ಹಾವೇರಿ: ಕೇಂದ್ರ ಸರ್ಕಾರ ಜಿಎಸ್ಟಿ ನೀಡದಿದ್ದರೆ ರಾಜ್ಯದ ಜನ ಮಣ್ಣು ತಿನ್ನಬೇಕಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಿದ್ದರೆ ಮಣ್ಣು ತಿನ್ನಬೇಕಾಗುತ್ತಿತ್ತೇನೂ, ಆದರೆ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಸರ್ಕಾರವಿದೆ ಯಾರೂ ಮಣ್ಣು ತಿನ್ನಬೇಕಾಗಿಲ್ಲ ಎಂದು ತಿಳಿಸಿದರು. ಸಿದ್ದರಾಮಯ್ಯ ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ, ಆರ್ಥಿಕ ತಿಳುವಳಿಕೆ ಇದ್ದವರು. ರಾಜ್ಯದಲ್ಲಿ 13 ಬಾರಿ ಬಜೆಟ್ ಮಂಡಿಸಿದವರು. ಇಂಥವರು ಜಿಎಸ್ಟಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಬೊಮ್ಮಾಯಿ ತಿಳಿಸಿದರು.
ಜಿಎಸ್ಟಿ ಕುರಿತಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಜೊತೆ ಚರ್ಚಿಸಿದೆ. ರಾಜ್ಯದ ಪಾಲು ಸೇರಿದಂತೆ ಸೆಸ್ ಸಹ ರಾಜ್ಯಗಳಿಗೆ ನೀಡಲಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು. ಕೇಂದ್ರ ಸರ್ಕಾರ ಜಿಎಸ್ಟಿ ವಿಚಾರದಲ್ಲಿ ರಾಜ್ಯಗಳಿಗೆ ಭಾರವಾಗದಂತೆ ಕ್ರಮ ವಹಿಸಿದೆ ಎಂದು ತಿಳಿಸಿದರು.
ಇದೇ ವೇಳೆ ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ವಿಚಾರವಾಗಿ ಮಾತನಾಡಿದ ಅವರು, ಈ ಕುರಿತಂತೆ ಸಭೆ ನಡೆಸಿ ಚಿತ್ರ ನಟ-ನಟಿಯರೇ ಆಗಿರಲಿ ಅಥವಾ ಯಾರೇ ಆಗಿರಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಗೂ ರಾಜ್ಯ ಸರ್ಕಾರ ಡ್ರಗ್ಸ್ ವಾರ್ ಆರಂಭಿಸಿದ್ದು, ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತೆಸೆಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.