ETV Bharat / state

ಹಾವೇರಿ: ಸಾವಯವ ಕೃಷಿ ಯುವ ಸಲಹೆಗಾರನಿಗೆ ₹5 ಲಕ್ಷ ಮೌಲ್ಯದ ಕಾರು ಗಿಫ್ಟ್​ ನೀಡಿದ ರೈತ

author img

By ETV Bharat Karnataka Team

Published : Oct 5, 2023, 11:16 AM IST

Updated : Oct 6, 2023, 12:49 PM IST

ಸಾವಯವ ಕೃಷಿ ಸಲಹೆಗಾರನಿಗೆ ಹಾವೇರಿ ರೈತನೊಬ್ಬ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಕೃಷಿಗೆ ಸಲಹೆಗಾರನಿಗೆ ಕಾರು ಗಿಫ್ಟ್​ ನೀಡಿದ ರೈತ
ಕೃಷಿಗೆ ಸಲಹೆಗಾರನಿಗೆ ಕಾರು ಗಿಫ್ಟ್​ ನೀಡಿದ ರೈತ

ಕೃಷಿ ಯುವ ಸಲಹೆಗಾರನಿಗೆ ಕಾರು ಗಿಫ್ಟ್​ ನೀಡಿದ ರೈತ

ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದ ಶೇಖರಗೌಡ ಪಾಟೀಲ್ ಎಂಬ ರೈತರೊಬ್ಬರು, ತಮಗೆ ಸಾವಯುವ ಬೇಸಾಯದ ಬಗ್ಗೆ ಸಲಹೆ ಸಹಕಾರ ನೀಡಿದ ಯುವ ಸಲಹೆಗಾರ ಗಂಗಯ್ಯ ಕುಲಕರ್ಣಿ ಎಂಬುವವರಿಗೆ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಶೇಖರಗೌಡ ಪಾಟೀಲ್ 20 ವರ್ಷಗಳ ಹಿಂದೆ ಆಧುನಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅಧಿಕ ಕ್ರೀಮಿನಾಶಕ, ಅಧಿಕ ರಸಾಯನಿಕ ಗೊಬ್ಬರ ಕಳೆನಾಶಕ ಸೇರಿದಂತೆ ವಿವಿಧ ರಸಾಯನಿಕಗಳ ಬಳಕೆಯಿಂದ ಜಮೀನು ಫಲವತ್ತತೆ ಕಳೆದುಕೊಳ್ಳಲಾರಂಭಿಸಿತು. ಇದರಿಂದ ಬೇಸತ್ತ ಶೇಖರಗೌಡ ಆತಂಕ್ಕೆ ಒಳಗಾಗಿದ್ದರು. ಈ ವೇಳೆ ಯುವ ಸಲಹೆಗಾರ ಗಂಗಯ್ಯ ಅವರ ನೆರವಿಗೆ ಧಾವಿಸಿದ್ದರು.

ಸಾವಯುವ ಕೃಷಿಯ ಮಹತ್ವ ಸೇರಿದಂತೆ ಅವರಿಗೆ ಬೇಕಾದ ಸಾವಯುವ ಉತ್ಪನ್ನಗಳನ್ನು ಪರಿಚಯಿಸಿದರು. ಪರಿಣಾಮ ವರ್ಷದಿಂದ ವರ್ಷಕ್ಕೆ ಶೇಖರಗೌಡ ಪಾಟೀಲ್ ಸಾವಯುವ ಕೃಷಿಯಲ್ಲಿ ಅಧಿಕ ಲಾಭಗಳಿಸಿದರು. ಅದಲ್ಲದೇ ಸಾವಯುವ ಕೃಷಿ ಬಗ್ಗೆ ಇತರ ರೈತರಿಗೂ ಸಹ ಸಲಹೆ ಸಹಕಾರ ನೀಡಿದರು. ಗಂಗಯ್ಯರ ಸಾವಯುವ ಕಾಳಜಿ ಶೇಖರಗೌಡ ಪಾಟೀಲ್ ಮನಗೆದ್ದಿದೆ. ಕೆಲ ವರ್ಷಗಳಿಂದ ಗಂಗಯ್ಯ ದ್ವಿಚಕ್ರವಾಹನದಲ್ಲಿ ಓಡಾಡುತ್ತಾ ರೈತರಿಗೆ ಸಲಹೆ ನೀಡುತ್ತಿದ್ದರು. ಗಂಗಯ್ಯಗೆ ಓಡಾಡಲು ಸರಿಯಾದ ವಾಹನವಿಲ್ಲದ್ದನ್ನು ಅರಿತ ಸಾವಯುವ ಕೃಷಿ ಶೇಖರಗೌಡ ಪಾಟೀಲ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈತ ಶೇಖರಗೌಡ ಪಾಟೀಲ್‌, ಇದರಿಂದ ಸಾವಯುವ ಕೃಷಿಗೆ ಹೆಚ್ಚು ಅನುಕೂಲವಾಗುತ್ತದೆ. ಅವರಿಗೆ ವಾಹನ ನೀಡಿದರೆ ಗಂಗಯ್ಯ ಸಾವಿರಾರು ರೈತರ ಬದುಕು ಹಸನು ಮಾಡುತ್ತಾರೆ. ಇದರಿಂದ ಜಿಲ್ಲೆಯಲ್ಲಿ ರಾಜ್ಯದಲ್ಲಿ ದೇಶದಲ್ಲಿ ಸಾವಯುವ ಕೃಷಿಯ ಮಹತ್ವ ತಿಳಿಯುತ್ತೆ ಎಂದು ಹೇಳಿದ್ದಾರೆ. ಶೇಖರಗೌಡ ಪಾಟೀಲ್ ನೀಡಿದ ಕಾರನ್ನು ಧನ್ಯತೆಯಿಂದ ಸ್ವೀಕರಿಸಿರುವ ಗಂಗಯ್ಯ ಶೇಖರಗೌಡ ಹೆಸರನ್ನು ತಮ್ಮ ಕಾರ್ ಮೇಲೆ ಹಾಕಿಸಿದ್ದಾರೆ.

