ETV Bharat / state

ಹರಕೆಯಂತೆ ಆರ್​​ಸಿಬಿಗೆ ಗೆಲುವು: ದೇವರಿಗೆ ದಂಡ ನಮಸ್ಕಾರ ಹಾಕಿ ಕಾಯಿ ಒಡೆದ ಯುವಕ

author img

By

Published : Apr 29, 2021, 10:03 AM IST

ಐಪಿಎಲ್ ಪಂದ್ಯಾವಳಿಯಲ್ಲಿ ಬೇರೆ ತಂಡಗಳಿಗೆ ಒಂದು ರೀತಿಯ ಅಭಿಮಾನಿಗಳಿದ್ದರೆ, ಆರ್​ಸಿಬಿ ಅಭಿಮಾನಿಗಳ ರೀತಿಯೇ ಬೇರೆ. ವಿವಿಧ ರೀತಿಯಲ್ಲಿ ಬೆಂಗಳೂರು ತಂಡದ ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವುದು ಸಾಮಾನ್ಯ. ಕಲಬುರಗಿಯಲ್ಲೂ ಅಪ್ಪಟ ಆರ್​ಸಿಬಿ ಅಭಿಮಾನಿಯೊಬ್ಬನಿದ್ದಾನೆ.

A young man prayed god for RCB Victory
ದೇವರಿಗೆ ದಂಡ ನಮಸ್ಕಾರ ಹಾಕಿ ಕಾಯಿ ಒಡೆದ ಯುವಕ

ಕಲಬುರಗಿ: ಐಪಿಎಲ್ ಪಂದ್ಯಾವಳಿಯ ತಂಡಗಳ ಪೈಕಿ ಬೆಂಗಳೂರು ರಾಯಲ್ ಚಾಲೆಂಜರ್ಸ್​​(ಆರ್​ಸಿಬಿ) ಗೆ ಇದ್ದಷ್ಟು ಅಭಿಮಾನಿಗಳು ಬಹುಶ: ಇನ್ಯಾವುದೇ ತಂಡಕ್ಕಿಲ್ಲ ಎಂದೇ ಹೇಳಬಹುದು. ತಂಡ ಸೋತರೂ ಗೆದ್ದರೂ ಅಭಿಮಾನಿಗಳು ಆರ್​ಸಿಬಿಯನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಇಂತಹ ಅಭಿಮಾನಿಗಳ ಪೈಕಿ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಖಜೂರಿ ಗ್ರಾಮದ ಆಕಾಶ್ ಕಟಕೆ ಕೂಡ ಒಬ್ಬ.

ಆಕಾಶ್​ ಕಟಕೆಗೆ ಕ್ರಿಕೆಟ್ ಆಡಲು ಬರುವುದಿಲ್ಲ. ಒಂದು ಕ್ರಿಕೆಟ್ ಟೀಂನಲ್ಲಿ ಎಷ್ಟು ಜನ ಆಟಗಾರರು ಇರ್ತಾರೆ ಎನ್ನುವುದು ಕೂಡ ಆತನಿಗೆ ಗೊತ್ತಿಲ್ಲ. ಆದರೆ ಈತ ಆರ್​ಸಿಬಿ ತಂಡದ ದೊಡ್ಡ ಅಭಿಮಾನಿ. 21 ವರ್ಷ ವಯಸ್ಸಿನ ಆಕಾಶ್​​ ಕಟಕೆ, ಓದಿದ್ದು 5ನೇ ತರಗತಿ. ಸದ್ಯ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನೆ.

ದೇವರಿಗೆ ದಂಡ ನಮಸ್ಕಾರ ಹಾಕಿ ಕಾಯಿ ಒಡೆದ ಯುವಕ

ಮಂಗಳವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ತಂಡಗಳ ನಡುವಿನ ಪಂದ್ಯ ರೋಚಕ ತಿರುವು ಪಡೆದಿತ್ತು. ಕೊನೆ ಗಳಿಗೆಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎನ್ನುವುದು ಕೂತೂಹಲ ಮೂಡಿಸಿತ್ತು. ಈ ಪಂದ್ಯವನ್ನು ಗೆಳೆಯರ ಜೊತೆ ವೀಕ್ಷಣೆ ಮಾಡುತ್ತಿದ್ದ ಆಕಾಶ್​​ಗೆ, ಎಲ್ಲರೂ ಆರ್‌ಸಿಬಿ ಸೋಲುತ್ತದೆ ಎಂದು ಮೊದಲಿಸಿದ್ದರಂತೆ. ಈ ವೇಳೆ ಗೆಳೆಯರ ಜೊತೆ ವಾದ ಮಾಡಿ ಆರ್‌ಸಿಬಿ ಗೆದ್ದರೆ ಖಜೂರಿಯ ಆರಾಧ್ಯದೈವ ಕೋರಣೇಶ್ವರ ದೇವರಿಗೆ ದಂಡ ನಮಸ್ಕಾರ ಹಾಕಿ, ತೆಂಗಿನ ಕಾಯಿ ಒಡೆಯುವುದಾಗಿ ಆಕಾಶ್​ ಸ್ನೇಹಿತರಿಗೆ ಸವಾಲ್ ಹಾಕಿದ್ದ. ಅದರಂತೆ, ಪಂದ್ಯ ಅಂತ್ಯಗೊಂಡಾಗ ಆರ್‌ಸಿಬಿ ತಂಡ ರೋಚಕ 1 ರನ್‌ನಿಂದ ಗೆದ್ದಿತ್ತು.

ತನ್ನ ನೆಚ್ಚಿನ ತಂಡ ಗೆದ್ದಿದ್ದರಿಂದ ಫುಲ್ ಖುಷ್ ಆದ ಆಕಾಶ್, ಹರಕೆಯಂತೆ ಗೆಳೆಯರ ಜೊತೆ ದೇವಸ್ಥಾನಕ್ಕೆ ಹೋಗಿ ದಂಡ ನಮಸ್ಕಾರ ಹಾಕಿ ತೆಂಗಿನ ಕಾಯಿ ಒಡೆದಿದ್ದಾನೆ. ಅಲ್ಲದೆ, ಈ ಬಾರಿ ಆರ್‌ಸಿಬಿ ತಂಡ ಕಪ್​ ಗೆಲ್ಲಲಿ ಎಂದು ದೇವರಲ್ಲಿ ಮೊರೆ ಇಟ್ಟಿದ್ದಾನೆ. ಆಕಾಶ್​ನ ಕ್ರಿಕೆಟ್​ ಅಭಿಮಾನಕ್ಕೆ ಗ್ರಾಮಸ್ಥರು ಭೇಷ್ ಅನ್ನುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.