ಹಾವೇರಿಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಮುಕ್ತಾಯ.. ನಿಯಮ ಪಾಲಿಸುವಂತೆ ವಾಹನ ಸವಾರರಿಗೆ ಸೂಚನೆ

author img

By

Published : Feb 25, 2023, 9:49 PM IST

ರಸ್ತೆ ಸುರಕ್ಷತಾ ಅಭಿಯಾನ

ಪೊಲೀಸ್​ ಇಲಾಖೆಯಿಂದ ರಸ್ತೆ ಸುರಕ್ಷತಾ ಅಭಿಯಾನ - ಸವಾರರಿಗೆ ಸಂಚಾರ ನಿಯಮದ ಬಗ್ಗೆ ಜಾಗೃತಿ - ಇನ್ಮುಂದೆ ಸಂಚಾರ ನಿಯಮ ಪಾಲಿಸದಿದ್ದರೆ ಕ್ರಮ - ಎಸ್ಪಿ ಎಚ್ಚರಿಕೆ

ಹಾವೇರಿ: ಜಿಲ್ಲೆಯ ಪೊಲೀಸ್​ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಅಭಿಯಾನ ಇಂದು ಮುಕ್ತಾಯಗೊಂಡಿದೆ. ದಿನಾಂಕ 20-02-2023 ರಿಂದ ಅಭಿಯಾನ ಆರಂಭವಾಗಿತ್ತು. ಅಭಿಯಾನದಲ್ಲಿ ಜಿಲ್ಲೆಗೆ ಸಂಪರ್ಕಿಸುವ ರಸ್ತೆಗಳಲ್ಲಿ ಪೊಲೀಸ್ ತಾತ್ಕಾಲಿಕ ಟೆಂಟ್ ಹಾಕಿ ವಾಹನ ಸವಾರರು ತಪಾಸಣೆ ನಡೆಸಿದರು. ದ್ವಿಚಕ್ರ ವಾಹನ ಸವಾರರ ವಾಹನದ ನೋಂದಣಿ, ಲೈಸೆನ್ಸ್, ಇನ್ಸುರೆನ್ಸ್ ಮತ್ತು ಹೆಲ್ಮೆಟ್ ಸೇರಿದಂತೆ ವಿವಿಧ ದಾಖಲಾತಿಗಳ ಪರಿಶೀಲನೆ ನಡೆಸಲಾಯಿತು. ಕಾರಿನಲ್ಲಿ ಪ್ರಯಾಣಿಸುವವರಿಗೆ ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಿ ಸಂಚರಿಸುವಂತೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ದಾಖಲಾತಿಗಳು ಇಲ್ಲದ ವಾಹನ ಸವಾರರಿಗೆ ದಾಖಲಾತಿಗಳ ಅವಶ್ಯಕತೆ ಬಗ್ಗೆ ತಿಳಿಸಲಾಯಿತು. ಅಲ್ಲದೆ ಜಾಗೃತಿ ಕರಪತ್ರಗಳನ್ನು ನೀಡಿ ಸವಾರರಿಗೆ ಜಾಗೃತಿ ಮೂಡಿಸಲಾಯಿತು. ಆಟೋ ಚಾಲಕರಿಗೆ ವಾಹನ ತಪಾಸಣೆ ಸಮರ್ಪಕ ಜಾಗವಿಲ್ಲದೆ ಸಂಚರಿಸದಂತೆ ತಾಕೀತು ಮಾಡಲಾಯಿತು. ಪ್ರತಿಯೊಬ್ಬರು ರಸ್ತೆ ನಿಯಮ ಪಾಲಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ತಿಳಿಸಲಾಯಿತು. ನಗರ ರಸ್ತೆಗಳಲ್ಲಿ ಸಂಚರಿಸುವಾಗ ಓವರಟೇಕ್ ಮಾಡಬಾರದು ಎಂದು ಪೊಲೀಸ್ ಸಿಬ್ಬಂದಿ ನಾಗರಿಕರಿಗೆ ತಿಳಿ ಹೇಳಿದರು. ಕಡ್ಡಾಯವಾಗಿ ಎಡಗಡೆ ಬದಿಯಲ್ಲಿ ಸಂಚಾರ ಮಾಡಬೇಕು. ಏಕಪಥ ಸಂಚಾರದಲ್ಲಿ ಏಕಪಥದಲ್ಲಿ ಸಂಚರಿಸಬೇಕು ಇದರಿಂದ ಸಾಕಷ್ಟು ಅಪಘಾತಗಳು ತಡೆಯಬಹುದು. ನಾಗರಿಕರು ಆದಷ್ಟು ರಸ್ತೆ ನಿಯಮ ಪಾಲಿಸಿದರೆ ಹೆಚ್ಚಿನ ಸಾವು ನೋವು ತಡೆಗಟ್ಟಬಹುದು ಎಂದು ಜನರಿಗೆ ಮನವರಿಕೆ ಮಾಡಿದರು.

ಈ ಬಗ್ಗೆ ಎಸ್ಪಿ ಶಿವಕುಮಾರ್ ಗುಣಾರೆ ಮಾತನಾಡಿ, ಪೊಲೀಸ್​ ಇಲಾಖೆ ವತಿಯಿಂದ ನಡೆದ ಈ ಅಭಿಯಾನದಲ್ಲಿ ವಾಹನ ಸವಾರಿಗೆ ಜಾಗೃತಿ ಮೂಡಿಸಲಾಗಿದೆ. ಸಂಚಾರ ನಿಯಮವನ್ನು ಪಾಲನೆ ಮಾಡದೇ ಇದ್ದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದ ಕಾರಣ ಸಾರ್ವಜನಿಕರು ರಸ್ತೆ ನಿಯಮಗಳನ್ನು ಪಾಲಿಸಿ ಪೊಲೀಸರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಬಳಿಕ ಶಾಸಕ ನೆಹರು ಓಲೇಕಾರ್ ಮಾತನಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನ ನಡೆಸಲಾಗಿದೆ. ಪ್ರತಿಯೊಬ್ಬರು ಸಂಚಾರ ನಿಯಮವನ್ನು ಪಾಲನೆ ಮಾಡಬೇಕು. ಸಂಚಾರಿ ನಿಯಮ ಪಾಲಿಸಿದ್ದೆ ಆದಲ್ಲಿ ಯಾವುದೇ ಅನಾಹುತಗಳು ಆಗುವುದಿಲ್ಲ ಎಂದು ಸಲಹೆ ನೀಡಿದರು.

ಕಾರು ಪಲ್ಟಿಯಾಗಿ ಇಬ್ಬರ ಸಾವು: ಕಾರು ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದು, ಎರಡು ವರ್ಷದ ಮಗು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಚೇತನಾ (35), ದುಂಡೆಪ್ಪ (60) ಮೃತರು ಎಂದು ಗುರುತಿಸಲಾಗಿದೆ. ಇನ್ನು, ಗಾಯಾಳುಗಳನ್ನ ಹಾವೇರಿ ಜಿಲ್ಲಾಸ್ಪತ್ರೆ ಮತ್ತು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಧಾರವಾಡ ಜಿಲ್ಲೆಯ ಮೂಲದವರು ಎನ್ನಲಾಗಿದ್ದು, ಮಲೇಬೆನ್ನೂರಿನ ವೀರಭದ್ರೇಶ್ವರ ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕಾಗಮಿಸಿದ ಹಾವೇರಿ ಪೊಲೀಸರು ಪರಿಶೀಲನೆ ನಡೆಸಿದರು. ಹಾವೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.