ETV Bharat / state

ನಾಗನೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಬಸವರಾಜ್ ಶಿವಣ್ಣನವರ್

author img

By

Published : Jul 27, 2023, 8:33 PM IST

ಸಿಎಂ ಸಿದ್ದರಾಮಯ್ಯ ಅವರು ನಾಗನೂರು ಗ್ರಾಮವನ್ನು ಸ್ಥಳಾಂತರಕ್ಕೆ ಆದೇಶಿಸಿದ್ದಾರೆ. ಈ ಹಿನ್ನೆಲೆ ಇಂದು ಹಾವೇರಿ ಜಿಲ್ಲಾಧಿಕಾರಿ ರಘನಂದನಮೂರ್ತಿ ಮತ್ತು ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ್ ಶಿವಣ್ಣನವರ್​ ಗ್ರಾಮದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ್ ಶಿವಣ್ಣನವರ್
ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ್ ಶಿವಣ್ಣನವರ್

ಹಾವೇರಿ ಜಿಲ್ಲಾಧಿಕಾರಿ ರಘನಂದನಮೂರ್ತಿ

ಹಾವೇರಿ : ತಾಲೂಕಿನ ನಾಗನೂರು ಗ್ರಾಮಸ್ಥರಿಗೆ ಮಳೆಗಾಲ ಬಂದರೆ ಸಾಕು ಆತಂಕ ಶುರುವಾಗುತ್ತೆ. ಇದಕ್ಕೆ ಕಾರಣ ಗ್ರಾಮದ ಪಕ್ಕ ಹಾದು ಹೋಗಿರುವ ವರದಾ ನದಿ. ವರದಾ ನದಿ ಮಳೆಗಾಲದಲ್ಲಿ ಮೈದುಂಬಿಕೊಳ್ಳುತ್ತಾಳೆ. ಮಳೆಗಾಲದಲ್ಲಿ ಗ್ರಾಮದ ಸುಮಾರು 150 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಲಾರಂಭಿಸುತ್ತದೆ. ಹಲವು ದಶಕಗಳಿಂದ ಗ್ರಾಮದಲ್ಲಿ ಈ ಸಮಸ್ಯೆ ಇದೆ. ಮಳೆಗಾಲದಲ್ಲಿ ಗಂಜಿಕೇಂದ್ರಗಳಿಗೆ ತೆರಳುವ ಗ್ರಾಮಸ್ಥರು ವರದಾ ಆರ್ಭಟ ಕಡಿಮೆಯಾದಂತೆ ಮತ್ತೆ ತಮ್ಮ ಮನೆಗಳಿಗೆ ಧಾವಿಸುತ್ತಾರೆ.

1960 ರಿಂದ ನಾಗನೂರು ಗ್ರಾಮದ ಸ್ಥಳಾಂತರ ನಡೆಯುತ್ತಲೆ ಇದೆ. ಅಂದು ಗ್ರಾಮದ ಹೊರವಲಯದಲ್ಲಿ ಪ್ಲಾಟ್ ನಿರ್ಮಾಣವಾಗಿದ್ದು, ಸಂಪೂರ್ಣ ಗ್ರಾಮ ಸ್ಥಳಾಂತರವಾಗಿಲ್ಲ. ಈ ವರ್ಷ ಸಹ ಗ್ರಾಮ ವರದಿಯ ಆಪೋಶನಕ್ಕೆ ಒಳಗಾಗಿದೆ. ಮಂಗಳವಾರ ಜಿಲ್ಲೆಯ ಪ್ರಗತಿಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ ನಾಗನೂರು ಗ್ರಾಮವನ್ನ ಸ್ಥಳಾಂತರಕ್ಕೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಮತ್ತು ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ್ ಶಿವಣ್ಣನವರ್ ಗ್ರಾಮದಲ್ಲಿ ಪರಿಶೀಲನೆ ನಡೆಸಿದರು.

