ETV Bharat / state

ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಸರ್ವರ್​ ಪ್ರಾಬ್ಲಂ: ಸಮಸ್ಯೆ ಬಗೆಹರಿಸಲು ಕಾಲಾವಕಾಶ ಬೇಕೆಂದ ಸತೀಶ್ ಜಾರಕಿಹೊಳಿ

author img

By

Published : Jun 19, 2023, 10:15 AM IST

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಸರ್ವರ್​ ತೊಂದರೆಯಾಗಿರುವುದು ರಾಕೆಟ್​ ಬಿದ್ದಂತಹ ದೊಡ್ಡ ಸಮಸ್ಯೆಯೇನಲ್ಲ, ಸಮಸ್ಯೆ ಪರಿಹಾರವಾಗಲು ಎರಡ್ಮೂರು ತಿಂಗಳಾದರೂ ಕಾಯಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

satish jarkiholi
ಸತೀಶ್ ಜಾರಕಿಹೊಳಿ

ಹಾವೇರಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ

ಹಾವೇರಿ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ನಿನ್ನೆಯಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೆಲವೆಡೆ ಸರ್ವರ್ ಸಮಸ್ಯೆ ತಲೆದೋರಿದೆ. ಈ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

"ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಸರ್ವರ್​ ಸಮಸ್ಯೆ ಕಂಡುಬಂದರೆ ಸರಿಪಡಿಸಲು ಕಾಲಾವಕಾಶ ಬೇಕು. ಎಲ್ಲವನ್ನೂ ಒಮ್ಮೆಲೆ ಸರಿಪಡಿಸುತ್ತೇವೆ ಎಂದರೆ ಆಗದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 15 ದಿನ ಆಗಿದೆ. ತಾಂತ್ರಿಕ ತೊಂದರೆ ಇದ್ದೇ ಇರುತ್ತೆ, ಸಮಸ್ಯೆ ಪರಿಹಾರವಾಗಲು ಎರಡ್ಮೂರು ತಿಂಗಳಾದರೂ ಕಾಯಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಘೋಷಣೆ ಮಾಡಿಲ್ಲ, ಇಂದು ಸರ್ವರ್ ಸಿಗದವರು ನಾಳೆ ಹೋಗಿ ಅರ್ಜಿ ಹಾಕಬಹುದು" ಎಂದರು.

ಅಕ್ಕಿ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ಕೈಗೊಳ್ಳುವ ಕುರಿತು ಮಾತನಾಡಿ, ಸದ್ಯಕ್ಕೆ ಸಣ್ಣ ಪುಟ್ಟ ಸಮಸ್ಯೆಗಳಿವೆ. ಸದ್ಯದಲ್ಲಿಯೇ ಎಲ್ಲ ಬಗೆಹರಿಸುತ್ತೇವೆ. ಬಡವರಿಗೆ ಅಕ್ಕಿ ವಿತರಿಸುವ ಕೆಲಸವನ್ನು ನಾವು ಖಂಡಿತಾ ಮಾಡುತ್ತೇವೆ. ಬಿಜೆಪಿಯವರು ಪ್ರತಿಭಟನೆ ನಡೆಸುತ್ತೇವೆ ಎಂಬುದಾಗಿ ಹೇಳುತ್ತಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಜನತೆಗೆ ಅಕ್ಕಿ ನೀಡುವುದು ಬಿಜೆಪಿಗೆ ಸಂಬಂಧಿಸಿದ ವಿಚಾರವಲ್ಲ. ಪ್ರತಿಭಟನೆ ಮಾಡಿದರೆ ಅಥವಾ ಲೋಕಸಭೆಯಲ್ಲಿ ಹೋರಾಟ ಮಾಡಿದ್ರೆ ಸಮಸ್ಯೆ ಬಗೆಹರಿಯುವುದಿಲ್ಲ. ನಮ್ಮ ಸರ್ಕಾರ ಈಗಾಗಲೇ ಹಲವು ರಾಜ್ಯಗಳ ಜೊತೆ ಮಾತುಕತೆ ನಡೆಸಿದೆ, ಕಾಲಾವಕಾಶ ಬೇಕು ಎಂದು ತಿಳಿಸಿದರು.

ಎಥೆನಾಲ್‌ಗೆ ಅಕ್ಕಿ ಹೆಚ್ಚು ಹೋಗುತ್ತಿದೆ. ಕೇಂದ್ರ ಸರ್ಕಾರ ಇದಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಜನರಿಗೆ ಊಟಕ್ಕೆ ಅಕ್ಕಿ ನೀಡುವುದನ್ನು ಬಿಟ್ಟು ಎಥೆನಾಲ್​ಗೆ ನೀಡುವುದು ಎಷ್ಟು ಸರಿ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಯಬೇಕು. ಹಾಗೆಯೇ, ಪ್ರತಿವರ್ಷವೂ ಕರೆಂಟ್ ಬಿಲ್ ಏರಿಕೆಯಾಗುಬುದು ಸಾಮಾನ್ಯ, ಬಿಜೆಪಿ ಸರ್ಕಾರ ಇದ್ದಾಗಲೇ ಕರೆಂಟ್ ಬಿಲ್ ಹೆಚ್ಚಾಗಿದೆ, ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿ ಆಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಅಲ್ಲ ಎಂಬ ವದಂತಿ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ಸಿಎಂ ಸಿದ್ದರಾಮಯ್ಯನವರೇ ಇರುತ್ತಾರೆ ಎಂಬುವದು ಪಕ್ಷದ ನಿರ್ಧಾರ. ಸಿಎಂ ಸ್ಥಾನ ಅರ್ಧಕ್ಕೆ ಅಂತ ಯಾರೂ ಹೇಳಿಲ್ಲ. ಅದ್ದರಿಂದ, ಅವರೇ ಮುಂದುವರೆಯುತ್ತಾರೆ ಎನ್ನುವ ವಿಶ್ವಾಸ ಇದೆ. ಅದು ಪಕ್ಷದ ಹೈಕಮಾಂಡ್​ಗೆ ಬಿಟ್ಟ ವಿಚಾರ ಎಂದರು. ಈ ಅವಧಿ ಹೊರತು ಪಡಿಸಿ ಮುಂದಿನ ಅವಧಿಗೆ ಸಿಎಂ ಹುದ್ದೆಗೆ ನಾನು ಅರ್ಜಿ ಹಾಕುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ : Congress Guarantee: ಗೃಹ ಜ್ಯೋತಿಗೆ ಅರ್ಜಿ ಸಲ್ಲಿಕೆ : ಕೈಕೊಟ್ಟ ಸೇವಾ ಸಿಂಧು ಪೋರ್ಟಲ್

ಇನ್ನು ಜುಲೈ 1 ರಿಂದ ಗೃಹ ಜ್ಯೋತಿ ಯೋಜನೆ ಜಾರಿ ಆಗಲಿದೆ. ಈ ಯೋಜನೆಯ ಲಾಭ ಪಡೆದುಕೊಳ್ಳಲು ನಿನ್ನೆಯಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೆಸ್ಕಾಂ ಕಚೇರಿ ಹಾಗೂ ನಾಡ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಸೂಚನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.