ETV Bharat / state

ಮೂರು ತಾಲೂಕುಗಳು ಬರಪೀಡಿತ ಪಟ್ಟಿಯಿಂದ ಹೊರಗೆ.. ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ನೇತೃತ್ವದಲ್ಲಿ ಪ್ರತಿಭಟನೆ

author img

By ETV Bharat Karnataka Team

Published : Oct 8, 2023, 10:50 PM IST

Updated : Oct 9, 2023, 6:30 AM IST

ಸರ್ಕಾರ ಹಾವೇರಿ ಜಿಲ್ಲೆಯ ತಾಲೂಕುಗಳಲ್ಲಿ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ನೇತೃತ್ವದಲ್ಲಿ ಪ್ರತಿಭಟನೆ
ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ನೇತೃತ್ವದಲ್ಲಿ ಪ್ರತಿಭಟನೆ

ಹಾವೇರಿ : ರಾಜ್ಯ ಸರ್ಕಾರ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಐದು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಉಳಿದಂತೆ ಮೂರು ತಾಲೂಕುಗಳನ್ನು ಸರ್ಕಾರ ಬರಗಾಲಪೀಡಿತ ಎಂದು ಘೋಷಿಸಿಲ್ಲ. ರಾಣೆಬೆನ್ನೂರು, ಹಿರೇಕೆರೂರು, ಹಾವೇರಿ, ಸವಣೂರು ರಟ್ಟಿಹಳ್ಳಿ ತಾಲೂಕುಗಳು ಬರಗಾಲ ಪೀಡಿತವಾಗಿವೆ. ಉಳಿದಂತೆ ಬ್ಯಾಡಗಿ, ಹಾನಗಲ್ ಮತ್ತು ಶಿಗ್ಗಾಂವಿ ತಾಲೂಕುಗಳನ್ನು ಬರಗಾಲಪೀಡಿತ ಎಂದು ಘೋಷಣೆ ಮಾಡಿಲ್ಲ.ಇದರಿಂದ ಆಕ್ರೋಶಗೊಂಡು ಬ್ಯಾಡಗಿ, ಹಾನಗಲ್ ಮತ್ತು ಶಿಗ್ಗಾಂವಿ ತಾಲೂಕಿನ ರೈತರು ಇದೀಗ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ನೇತೃತ್ವದಲ್ಲಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಮೂರು ತಾಲೂಕುಗಳ ತಹಶೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಗಳಲ್ಲಿ ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನ ನಡೆಸುತ್ತಿದ್ದಾರೆ. ಅಲ್ಲದೆ ಪ್ರತಿಭಟನಾ ಸ್ಥಳದಲ್ಲಿಯೇ ಆಹಾರ ತಯಾರಿಸುತ್ತಿದ್ದಾರೆ. ಸರ್ಕಾರ ಮೂರು ತಾಲೂಕುಗಳನ್ನ ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿದೆ. ಈ ಮೂರು ತಾಲೂಕುಗಳನ್ನ ಬರಗಾಲಪೀಡಿತ ಎಂದು ಘೋಷಣೆ ಮಾಡುವವರೆಗೆ ನಾವು ಹೋರಾಟ ಹಿಂದೆ ಪಡೆಯುವದಿಲ್ಲ ಎಂದು ಪಟ್ಟುಹಿಡಿದಿವೆ.

