬಿ ಬೆಳೆ
ರೈತ ಹನುಮಂತ ಹಾಗೂ ಗುಲಾಬಿ ಬೆಳೆ

ಕಲಬುರಗಿ: ಹೆಚ್ಚಿನ ಲಾಭಕ್ಕಾಗಿ ಕೆಲವು ರೈತರು ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ ಕೃಷಿಯನ್ನು ಮಾಡ್ತಿದ್ದಾರೆ. ಆದರೆ ಇಲ್ಲೊಬ್ಬ ರೈತರಿದ್ದಾರೆ ಇವರು ಬೇರೆ ರೈತರಿಗೆ ಹೋಲಿಕೆ ಮಾಡಿದ್ರೆ ತುಂಬಾನೇ ಡಿಫರೆಂಟ್, ಒಂದೂವರೆ ಎಕರೆ ಬರಡು ಭೂಮಿಯಂತಿದ್ದ ಭೂಮಿಯಲ್ಲಿ ಬಂಗಾರದಂತ ಗುಲಾಬಿ ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಗುಲಾಬಿ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಗುಲಾಬಿ ಹೂವಿಗೆ ಮನಸೋಲದವರೇ ಇಲ್ಲ. ಇದೇ ಗುಲಾಬಿ ಹೂವುಗಳಿಂದ ಇಲ್ಲೋರ್ವ ರೈತ ಲಕ್ಷ ಲಕ್ಷ ಆದಾಯ ಪಡೆಯುವ ಮೂಲಕ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಗುಲಾಬಿ ಬೆಳೆ ಬೆಳೆದ ರೈತ
ಗುಲಾಬಿ ಬೆಳೆ ಬೆಳೆದ ರೈತ

ಹೌದು, ಹೀಗೆ ಹೊಲದಲ್ಲಿ ಗುಲಾಬಿ ಹೂ ಬಿಡಿಸುತ್ತಿರುವ ಇವರ ಹೆಸರು ಹನುಮಂತ ರೆಡ್ಡಿ. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ದಿನ್ಸಿ (ಕೆ) ಗ್ರಾಮದ ನಿವಾಸಿಯಾದ ಇವರು, ಒಂದೂವರೆ ಎಕರೆ ಪ್ರದೇಶದಲ್ಲಿ ಬಿಜಲಿ, ಬುಲೆಟ್​ ಸೇರಿ ವಿವಿಧ ತಳಿಯ ಗುಲಾಬಿ ಹೂವುಗಳನ್ನು ಬೆಳೆದಿದ್ದಾರೆ. ಸದ್ಯ ಹೆಚ್ಚಿನದಾಗಿ ಹೂವುಗಳು ಅರಳಿ ನಿಂತಿದ್ದು, ಕಲಬುರಗಿ ಸೇರಿ ಇತರೆ ಮಾರ್ಕೆಟ್​ಗಳಿಗೆ 100ರಿಂದ 120 ರೂಪಾಯಿಗೆ ಕೆ.ಜಿಯಂತೆ ಮಾರಾಟ ಮಾಡಿ, ನಿತ್ಯ ಸರಾಸರಿ 2 ರಿಂದ ಎರಡೂವರೆ ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ‌.

ರೈತ ಹನುಮಂತ ತಮ್ಮ ಕೃಷಿ ಬಗ್ಗೆ ಮಾಹಿತಿ ಹಂಚಿಕೊಂಡರು.

ಪರ್ಯಾಯ ಉದ್ಯೋಗದ ಯೋಚನೆ: ಹತ್ತನೇ ತರಗತಿವರೆಗೆ ಓದಿದ ಹನುಮಂತ ರೆಡ್ಡಿ ಅವರು ಈ ಮುಂಚೆ ಚಾಲಕ ವೃತ್ತಿಯಲ್ಲಿದ್ದರು‌. ಖಾಸಗಿ ವಾಹನ ಓಡಿಸಿ ಮನೆ ನಡೆಸೋದು ತುಂಬಾನೇ ಕಷ್ಟ ಆದಾಗ ಪರ್ಯಾಯ ಉದ್ಯೋಗದ ಯೋಚನೆಯಲ್ಲಿದ್ದರು. ಹೀಗಿರುವಾಗ ತಮ್ಮ ಸ್ನೇಹಿತ ಗುಲಾಬಿ ಕೃಷಿಯಲ್ಲಿ ಯಶಸ್ಸು ಸಾಧಿಸಿರೋದು ಗೊತ್ತಾಗಿ ತಾವು ಕೂಡಾ ಗುಲಾಬಿ ಬೆಳೆಯಲು ಮುಂದಾದರು.

ಗುಲಾಬಿ ಜೊತೆ ರೇಷ್ಮೆ ಬೆಳೆ: ನರೇಗಾ ಯೋಜನೆಯ ಸೌಲಭ್ಯ ಪಡೆದು ಗುಲಾಬಿ ಬೆಳೆಯುವ ಮೂಲಕ ಮುದುಡಿದ ತಮ್ಮ ಜೀವನ ಅರಳಿಸಿಕೊಂಡಿದ್ದಾರೆ. ಇನ್ನು ಹನುಮಂತ ಅವರು ಗುಲಾಬಿ ಜೊತೆಗೆ ಚೆಂಡು ಹೂವು ಬೆಳೆದಿದ್ದಾರೆ. ಅಲ್ಲದೆ ಮೂರು ಎಕರೆ ಪ್ರದೇಶದಲ್ಲಿ ರೇಷ್ಮೆ ಕೂಡಾ ಬೆಳೆದು ಆದಾಯ ದುಪ್ಪಟ್ಟು ಮಾಡಿಕೊಂಡಿದ್ದಾರೆ.

ಮಳೆಯಿಲ್ಲ, ಬೆಳೆಯಿಲ್ಲ ಎಂದು ವರ್ಷಪೂರ್ತಿ ಕಷ್ಟದ ದಿನಗಳನ್ನೇ ಎದುರಿಸುವ ರೈತರು ಹನುಮಂತ ಅವರಂತೆ ಬದಲಾವಣೆ ಕಂಡುಕೊಳ್ಳಬೇಕು. ಒಂದೇ ಬೆಳೆ ಬದಲಾಗಿ ತೋಟಗಾರಿಕಾ ಮಿಶ್ರ ಬೆಳೆ, ಗುಲಾಬಿಯಂತಹ ಲಾಭದಾಯಕ ಕೃಷಿಗೆ ಒತ್ತುಕೊಟ್ಟರೆ ರೈತರು ಕಷ್ಟದ ದಿನಗಳಿಂದ ಹೊರಬರಬಹುದು.

ಓದಿ: ಬದುಕು ಅರಳಿಸಿದ ಬಟನ್​ ರೋಸ್ ಕೃಷಿ​; ಮ್ಯಾದನೇರಿ ಸಹೋದರರಿಗೆ ಉದ್ಯೋಗ ಖಾತ್ರಿ ವರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.