ETV Bharat / state

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ, ಬಿಡುಗಡೆ

author img

By

Published : Jul 15, 2023, 2:16 PM IST

Updated : Jul 15, 2023, 3:01 PM IST

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ನ ಬಂಧನವಾಗಿದ್ದು, ಇದೀಗ ಸ್ಟೇಷನ್ ಬೇಲ್ ಮೂಲಕ ಚಿತ್ತಾಪುರ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​
ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​

ಕಲಬುರಗಿ: ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್, ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ನನ್ನು ಚಿತ್ತಾಪುರ ಪೊಲೀಸರು ಬಂಧಿಸಿ ಬಳಿಕ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ.

ಮಣಿಕಂಠ ರಾಠೋಡ ಚಿತ್ತಾಪುರ ಮೀಸಲು ಕ್ಷೇತ್ರದಿಂದ ಪ್ರಿಯಾಂಕ್ ಖರ್ಗೆ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿ. ಈತನ ವಿರುದ್ಧ ಚಿತ್ತಾಪುರ ಠಾಣೆಯಲ್ಲಿ ವಿರುದ್ಧ 504 (ಉದ್ದೇಶ ಪೂರ್ವಕ ಅವಮಾನ, ಯಾವುದೇ ವ್ಯಕ್ತಿಗೆ ಪ್ರಚೋದನೆ, ಸಾರ್ವಜನಿಕ ಶಾಂತಿ ಕದಡುವ) ಹಾಗೂ 506 (ಕ್ರಿಮಿನಲ್ ಬೆದರಿಕೆ ಅಪರಾಧ, ಜೀವ ಬೆದರಿಕೆ) ಸೇರಿ ಇನ್ನೊಂದು ಪ್ರಕರಣದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಈತನನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಖರ್ಗೆ ಕುಟುಂಬವನ್ನು ಸಾಫ್ (ಮುಗಿಸುವುದಾಗಿ) ಮಣಿಕಂಠ ಅವರದ್ದು ಎನ್ನಲಾದ ಆಡಿಯೋ ತೀವ್ರ ಸಂಚಲನ ಸೃಷ್ಟಿಸಿತ್ತು. ರಾಠೋಡ್‌ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಕೂಡಾ ಪಡೆದಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಚಿತ್ತಾಪುರ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಮಣಿಕಂಠ ರಾಠೋಡಗೆ ನೋಟಿಸ್ ನೀಡಿದ್ದಾರೆ.

ಈ ಹಿಂದೆ ಅಕ್ರಮ ಅಕ್ಕಿ ಸಾಗಾಟ ಪ್ರಕರಣದಲ್ಲಿ ಒಂದು ವರ್ಷಗಳ ಕಾಲ ಗಡಿಪಾರು ಮಾಡಿ ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿದ್ದ ಡಾ. ವೈ. ಎಸ್. ರವಿಕುಮಾರ ಆದೇಶ ಹೊರಡಿಸಿದ್ದರು. ಆದರೆ ಹೈಕೋರ್ಟ್‍ನಲ್ಲಿ ಮಣಿಕಂಠ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ಪಡೆದಿದ್ದಾರೆ.

ಸಾರಿಗೆ ಸಂಸ್ಥೆಯ ಚಾಲಕ ಕಮ್ ನಿರ್ವಾಹಕ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ: ಡಿಪೋ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕಮ್ ನಿರ್ವಾಹಕನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಲಬುರಗಿ ನಗರದ ಡಿಪೋ ನಂಬರ್ 2ರಲ್ಲಿ ನಡೆದಿದೆ.

ಚಾಲಕ ಕಮ್ ನಿರ್ವಾಹಕರಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಅಫಜಲಪುರ ತಾಲೂಕಿನ ಇಂಗಳಗಿ ಗ್ರಾಮದ ಬೀರಣ್ಣ ಇನ್ನೇನು ಬೆಂಕಿ ಹಚ್ಚಿಕೊಳ್ಳಲು ಯತ್ನಿಸುತ್ತಿರುವಾಗಲೇ ಅಲ್ಲಿದ್ದ ಸಹುದ್ಯೋಗಿಗಳು ಹಿಡಿದು ರಕ್ಷಣೆ ಮಾಡಿದ್ದಾರೆ. ಕಲಬುರಗಿಯಿಂದ ಅಫಜಲಪುರಕ್ಕೆ ಪ್ರತಿನಿತ್ಯ 8 ಟ್ರಿಪ್ ಸಿಂಗಲ್ ಹೋಗಿ ಬರಲು ಸೂಚನೆ ಇತ್ತು.