ಸಂಪೂರ್ಣ ಗ್ರಾಮ ಸ್ಥಳಾಂತರವಾಗಿಲ್ಲ: ಗ್ರಾಮ ನೆರೆಗೆ ಈಡಾಗುವ ಮನೆಗಳಿಗೆ ತೆರಳಿ ನಿವಾಸಿಗಳ ಅಳಲು ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ತಮಗೆ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು. ಪ್ರತಿವರ್ಷ ಮಳೆಗಾಲ ಬಂದರೆ ಕೈಯಲ್ಲಿ ಜೀವ ಹಿಡಿದು ಜೀವನ ಸಾಗಿಸಬೇಕಾಗುತ್ತದೆ. ಈಗಲಾದರೂ ಶಾಶ್ವತ ಪರಿಹಾರ ಒದಗಿಸಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸವರಾಜ್ ಶಿವಣ್ಣನವರ್, ಪ್ರತಿಬಾರಿ ನೆರೆ ಬಂದಾಗ ಈ ಗ್ರಾಮದ 150 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗುತ್ತೆ. ಈ ಸಮಸ್ಯೆ ಹಲವು ದಶಕಗಳಿಂದ ಗ್ರಾಮದಲ್ಲಿದೆ. ಆದರೆ, ಗ್ರಾಮಸ್ಥರು ಮಳೆಗಾಲ ಬಂದಾಗ ಸ್ಥಳಾಂತರದ ಬಗ್ಗೆ ಮಾತನಾಡುತ್ತಾರೆ. ಮತ್ತೆ ಯಥಾಸ್ಥಿತಿ ಜೀವನ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಗ್ರಾಮ ಸ್ಥಳಾಂತರವಾಗಿಲ್ಲ ಎಂದು ತಿಳಿಸಿದರು.

ಈ ಬಾರಿ ಮಾತ್ರ ಹಳೆಯ ಮನೆಗಳನ್ನ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತೆ. ಇಲ್ಲಿಯ ಮನೆಗಳನ್ನ ಸಂಪೂರ್ಣ ಖಾಲಿ ಮಾಡಿಸಿ ಬೇರೆ ಕಡೆ ನಿವೇಶನ ನೀಡಲಾಗುತ್ತದೆ ಎಂದು ತಿಳಿಸಿದರು. ಗ್ರಾಮದಲ್ಲಿ ಈಗಾಗಲೇ ಪ್ಲಾಟ್ ನಿರ್ಮಾಣವಾಗಿದ್ದು, ಅದರ ಪಕ್ಕದಲ್ಲಿ ಗ್ರಾಮದ ರೈತರೊಬ್ಬರು 10 ಎಕರೆ ಜಮೀನು ನೀಡಲು ಮುಂದಾಗಿದ್ದಾರೆ. ಈ ಜಮೀನಿನಲ್ಲಿ ಗ್ರಾಮದ ನೆರೆ ಸಂತ್ರಸ್ಥರಿಗೆ ನಿವೇಶನ ನೀಡುವ ಯೋಚನೆ ಇದೆ ಎಂದು ಬಸವರಾಜ್ ಶಿವಣ್ಣನವರ್ ತಿಳಿಸಿದರು.

ಮನೆಗಳನ್ನ ಸಹ ಕಟ್ಟಿಸಿಕೊಡಲಾಗುವುದು: 2019 ರಲ್ಲಿ 2021 ಮತ್ತು 22ರಲ್ಲಿ ಸಹ ಗ್ರಾಮಕ್ಕೆ ನೀರು ನುಗ್ಗಿತ್ತು. ಅಂದು ಸಿಎಂ ಆಗಿದ್ದ ಬಿ. ಎಸ್ ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಗ್ರಾಮ ಸ್ಥಳಾಂತರ ಮಾಡುವ ಭರವಸೆ ನೀಡಿದ್ದರು. ಆದರೆ ಮಾಡಿರಲಿಲ್ಲಾ. ಆದರೆ ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದಲ್ಲದೇ ಖುದ್ದಾಗಿ ಹೋಗಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಒಂದು ವೇಳೆ ಯಾವುದಾದರೂ ಕಂಪನಿಗಳು ಮುಂದೆ ಬಂದರೆ ನಿವೇಶನಗಳನ್ನಷ್ಟೇ ಅಲ್ಲದೆ ಮನೆಗಳನ್ನ ಸಹ ಕಟ್ಟಿಸಿಕೊಡುವುದಾಗಿ ಶಿವಣ್ಣನವರ್ ತಿಳಿಸಿದರು.

ಇದನ್ನೂ ಓದಿ: ಪಿಡಿಒ ವರ್ಗಾವಣೆ ಸಂಬಂಧ ರೇವಣ್ಣ ಬಳಿ ಯಾವ ಪೆನ್ ಡ್ರೈವ್ ಇದೆ ಕೊಡಲಿ: ಸಚಿವ ಪ್ರಿಯಾಂಕ್ ಖರ್ಗೆ ಸವಾಲು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.