ಈ ಕುರಿತು ಮಾತನಾಡಿದ ಗಂಗಯ್ಯ, ನಾನು ಕಳೆದ 20 ವರ್ಷಗಳಿಂದ ಸಾವಯುವ ಕೃಷಿ ಬಗ್ಗೆ ಸಲಹೆ ನೀಡುತ್ತಾ ಬಂದಿದ್ದೇನೆ. ಈ ರೀತಿಯ ಉಡುಗೊರೆ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಶೇಖರಗೌಡ ಪಾಟೀಲ್ ನನಗೆ ಕಾರು ಗಿಫ್ಟಾಗಿ ನೀಡಿದ್ದು ನನ್ನ ಜವಾಬ್ದಾರಿಯನ್ನ ಹೆಚ್ಚು ಮಾಡಿದೆ. ಇದರಿಂದ ರೈತರಿಗೆ ಸಾವಯುವ ರೈತರ ಬಗ್ಗೆ ಸಹಾಯ ಮಾಡುವ ತಮ್ಮ ಉತ್ಸುಕತೆ ಹೆಚ್ಚಾಗಿದೆ. ಕಾರು ಇರುವ ಕಾರಣ ರೈತರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ನೆರವಾಗುವೆ. ಪ್ರಸ್ತುತ ರಾಜ್ಯ ಸೇರಿದಂತೆ ಹಾವೇರಿ ಜಿಲ್ಲೆಯ ರೈತರು ಮಳೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ.

ಕಳೆದ ವರ್ಷ ಅತಿವೃಷ್ಠಿ ಈ ವರ್ಷ ಅನಾವೃಷ್ಠಿಯಿಂದ ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಹಾವೇರಿ ಜಿಲ್ಲೆಯ ರೈತರು ಸಾಲದ ಬೇಗುದಿಯಲ್ಲಿ ಬೇಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹ ಸಾವಯುವ ಕೃಷಿಕ ಸಾವಯುವ ಕೃಷಿ ನಂಬಿದರೆ ನಷ್ಟವಿಲ್ಲ ಎಂಬುವದನ್ನ ಸಾಬೀತು ಮಾಡಿದ್ದಾರೆ. ರೈತರು ರಸಾಯನಿಕ ಕೃಷಿಯಿಂದ ವಿಮುಕರಾಗಬೇಕು. ಸಾವಯುವ ಕೃಷಿಯತ್ತ ಮುಖ ಮಾಡಿದರೆ ರೈತರಿಗೆ ಎಂದಿಗೂ ನಷ್ಟವಿಲ್ಲ. ಲಾಭ ನಿಧಾನವಾಗಿ ಹೆಚ್ಚಾದರೂ ಸಹ ಲಾಭ ಖಾಯಂ ಆಗಿ ಬರಲಾರಂಭಿಸುತ್ತದೆ.

ರೈತರು ಯುವರೈತರು ಸಾವಯುವ ಕೃಷಿಯತ್ತ ಸಾಗಬೇಕಿದೆ. ಕಳೆದ ತಿಂಗಳು ಟೊಮೆಟೊ ಬೆಲೆ ಏರಿಕೆಯಾದಾಗ ಟೊಮೆಟೊ ಬೆಳೆದ ರೈತನ ಮಕ್ಕಳಿಗೆ ಕನ್ಯ ನೀಡಲು ರೈತರ ಸರತಿಯಲ್ಲಿ ನಿಂತಿದ್ದರಂತೆ. ಅದೇ ರೀತಿ ಯುವ ರೈತರು ಸಾವಯುವ ಕೃಷಿಯಲ್ಲಿ ತೊಡಗಿಕೊಂಡರೇ ರಾಜ್ಯದ ವಿವಿಧಡೆಯಿಂದ ಕನ್ಯೆ ನೀಡಲು ಕನ್ಯೆಮಾತಾಪಿತ್ರಗಳು ಸರತಿಯಲ್ಲಿ ನಿಲ್ಲುವದರಲ್ಲಿ ಸಂದೇಹವಿಲ್ಲ ಎಂದು ಗಂಗಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಮನೆ ಬಾಗಿಲಿಗೆ ಆರೋಗ್ಯ ಸೇವೆ, ಶೀಘ್ರದಲ್ಲಿ 'ಗೃಹ ಆರೋಗ್ಯ', 'ಆಶಾಕಿರಣ' ಯೋಜನೆ ಆರಂಭ: ಸಚಿವ ದಿನೇಶ್ ಗುಂಡೂರಾವ್

Last Updated : Oct 6, 2023, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.