ಅದು ಆಗದೇ ಹೋದರೆ ಮರುದಿನ ಕೆಲಸ ಕೊಡದೇ ಡಿಪೋ ಮ್ಯಾನೇಜರ್ ಕಿರಿಕಿರಿ ಮಾಡುತ್ತಿದ್ದರು. ಇದರಿಂದ ಬೇಸತ್ತಿದ್ದೆ ಎಂದು ಬೀರಣ್ಣಾ ತಿಳಿಸಿದ್ದಾರೆ. ಮೊದಲೇ ನನಗೆ ತೆರೆದ ಹೃದಯದ ಶಸ್ತ್ರ ಚಿಕಿತ್ಸೆಯಾಗಿದೆ. ನಾನು ಚಾಲಕ ಮತ್ತು ನಿರ್ವಾಹಕನಾಗಿ 8 ಟ್ರಿಪ್ ಹೋಗಿ ಬರಲು ಸುಮಾರು ಹತ್ತು ತಾಸುಗಳ ಅವಧಿ ಬೇಕಾಗುತ್ತದೆ. ಅಲ್ಲದೇ ಒಬ್ಬನೇ ಎರಡೂ ಕೆಲಸಗಳನ್ನು ಮಾಡುವುದರಿಂದ ನನಗೂ ಒತ್ತಡ ಆಗುತ್ತಿದೆ. ಹೀಗಾಗಿ ಆರು ಟ್ರಿಪ್ ಮಾತ್ರ ಕೊಡಲು ಕೋರಿದರೂ ಸಹ ನನಗೆ 8 ಟ್ರಿಪ್ ಕೊಡಲಾಗುತ್ತಿತ್ತು. ಬೇಡ ಎಂದರೆ ಕಿರುಕುಳ ನೀಡಲಾಗುತ್ತಿತ್ತು. ಕೆಲಸಕ್ಕೆ ಹಾಜರಾಗಲು ಹೋದರೆ ಡಿಸಿಯವರ ಹತ್ತಿರ ಹೋಗು ಎಂದು ಹೇಳುತ್ತಿದ್ದರು ಎಂದು ಅವರು ದೂರಿದ್ದಾರೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲಾಧಿಕಾರಿ ಸಿದ್ದಪ್ಪ ಗಂಗಾಧರ್ ಅವರು ಭೇಟಿ ನೀಡಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಚಾಲಕರಿಗೆ ಹೆಚ್ಚುವರಿ ಶೆಡ್ಯೂಲ್ ಹಾಕಲಾಗಿದೆ. ಅದನ್ನು ಮಾಡುವುದಕ್ಕೆ ಆಗುವುದಿಲ್ಲ ಎನ್ನುತ್ತಿದ್ದರು.

ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳದ ಹಿನ್ನೆಲೆಯಲ್ಲಿ ಟ್ರಿಪ್ ಹೆಚ್ಚು ಮಾಡಲಾಗಿತ್ತು. ಇದರಿಂದ ಬೀರಣ್ಣ ಅವರು ಬೇಸತ್ತು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಸಾಮಾನ್ಯವಾಗಿ ಆರು ಟ್ರಿಪ್ ಇತ್ತು. ಈಗ 8 ಟ್ರಿಪ್ ಮಾಡಲಾಗಿದೆ. ಟ್ರಿಪ್ ಸಂಖ್ಯೆ ಹೆಚ್ಚಳ ಮಾಡಿದ್ದರಿಂದ ಎಲ್ಲರಿಗೂ ತೊಂದರೆಯಾಗಿದೆ ಎಂದು ಹೇಳಿದರು. ಹಿಂದಿನ ವರದಿ ತೆಗೆದು ನೋಡಿದಾಗ ನಮ್ಮ ಡಿಪೋ ಒಳ್ಳೆಯ ರೆಕಾರ್ಡ್ ಹೊಂದಿದೆ. ಹೊಸ ಬಸ್ ಹಾಗೂ ಸಿಬ್ಬಂದಿ ಬರಲಿದ್ದಾರೆ. ಆಗ ಟ್ರಿಪ್ ಲೋಡ್ ಕಡಿಮೆಯಾಗುತ್ತದೆ. ಅಲ್ಲಿಯವರೆಗೂ ಚಾಲಕ ಮತ್ತು ನಿರ್ವಾಹಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Bengaluru crime: ಮನೆಯಲ್ಲಿ ಗಂಡು, ರಸ್ತೆಯಲ್ಲಿ ಹೆಣ್ಣು.. ಐಷಾರಾಮಿ ಜೀವನಕ್ಕಾಗಿ ವೇಷ ಧರಿಸಿದ್ದ ಆರೋಪಿ ಅಂದರ್​

Last Updated : Jul 15, 2023, 3:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.