ಹಾವೇರಿ: ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ರೂ ಪ್ರಕರಣ ದಾಖಲಿಸದ ಹಿನ್ನೆಲೆ ಶಿಗ್ಗಾಂವ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಹಾವೇರಿ ಎಸ್ಪಿ ಹನುಮಂತರಾಯ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಶಿಗ್ಗಾಂವ ಪೊಲೀಸ್ ಠಾಣೆಯ ಪಿಎಸ್ಐ ಕೆ.ಎನ್.ಹಳ್ಳಿಯವರ್, ಎಎಸ್ಐ ಆರ್.ಹೆಚ್.ಸಂಗೊಳ್ಳಿ ಮತ್ತು ಹೆಡ್ ಕಾನ್ಸ್ಟೇಬಲ್ ಎಂ.ಎಸ್.ಸೂರಗೊಂಡ ಅಮಾನತು ಮಾಡಿದ ಸಿಬ್ಬಂದಿ.
ಸೆಪ್ಟೆಂಬರ್ 10 ರಂದು ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಈ ಮೂವರು ಸಿಬ್ಬಂದಿ ದಾಳಿ ಮಾಡಿದ್ದರು. ಈ ವೇಳೆ ಸ್ಥಳದಲ್ಲಿ 8 ಲಕ್ಷ ರೂಪಾಯಿ,11 ಮೊಬೈಲ್ ಮತ್ತು ಆರು ಮೋಟಾರ್ ಸೈಕಲ್ ಜಪ್ತಿಮಾಡಿಕೊಂಡು ಹೋಗಿದ್ದರು. ಆದರೂ ಇಸ್ಪೀಟ್ ಆಡುವವರ ಮೇಲೆ ಯಾವುದೇ ದೂರು ದಾಖಲು ಮಾಡಿಕೊಂಡಿಲ್ಲ. ಈ ಹಿನ್ನೆಲೆ ಎಸ್ಪಿ ಹನುಮಂತರಾಯ, ಶಿಗ್ಗಾಂವ ಠಾಣೆಯ ಪಿಎಸ್ಐ ಮತ್ತು ಇಬ್ಬರು ಸಿಬ್ಬಂದಿ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ, ಅಮಾನತು ಆದೇಶ ಹೊರಡಿಸಿದ್ದಾರೆ.