ಕಳೆದ ತಿಂಗಳು 25 ರಂದು ಹಾವೇರಿಗೆ ಬಂದಿದ್ದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ರೈತರಿಗೆ ಈ ಮೂರು ತಾಲೂಕುಗಳನ್ನ ಸಹ ಬರಗಾಲಪೀಡಿತ ಎಂದು ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಅಲ್ಲದೆ ಪ್ರತಿಶತ 25 ರಷ್ಟು ಮಧ್ಯಂತರ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ ಸಚಿವರು ಹೇಳಿ ಹೋಗಿ 10 ದಿನಗಳಾದರೂ ಈ ಮೂರು ತಾಲೂಕುಗಳನ್ನು ಬರಗಾಲಪೀಡಿತ ಎಂದು ಘೋಷಣೆ ಮಾಡಿಲ್ಲ. ಅಲ್ಲದೆ ಮಧ್ಯಂತರ ಪರಿಹಾರ ಸಹ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕನೆ ತಾರೀಖಿನವರೆಗೆ ಸಚಿವರು ಭರವಸೆ ಈಡೇರಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ನೀಡಿದ್ದ ಭರವಸೆ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಮೂರು ತಾಲೂಕುಗಳಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಸುಮಾರು 3 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದರಿಂದ ಕೆಲವು ರೈತರು ಎರಡನೆಯ ಬಾರಿ ಬಿತ್ತನೆ ಮಾಡಿದ್ದರು. ಮತ್ತೆ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೆಲ ರೈತರು ಮರು ಬಿತ್ತನೆ ಮಾಡಿದ್ದರು. ಆದರೆ ಜುಲೈನಲ್ಲಿ ಸುರಿದ ಮಳೆರಾಯ ಮತ್ತೆ ಈ ಕಡೆ ಮುಖಮಾಡಲಿಲ್ಲ. ಪರಿಣಾಮ ಸಾವಿರಾರು ರೈತರು ಬೆಳೆಗಳನ್ನ ಹರಗಿದ್ದರು. ಅಲ್ಲದೆ ಜಿಲ್ಲೆಯನ್ನ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವಂತೆ ಒತ್ತಾಯಿಸಿದ್ದರು. ಆದರೆ ಸರ್ಕಾರ ಕೇವಲ ಐದು ತಾಲೂಕುಗಳನ್ನ ಬರಗಾಲಪೀಡಿತ ಘೋಷಣೆ ಮಾಡಿದೆ.

ಅಂದರೆ ಸುಮಾರು ಒಂದು ಲಕ್ಷ 66 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾಳಾಗಿದ್ದು, ಸುಮಾರು 1063 ಕೋಟಿ ರೂಪಾಯಿ ನಷ್ಟವಾಗಿದೆ. ಸರ್ಕಾರದ ಪರಿಹಾರ ಸಹ ಕಡಿಮೆ ನೀಡುತ್ತಿದ್ದು, ಸರಿಯಾದ ವೇಳೆಗೆ ಸಿಕ್ಕರೆ ರೈತರಿಗೆ ಅನುಕೂಲವಾಗುತ್ತೆ. ಕೊನೆಯ ಪಕ್ಷ ಹಿಂಗಾರು ಬಿತ್ತನೆಗಾದ್ರು ಹಣ ಸಿಕ್ಕರೆ ಉತ್ತಮ ಎನ್ನುತ್ತಿದ್ದಾರೆ ಹಾವೇರಿ ರೈತರು.

ಈ ಮಧ್ಯೆ ಕೇಂದ್ರ ಬರ ಅಧ್ಯಯನ ತಂಡಗಳ ಮೊದಲ ಭೇಟಿಯಲ್ಲಿ ಸಹ ಹಾವೇರಿ ಜಿಲ್ಲೆ ಆಯ್ಕೆ ಮಾಡದಿರುವುದು ರೈತರನ್ನು ಕೆರಳಿಸಿದೆ. ಸರ್ಕಾರ ಜಿಲ್ಲೆಯ ತಾಲೂಕುಗಳಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಇಷ್ಟೆಲ್ಲ ಪ್ರತಿಭಟನೆ ನಡೆಸಿದರೂ ಸಹ ಯಾವ ಅಧಿಕಾರಿಗಳು ತಮ್ಮ ಸಮಸ್ಯೆ ಕೇಳಲು ಆಗಮಿಸದಿರುವುದು ವಿಪರ್ಯಾಸ.

ಇದನ್ನೂ ಓದಿ : ಹಸಿರು, ಬರದ ಬಗ್ಗೆ ವಿಶೇಷ ಗಮನ ಹರಿಸಿ, ರೈತರ ಹಿತ ಕಾಪಾಡಿ: ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಿಎಂ ಮನವಿ

Last Updated : Oct 9, 2023, 6:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.