ರಾಣೆಬೆನ್ನೂರ: ನೆರೆ ಪರಿಹಾರ ವಿತರಣೆಯಲ್ಲಿ ವಿಶೇಷಚೇತನ ಫಲಾನುಭವಿಗೆ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಎಂದು ತಾಪಂ ಸದಸ್ಯ ರೂಪ್ಲೆಪ್ಪ ಲಮಾಣಿ ತಹಶೀಲ್ದಾರ್ ವಿರುದ್ಧ ಆರೋಪ ಮಾಡಿದರು.
ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಗೆ ವಿಶೇಷಚೇತನ ಫಲಾನುಭವಿಯನ್ನು ಕರೆಸಿಕೊಂಡು ಅವರ ಸ್ಥಿತಿಯನ್ನು ಎಲ್ಲಾ ಅಧಿಕಾರಿಗಳಿಗೆ ತೋರಿಸಿದರು. ತಾಲೂಕಿನ ಕಾಕೋಳ ತಾಂಡದ ಕಮಲವ್ವ ಲಮಾಣಿ ಎಂಬ ವಿಶೇಷಚೇತನ ಮಹಿಳೆಯ ಮನೆ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಸರಿಯಾದ ವರದಿ ಸಲ್ಲಿಸದೆ ಅನ್ಯಾಯ ಮಾಡಿದ್ದಾರೆ.
ತಹಶೀಲ್ದಾರರಿಗೂ ಹಿಂದಿನ ಸಭೆಯಲ್ಲಿ ಈ ಫಲಾನುಭವಿಗೆ ಅನ್ಯಾಯವಾಗಿರುವ ಬಗ್ಗೆ ಮನವರಿಕೆ ಮಾಡಲಾಗಿತ್ತು. ಆದರೆ ಅವರಿಂದ ಯಾವುದೇ ರೀತಿಯ ಸಕಾರಾತ್ಮಕ ಪರಿಹಾರ ದೊರೆತಿಲ್ಲ. ಅವರು ಈ ಸಭೆಗೆ ಆಗಮಿಸಿ ಸೌಲಭ್ಯ ವಂಚಿತ ಫಲಾನುಭವಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ಕೂಡ ಧ್ವನಿಗೂಡಿಸಿ ತಹಶೀಲ್ದಾರ್ ಬರಬೇಕು ಎಂದು ಪಟ್ಟು ಹಿಡಿದರು.
ನಂತರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಕಾಂಬಳೆ ಸಭೆಯಲ್ಲಿ ತಹಶೀಲ್ದಾರ್ಗೆ ಫೋನ್ ಮಾಡಿ ವಾಸ್ತವ ಮನವರಿಕೆ ಮಾಡಿದರು. ಆದರೆ ತಹಶೀಲ್ದಾರ್ ಬಸನಗೌಡ ಕೊಟೂರ ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೆರೆ ಪರಿಹಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ವಂಚಿತ ಫಲಾನುಭವಿಗೆ ಪರಿಹಾರ ನೀಡುವಂತೆ ಶ್ರಮ ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.